Friday, June 1, 2018

ಶಿವ ಮಾಹಿಮ್ನ ಸ್ತೋತ್ರ

ಶಿವ ಮಾಹಿಮ್ನ ಸ್ತೋತ್ರ




ಪ್ರಸ್ತಾವನೆ :

ಶಿವ ಭಕ್ತರಲ್ಲಿ ಶಿವ ಮಹಿಮ್ನ ಸ್ತೋತ್ರವು ಅಪಾರ ಮನ್ನಣೆ ಹಾಗೂ ಜನಪ್ರಿಯತೆಯನ್ನು ಪಡೆದಿದೆ ಹಾಗೂ ಶಿವನಿಗೆ ಸಮರ್ಪಿಸುವ ಎಲ್ಲ ಸ್ತೋತ್ರಗಳ ಪೈಕಿ ಇದು ಸರ್ವಶ್ರೇಷ್ಟವಾದದ್ದೆಂದು ಪರಿಗಣಿಸಲಾಗಿದೆ. ಈ ಸ್ತೋತ್ರ ರಚನೆಗೆ ಸಂಬಂಧಿಸಿದ ಪೌರಾಣಿಕ ಹಿನ್ನೆಲೆಯ ಪ್ರಕಾರ :

ಚಿತ್ರರಥನೆಂಬ ರಾಜನೊಬ್ಬನು ತನ್ನ ಅರಮನೆಯ ಸಮೀಪ ಒಂದು ಸುಂದರ ಉದ್ಯಾನವನ್ನು ನಿರ್ಮಿಸಿದ್ದನು. ಈ ಉದ್ಯಾನವನದಲ್ಲಿ ರಾಜನು ಶಿವನಿಗೆ ಮಾತ್ರ ಪೂಜಿಸುವ ಸಲುವಾಗಿ ಸುಂದರ ಪುಷ್ಪಗಳನ್ನು ಸ್ವತಃ ಬೆಳೆಯುತ್ತಿದ್ದನು.
ಒಂದು ದಿನ ಇಂದ್ರಲೋಕದ ಪುಷ್ಪದಂತನೆಂಬ  ಗಂಧರ್ವನೊಬ್ಬನು ಈ ವನದ ಬಳಿಸಾಗುತ್ತಿದ್ದಾಗ ಅಲ್ಲಿದ್ದ ಸುಂದರವಾದ ಪುಷ್ಪಗಳನ್ನು ಕಂಡು ಅವುಗಳ ಸೌಂದರ್ಯಕ್ಕೆ ಮನಸೋತು ಅವುಗಳನ್ನು ಕಿತ್ತುಕೊಂಡು ಮಾಯವಾದನು. ಇದರಿಂದಾಗಿ ರಾಜ ಚಿತ್ರರಥನಿಗೆ ಶಿವನಿಗೆ ಅರ್ಪಿಸಲು ಪುಷ್ಪವು ದೊರಕಲಿಲ್ಲ. ಗಂಧರ್ವನು ಮಾಯಾವಿ ಹಾಗೂ ಎಲ್ಲೆಂದರಲ್ಲಿ ಅದೃಷ್ಯನಾಗುವ ಶಕ್ತಿಯುಳ್ಳವನಾದ್ದರಿಂದ ರಾಜನು ಎಷ್ಟೇ ಪ್ರಯತ್ನ ಪಟ್ಟರೂ ಕಳ್ಳನನ್ನು ಹಿಡಿಯಲಾಗಲಿಲ್ಲ.

ಕಡೆಗೆ ರಾಜನು ಶಿವನಿಗೆ ಪೂಜಿಸಲ್ಪಟ್ಟ ಹೂವುಗಳನ್ನು (ನಿರ್ಮಾಲ್ಯ) ಗಳನ್ನು ಹೂತೋಟದೆಲ್ಲೆಡೆ ಹರಡಿದನು. ಈ ನಿರ್ಮಾಲ್ಯದಲ್ಲಿ ಶಿವನಿಗರ್ಪಿತವಾದ ಪವಿತ್ರ  ಬಿಲ್ವ ಪತ್ರೆಗಳೂ ಇದ್ದವು. ಈ ಶಿವನಿರ್ಮಾಲ್ಯವು ಅತ್ಯಂತ ಶ್ರೇಷ್ಟ ಹಾಗೂ ಪವಿತ್ರವಾದದ್ದು ಮತ್ತು ಅಪಾರ ಮಹಿಮೆಯುಳ್ಳದ್ದು. ಇದನ್ನರಿಯದ ಪುಷ್ಪದಂತ ಗಂಧರ್ವನು ಯಥಾಪ್ರಕಾರ ತೋಟದಲ್ಲಿನ ಹೋವುಗಳನ್ನು ಕಿತ್ತು ನಿರ್ಮಾಲ್ಯದ ಮೇಲೆ ನಡೆದು ಹೋಗತೊಡಗಿದನು. ಇದರಿಂದ ಶಿವನ ಕೋಪಕ್ಕೆ ಗುರಿಯಾಗಿ ತನ್ನ ಅದೃಷ್ಯವಾಗುವ ದೈವೀ ಶಕ್ತಿಯನ್ನು ಕಳೆದುಕೊಂಡನು. ಪುಷ್ಪದಂತ ಗಂಧರ್ವನು ತನ್ನ ತಪ್ಪನ್ನು ಮನಗಂಡು ಪಶ್ಚಾತ್ತಾಪದಿಂದ ಕೂಡಿ ಶಿವನನ್ನು ಕುರಿತು ನನಾರೀತಿಯಲ್ಲಿ ಹಾಡಿ ಹೊಗಳಿ ತನ್ನ ತಪ್ಪನ್ನು ಮನ್ನಿಸೆಂದು ಶಿವನಲ್ಲಿ ಬೇಡಿಕೊಂಡನು. ಈ ಸ್ತೋತ್ರವನ್ನೆ "ಶಿವ ಮಹಿಮ್ನ ಸ್ತೋತ್ರ " ವೆಂದು ಪ್ರಸಿದ್ದವಾಯಿತುಶಿವನು ಈ ಸ್ತೋತ್ರದಿಂದ ಸುಪ್ರೀತನಾಗಿ ಪುಷ್ಪದಂತನಿಗೆ ಮರಳಿ ದೈವೀ ಶಕ್ತಿಯನ್ನು ಕರುಣಿಸಿದನು.

ಈ ಪೌರಾಣಿಕ ಕಥೆಗೆ ಪುರಾವೆಗಳುಂಟು. ಮೊದಲಿಗೆ ಸ್ತೋತ್ರದ ಕಡೆಗೆ ಇದನ್ನು ಪುಷ್ಪದಂತನೇ ರಚಿಸಿದವನೆಂಬುದಾಗಿ ಅವನ ನಾಮಧೇಯವು ಬಂದಿರುವುದು. ಹತ್ತೊಂಬತ್ತನೇ ಶತಮಾನದ ಮಹಾ ದಾರ್ಶನಿಕ ಶ್ರೀ ರಾಮಕೃಷ್ಣ ಪರಮಹಂಸರು ಈ ಸ್ತೋತ್ರದ ಕೆಲವೇ ಪದ್ಯಗಳನ್ನು ಪಠಿಸುತ್ತಲೇ ಸಮಾಧಿ ಸ್ಥಿತಿಯನ್ನು ತಲುಪಿದ್ದರು.

ಇಂಥಹ ಸ್ತೋತ್ರ ಪಠಣೆಯು ಎಲ್ಲರಿಗೂ ಮಂಗಳವನ್ನುಂಟುಮಾಡಲಿ.

|| ಓಂ ನಮಃ ಶಿವಾಯ ||
|| ಅಥ ಶ್ರೀ ಶಿವಮಹಿಮ್ನಸ್ತೋತ್ರಂ ||


ಶ್ಲೋಕ - 1 -  ಸಂಸ್ಕೃತದಲ್ಲಿ :

ಮಹಿಮ್ನಃ ಪಾರಂ ತೇ ಪರಮವಿದುಷೋ ಯದ್ಯಸದೃಶೀ
ಸ್ತುತಿಬ್ರಹ್ಮಾ ದೀನಾಮಪಿತದವಸನ್ನಾಸ್ತ್ವಯಿ ಗಿರಃ
ಅಥಾsವಾಚ್ಯ ಸರ್ವಃ ಸ್ವಮತಿ ಪರಿಣಾಮಾವಧಿ ಗೃಣನ್
ಮಮಾಪ್ಯೇಷ ಸ್ತೋತ್ರೇ ಹರನಿರಪವಾದಃ ಪರಿಕರಃ           
ಕನ್ನಡದಲ್ಲಿ :         

ಹರನಿನ್ನ ಮಹಿಮೆಯರಿಯದವರ ಸ್ತುತಿಯನುಚಿತವೆನೆ
ಬ್ರಹ್ಮಾದಿಗಳು ನಿನ್ನ ಸ್ತುತಿಸಿಹುದನುಚಿತವು
ಸ್ವಮತಿಗರಿದುದನೊರೆದವ ನಿರ್ದೋಷಿಯೆನಲು
ನಿನ್ನ ಸ್ತುತಿಸುವ ನನ್ನ ಈ ಯತ್ನವೂ ದೋಷರಹಿತವಲಾ

ವಿವರಣೆ :

, ಶಿವನೆ , ಸಮಸ್ತ ದುಃಖಗಳನ್ನು ದೂರಮಾಡುವವನೆ , ಅಜ್ಞಾನಿಯೊಬ್ಬನು ನಿನ್ನ ಶ್ರೇಷ್ಠತೆಯನ್ನು ಹಾಡಿ ಹೊಗಳಿದರೆ ಅದು ವ್ಯರ್ಥವೆಂದು ಭಾವಿಸಿದಲ್ಲಿ ಏನಾಶ್ಚರ್ಯ ! ಏಕೆಂದರೆ ಬ್ರಹ್ಮಾದಿ ದೇವತೆಗಳ ಹೊಗಳಿಕೆಗಳೂ ಸಹ ನಿನ್ನ ಸಂಪೂರ್ಣ ಶ್ರೇಷ್ಠತೆಯ ಆಳವನ್ನು ತಲುಪಲಾರದು. ಆದ್ದರಿಂದ ಅಲ್ಪಬುದ್ಧಿಯ ನಿನ್ನ ಭಕ್ತರ ಅದರಲ್ಲಿ ನನ್ನನ್ನೂ ಸೇರಿಸಿಕೊಂಡು ನಿನ್ನನ್ನು ಭಕ್ತಿಯಿಂದ ಪ್ರಾರ್ಥಿಸಿದರೆ ಅವರ ಪ್ರಯತ್ನಕ್ಕೆ ನೀನು ವಿಷೇಶವಾದ ಮನ್ನಣೆ ನೀಡಬೇಕು. ಹಾಗಿದ್ದಲ್ಲಿ ನಾನು ಇದರಿಂದ ಹೊರತಾಗಿಲ್ಲ. ಈ ರೀತಿಯಾಗಿ ಯೋಚಿಸುತ್ತಾ ನಾನು ನಿನ್ನನ್ನು ಕುರಿತು ಧ್ಯಾನಿಸಲು ಪ್ರಾರಂಭಿಸುವೆ.


ಶ್ಲೋಕ - 2 - ಸಂಸ್ಕೃತದಲ್ಲಿ :

ಅತೀತಃ ಪಂಥಾನಾಂ ತವ ಚ ಮಹಿಮಾ ವಾಙ್ಮನಸಯೋಃ
ಅತದ್ವ್ಯಾ ವೃತ್ತ್ಯಾ ಯಂ ಚಕಿತಮಭಿಧತ್ತೇ ಶ್ರುತಿರಪಿ
ಸ ಕಸ್ಯ ಸ್ತೋತವ್ಯಃ ಕತಿವಿಧಗುಣಃ ಕಸ್ಯ ವಿಷಯಃ
ಪದೇ ತ್ವರ್ವಾಚೀನೆ ಪತತಿ ನ ಮನಃ ಕಸ್ಯ ನ ವಚಃ  
ಕನ್ನಡದಲ್ಲಿ :         

ಪಂಥಗಳ್ಗತೀತ ನಿನ್ನಯ ಮಹಿಮೆ ಮಾತುಮನಕೆ
ಸಿಗದೆ ಶ್ರುತಿಗಳೂ ಬೆದರಿಹವದಂ ಬಣ್ಣಿಸಲು
ಸ್ತುತಿಸಲಾರಿಗೆ ಸಾಧ್ಯ ಎಷ್ಟು ಗುಣ ಬಲ್ಲರದಾರು
ಬಳಿಕದಾ ರೂಪದೊಳಗೆ ಹೊಗವಾರ ಮಾತು ಮನ


ವಿವರಣೆ :

, ಮಹಾದೇವನೆ, ನಿನ್ನ ಘನತೆಯು ಎಷ್ಟು ಅಗಾಧದ್ದೆಂದರೆ ಅದನ್ನು ಮನಸ್ಸು ಮತ್ತು ಮಾತುಗಳಿಂದ ತಲುಪಲು ಅಸಾಧ್ಯ. ವೇದಗಳೂ ಸಹ ಆಶ್ಚರ್ಯಪಟ್ಟು ನಿನ್ನ ಮಹಿಮೆಯನ್ನು ವರ್ಣಿಸುವಾಗ ಕೇವಲ "ನೇತಿ", "ನೇತಿಎಂಬುದಾಗಿ ಉದ್ಗರಿಸುತ್ತಾ ಖಚಿತಪಡಿಸಿವೆ. ನಿನ್ನ ಈ ಅಪಾರವಾದ ಮಹಿಮೆಯನ್ನು ಯಾರು ಹೊಗಳಲು ಸಾಧ್ಯ ? ಈ ಅಗಾಧವಾದ ಮಹಿಮೆಯು ಎಷ್ಟು ಗುಣಗಳಿಂದ ಕೂಡಿವೆ ? ಯಾರ ವಿವರಣೆಯದ್ದಿರಬಹುದು ? ಹಾಗಿದ್ದಾಗ್ಯೂ ಯಾರ ಮನಸ್ಸು ಹಾಗೂ ಮಾತುಗಳು ನಿನ್ನ ಸಗುಣ ರೂಪಕ್ಕೆ ಸಂಬಂಧಿಸಿರುವುದಿಲ್ಲ ?


ಶ್ಲೋಕ - 3 - ಸಂಸ್ಕೃತದಲ್ಲಿ :

ತ್ರಯೀ ಸಾಂಖ್ಯಂ ಯೋಗಃ ಪಶುಪತಿಮತಂ ವೈಷ್ಣವಮಿತಿ
ಪ್ರಭಿನ್ನೇ ಪ್ರಸ್ಥಾನೇ ಪರಮಿದಮದಃ ಪಥ್ಯಮಿತಿ ಚ
ರುಚೀನಾಂ ವೈಚಿತ್ರ್ಯಾ ದೃಜುಕುಟಿಲ ನಾನಾ ಪಥಜುಷಾಂ
ನೃಣಾಮೇಕೋ ಗಮ್ಯಸ್ತ್ವಮಸಿ ಪಾಯಸಾಮರ್ಣವ ಇವ              
ಕನ್ನಡದಲ್ಲಿ :         

ವೈದಿಕ ಸಾಂಖ್ಯ ಯೋಗವು ಪಾಶುಪತ ವೈಷ್ಣವಮೆಂದು
ಮಾರ್ಗ ಬೇರಾದರೂ ರುಚಿ ವೈವಿಧ್ಯದಿಂದಲಿದು ಶ್ರೇಷ್ಠ -
ವಿದು ಹಿತವೆಂದು ನೇರ ವಕ್ರವಹ ನಾನಾ ಪಥದಿ
ನಡೆವ ನರರಿಗೆ ನದಿಗೆ ಸಾಗರದೊಲು ನೀನೆ ಗಮ್ಯ



ವಿವರಣೆ :

ಮೂರು ವೇದಗಳು, ಸಾಂಖ್ಯ, ಯೋಗ, ಪಶುಪತ-ಮತ ವೈಷ್ಣವ - ಮತ ಇತ್ಯಾದಿಗಳು ಪರಮ ಸತ್ಯವನ್ನು ತಲುಪಲು ಕೇವಲ ವಿವಿಧ ಮಾರ್ಗಗಳಷ್ಟೆ ಮತ್ತು ಜನಗಳು ಅವರವರ ಯೋಗ್ಯತೆಯ ಮೇರೆಗೆ, ತಮಗೆ ಯಾವ ಮಾರ್ಗವು ಉತ್ತಮವಾದ ಹಾಗೂ ಅರ್ಹವಾದದ್ದೆಂದು ಅನಿಸುತ್ತದೆಯೋ ಅದನ್ನೇ ಆರಿಸಿಕೊಳ್ಳುವರು. ಆದರೆ ಹೇಗೆ ಸಮುದ್ರವು ಎಲ್ಲ ನದಿಗಳಿಗೂ ಕೊನೆಯ ವಿಶ್ರಾಂತಿ ಸ್ಥಳವೋ ಹಾಗೇ ಎಲ್ಲರಿಗೂ ಅವರು ಯಾವುದೇ ಮಾರ್ಗವನ್ನು ಆರಿಸಿಕೊಂಡರೂ ಹಾಗೂ ಅದು ನೇರ ಮಾರ್ಗವಿರಲಿ, ಅಂಕುಡೊಂಕಾದ ಮಾರ್ಗವಿರಲಿ, ಕಟ್ಟಕಡೆಗೆ ತಲುಪುವ ಸ್ಥಳವು ನೀನೇ ಓ, ದೇವ ದೇವ ಮಹಾದೇವನೆ !

ಶ್ಲೋಕ- 4 -  ಸಂಸ್ಕೃತದಲ್ಲಿ :

ಮಹೋಕ್ಷಃ ಖಟ್ವಾಂಗಂ ಪರಶುರಜಿನಂ ಭಸ್ಮ ಫಣಿನವಿಃ
ಕಪಾಲಂ ಚೇತೀಯತ್ತವ ವರದ ತಂತ್ರೋಪಕರಣಂ
ಸುರಾಸ್ತಾಂ ತಾಮೃದ್ಧಿಂ ದಧತಿ ತು ಭವದ್ಭ್ರೂಪ್ರಣಿಹಿತಾಂ
ನ ಹಿ ಸ್ವಾತ್ಮಾರಾಮಂ ವಿಷಯಮೃಗತೃಷ್ಣಾ ಭ್ರಮಯತಿ              
ಕನ್ನಡದಲ್ಲಿ :         

ಹೇರೆತ್ತು ಬುರುಡೆಗೋಲ್ ಹುಲಿದೊಗಲು ಹಾವ್ಗಳು ಬೂದಿ
ಕಪಾಲವೆಂಬಿವೆ ನಿನ್ನ ವರದೋಪಕರಣಗಳು
ನಿನ್ನ ಭ್ರೂಚಲನೆಯಿಂದ ಪಡೆವರು ಸುರರು ಐಶ್ವರ್ಯವನು
ಆತ್ಮಾರಾಮನನು ಭ್ರಾಂತಿಗೊಳಿಪುದೆ ಭೋಗಮೃಗತೃಷ್ಣೆ

ವಿವರಣೆ :

ಹೇ, ಸರ್ವರಿಗೂ ವರದಾತನೆ ! ನಂದಿ, ಮಂಚದ ಭಾಗಗಳು, ಉಳಿ, ಗಜಚರ್ಮಬೂದಿ, ಸರ್ಪ, ಇವೇ ನಿನ್ನ ಗೃಹದಲ್ಲಿರುವ ಪದಾರ್ಥಗಳು. ಹೀಗಿದ್ದರೂ ದೇವಾನುದೇವತೆಗಳು ತಮ್ಮ ಭೋಗ ಭಾಗ್ಯಗಳನ್ನು ಕೇವಲ ನಿನ್ನ ಹುಬ್ಬುಗಳ ಚಲನೆ ಮಾತ್ರದಿಂದ ಪಡೆಯುವರು. ನೈಜ ವಿಷಯವೆಂದರೆ ಪ್ರಾಪಂಚಿಕ ಸಂಪತ್ತಿಗಾಗಿ ದೋಷಪೂರಿತ ಆಸೆಗಳು ಸದಾ ನಿನ್ನಂಥ ಯೋಗಿಯಲ್ಲಿ ತಲ್ಲೀನನಾಗಿರುವವನಿಗೆ ಮೋಸಮಾಡದು ಹಾಗೂ ಹಾದಿತಪ್ಪಿಸದು.

ಶ್ಲೋಕ  - 5 - ಸಂಸ್ಕೃತದಲ್ಲಿ :

ತವೈಶ್ವರ್ಯಂ ಯತ್ನಾದ್ಯದುಪರಿ ವಿರಿಂಚರ್ಹರಿರಧಃ
ಪರಿಚ್ಛೇತ್ತುಂ ಯಾತಾವನಲಮನಲಸ್ಕಂಧವಪುಷಃ
ತತೋ ಭಕ್ತಿಶ್ರದ್ಧಾ ಭರಗುರುಗೃಣದ್ಭ್ಯಾ ಂ ಗಿರಿಶಯತ್
ಸ್ವಯಂ ತಸ್ಥೇ ತಾಭ್ಯಾಂ ತವ ಕಿಮನುವೃತ್ತಿರ್ನ ಫಲತಿ    
ಕನ್ನಡದಲ್ಲಿ :          

ಮೇಲೆ ಬ್ರಹ್ಮನು ಹರಿ ಕೆಳಗೆ ನಿನ್ನ ಶಕ್ತಿಯಳೆವ -
ಯತ್ನದಿ ಸೋತು ಮರಳಿ ಭಕ್ತಿಶ್ರದ್ಧೆಗಳ ತುಂಬಿ
ಸ್ತುತಿಸೆ ತೋರಿದೆ ನಿನ್ನ ತೇಜೋರೂಪ ನೀನಾಗಿ
ಹರ ನಿನ್ನ ಪೂಜೆಯದು ಫಲಿಸದೇನು


ವಿವರಣೆ :

ಬ್ರಹ್ಮ ಹಾಗೂ ವಿಷ್ಣುವು ನಿನ್ನಲ್ಲಿನ ಸಂಪತ್ತನ್ನು ಅಂದರೆ ಮಹಿಮೆಯನ್ನು ಅಳೆಯಲು ಇಚ್ಚಿಸಿದರು. ಆಗ ನೀನು ನಿನ್ನ ಇಡೀ ಶರೀರವನ್ನು ಬೆಂಕಿಯ ರೂಪ ತಾಳಿ ಭೂಮ್ಯಾಕಾಶಗಳನ್ನು ಮೀರಿ ಬೆಳೆದೆ. ಬ್ರಹ್ಮನು ಹಂಸರೂಪವನ್ನು ಧರಿಸಿ ನಿನ್ನ ಶಿರವನ್ನು ದರ್ಶಿಸಲು ಮೇಲಕ್ಕೆ ಹಾರಿದರೆ ವಿಷ್ಣುವು ಹಂದಿ ರೂಪವನ್ನು ಧರಿಸಿ ನಿನ್ನ ಪಾದಗಳನ್ನು ದರ್ಶಿಸಲು ಕೆಳಕ್ಕೆ ಭೂಮಿಯನ್ನು ಕೊರೆದುಕೊಂಡು ಹೊರಟನು. ಯಾರೊಬ್ಬರಿಗೂ ನಿನ್ನ ಪಾದವನ್ನಾಗಲಿ ಅಥವ ಶಿರವನ್ನಾಗಲಿ ದರ್ಶಿಸಲು ಸಾಧ್ಯವಾಗಲಿಲ್ಲ.  ( ವಿಷ್ಣುವು ತನಗೆ ಶಿವನ ಪಾದವನ್ನು ದರ್ಶಿಸಲು ಅಸಾಧ್ಯವೆಂದು ನಿಜವನ್ನು ಒಪ್ಪಿಕೊಂಡರೆ ಬ್ರಹ್ಮನು ತಾನು ಶಿವನ ಶಿರವನ್ನು ದರ್ಶಿಸಿದನೆಂದು ಸುಳ್ಳು ಹೇಳಿ ಅದಕ್ಕೆ ಪುರಾವೆಯೆಂದು ಶಿವನ ಶಿರದಿಂದ ಜಾರಿ ಕೆಳಗೆ ಬರುತ್ತಿದ್ದ ಕೇದಗೆ ಪುಷ್ಪವನ್ನು ಸಾಕ್ಷಿ ನುಡಿಯುವಂತೆ ಅದನ್ನು ಒಪ್ಪಿಸಿದ್ದನು. ಇದನ್ನರಿತ ಶಿವನು ಬ್ರಹ್ಮನ ಐದನೇ ಶಿರವನ್ನು ತುಂಡರಿಸಿ ಅಂದಿನಿಂದ ಕೇದಗೆ ಹೂವು ತನ್ನ ಪೂಜೆಗೆ ನಿಷಿದ್ದವೆಂದು ಸಾರಿದನು).
ಕಡೆಗೆ ಇಬ್ಬರೂ ಭಕ್ತಿ ಮತ್ತು ಶ್ರದ್ಧೆಯಿಂದ ನಿನ್ನನ್ನು ಹೊಗಳಿಕೆಯ ಮೂಲಕ ಪ್ರಾರ್ಥಿಸಲು ನೀನು ನಿನ್ನ ನಿಜರೂಪದೊಂದಿಗೆ ಅವರೆದುರಿಗೆ ಪ್ರತ್ಯಕ್ಷನಾದೆ. , ಪರ್ವತ ವಾಸಿಯೇ ! ನಿನ್ನ ಹಾದಿಯನ್ನು ಕ್ರಮಿಸುವುದರಿಂದ ಸದಾ ಫಲ ನೀಡುವುದಿಲ್ಲವೇ ?

ಶ್ಲೋಕ  - 6 - ಸಂಸ್ಕೃತದಲ್ಲಿ :

ಯದೃದ್ಧಿಂ ಸುತ್ರಾಮ್ನೋ ವರದ ಪರಮೋಚ್ಚೈರಪಿ ಸತೀಂ
ಅಧಶ್ಚಕ್ರೇ ಬಾಣಃ ಪರಿಜನವಿಧೇಯತ್ರಿಭುವನಃ
ನ ತಚ್ಚಿತ್ರಂ ತಸ್ಮಿನ್ ವರಿವಸಿತರಿ ತ್ವಚ್ಚರಣಯೋಃ
ನ ಕಸ್ಯಾಪ್ಯುನ್ನತ್ಯೈ ಭವತಿ ಶಿರಸಸ್ತ್ವಯ್ಯವನತಿಃ           
ಕನ್ನಡದಲ್ಲಿ :         

ಪರಿಜನರ ನೆರವಿಂದ ವರದನೆ ಮೂಲೋಕವನು
ಗೆಲಿದ ಬಾಣ ಕೀಳ್ಗೈದನಿಂದ್ರನ ಸಿರಿಯನೆಂಬುದೇನಚ್ಚರಿಯೆ
ಅವ ನಿನ್ನಡಿಗಳಾರಾಧಕನದರಿಂದ
ಹರ ನಿನಗೆ ತಲೆಬಾಗುವುದಾವುನ್ನತಿಗೆ ಕಾರಣವಾಗದೈ

ವಿವರಣೆ :

! ಸರ್ವರಿಗೂ ವರದಾತನೆ ! ಬಾಣಾಸುರನು ದೇವಾನು ದೇವತೆಗಳೂ ತಮ್ಮ ಸಹಚರರೊಂದಿಗೆ ಹಾಗೂ ಎಲ್ಲ ತ್ರಿಲೋಕವಾಸಿಗಳೂ ತನ್ನ ಸೇವೆಗೈಯುವಂತೆ ಮಾಡಿ ಹಾಗೂ ಇಂದ್ರನ ಅಪಾರವಾದ ಸಂಪತ್ತನ್ನೂ ಸಹ ಅವನು ತೃಣಸಮಾನವಾಗಿ ಪರಿಗಣಿಸಿದ್ದನು. ಅದು ಆಶ್ಚರ್ಯವಾದದ್ದೇನಲ್ಲ, ಏಕೆಂದರೆ ಅವನು ನಿನ್ನ ಪಾದವನ್ನಾಶ್ರಯಿಸಿದ್ದನು. ನಿನ್ನನ್ನಾಶ್ರಯಿಸಿದ ಯಾರು ತಾನೇ ಉದ್ಧಾರವಾಗದೇ ಇರಲು ಸಾಧ್ಯ ?



ಶ್ಲೋಕ - 7 -  ಸಂಸ್ಕೃತದಲ್ಲಿ :

ಅಕಾಂಡ ಬ್ರಹ್ಮಾಂಡ ಕ್ಷಯಚಕಿತ ದೇವಾಸುರಕೃಪಾ
ವಿಧೇಯಸ್ಯಾಸೀದ್ಯಸ್ತ್ರಿನಯನ ವಿಷಂ ಸಂಹೃತವತಃ
ಸ ಕಲ್ಮಾಷಃ ಕಂಠೇ ತವ ನ ಕುರುತೇ ನ ಶ್ರಿಯಮಹೋ
ವಿಕಾರೋsಪಿ ಶ್ಲಾಘ್ಯೋ ಭುವನ ಭಯಭಂಗವ್ಯಸನಿನಃ              
ಕನ್ನಡದಲ್ಲಿ :         

ವಿಶ್ವನಾಶ ಭಯದಲಿ ಬೆಚ್ಚಿದ ದೇವಾಸುರರೊಳು
ಕೃಪೆದೋರಿ ಮುಕ್ಕಣ್ಣ ನೀ ವಿಷವ ಕೊರಳಲಿರಿಸಿದೆ
ಕಂಠದಾ ನೀಲ ಕಲೆಯೂ ನಿನಗೆ ಶೋಭೆಯಹುದು ಹೋ
ಭೂಭಯನಿವಾರಿಪನಲ್ಲಿ ವಿಕೃತಿಯೂ ಶ್ಲಾಘ್ಯವಲ್ತೇ


ವಿವರಣೆ :

ಅಮೃತವನ್ನು ಪಡೆಯಲು ದೇವಾಸುರರು ಸಮುದ್ರಮಥನವನ್ನು ಪ್ರಾರಂಭಿಸಿದಾಗ ಸಮುದ್ರದಿಂದ ಅನೇಕ ವಸ್ತುಗಳು ಹೊರಬರತೊಡಗಿದವು. ಒಂದು ಸಂದರ್ಭದಲ್ಲಿ ಹೊರಬಂದ ಕಾಲಕೂಟ ವಿಷವು ಎಲ್ಲವನ್ನೂ ನಾಶಮಾಡುವ ಭಯವನ್ನು ಉಂಟುಮಾಡಿತು. ದೇವಾಸುರರಿಗೆ ಈ ವಿಷವು ಇಡೀ ವಿಶ್ವವನ್ನೇ ನಾಶಮಾಡುವ ಪರಿಸ್ಥಿತಿಯನ್ನು ಮನಗಂಡು ಸ್ಥಂಭೀಭೂತರಾದರು. ಆ ಸಂದರ್ಭದಲ್ಲಿ ಓ ಮುಕ್ಕಣ್ಣನೇ ! ಸದಾ ದಯಾಸಾಗರನೆ ! ಹಾಗೂ ವಿಶ್ವದಲ್ಲಿನ ಸಮಸ್ತ ಭಯವನ್ನು ದೂರಮಾಡುವವನಾದ ನೀನು, ಆ ಕಾಲಕೂಟ ವಿಷವನ್ನು ಸೇವಿಸಿದೆ. (ಆ ಸಂದರ್ಭದಲ್ಲಿ ಪಾರ್ವತೀ ದೇವಿಯು ವಿಷವು ಸಂಪೂರ್ಣವಾಗಿ ನಿನ್ನ ದೇಹವನ್ನಾಕ್ರಮಿಸುವುದೆಂದು ಭಯ ಭೀತಳಾಗಿ ನಿನ್ನ ಕುತ್ತಿಗೆಯನ್ನು ಅದುಮಿ ಹಿಡಿದುಕೊಂಡಳು. ಆಗ ವಿಷವು ನಿನ್ನ ಗಂಟಲಿನಲ್ಲೇ ಹೆಪ್ಪುಗಟ್ಟಿ ನಿನ್ನ ಗಂಟಲು ನೀಲಿ ಬಣ್ಣಕ್ಕೆ ತಿರುಗಿತು. ಅಂದಿನಿಂದ ನೀನು ನೀಲಕಂಠನಾದೆ ).
ಆಶ್ಚರ್ಯದ ವಿಷಯವೆಂದರೆ ನೀಲಿ ಬಣ್ಣಕ್ಕೆ ತಿರುಗಿದ ವಿಷದ ಕಲೆಯು ಒಂದು ವಿಧದ ಕುರೂಪತೆಯನ್ನುಂಟು ಮಾಡಿದರೂ ಅದು ನಿನ್ನ ವೈಭವಕ್ಕೆ ಹಾಗೂ ಗಾಂಭೀರ್ಯಕ್ಕೆ ಮೆರಗನ್ನೇ ನೀಡಿದೆ.

ಶ್ಲೋಕ - 8 - ಸಂಸ್ಕೃತದಲ್ಲಿ :

ಮಹೀ ಪಾದಾಘಾತಾದ್ವ್ರಜತಿ ಸಹಸಾ ಸಂಶಯಪದಂ
ಪದಂ ವಿಷ್ಣೋರ್ಭ್ರಾಮ್ಯದ್ಭುಜ ಪರಿಘ ರುಗ್ಣಗ್ರಹಗಣಮ್
ಮುಹುರ್ದ್ಯೌರ್ದ್ರೌಸ್ಥ್ಯ ಂ ಯಾತ್ಯನಿಭೃತ ಜಟಾತಾಡಿತತಟಾ
ಜಗದ್ರಕ್ಷಾಯೈ  ತ್ವಂ ನಟಸಿ ನನು ವಾಮೈವ ವಿಭುತಾ              
ಕನ್ನಡದಲ್ಲಿ :         

ವಿಶ್ವರಕ್ಷೆಗೆ ನೀನು ನರ್ತಿಸಲು ತಲ್ಲಣಿಸುವುದು ಭೂಮಿ
ಪಾದಾಘಾತಕೆ ತಿರುಗುತಿಹ ಭುಜ ಪರಿಘಗಳಿಂದ
ಗ್ರಹಗಣ ಕ್ಲೇಷವಡೆವುದು ಬಿಚ್ಚಿದ ಜಡೆಯು ಹೊಡೆಯೆ
ದುಸ್ಥಿಯಹುದು ಸಗ್ಗಕೆ ಕಠಿನವೈ ನಿನ್ನೊಡೆತನವು


ವಿವರಣೆ :

ಹೇ ದೇವನೆ ! ವಿಶ್ವ ರಕ್ಷಣೆಗಾಗಿ ನೀನು ತಾಂಡವ ನೃತ್ಯಗೈದೆ, ಆದರೆ ಆಶ್ಚರ್ಯವೇನೆಂದರೆ ನಿನ್ನ ವೈಭವ ನೃತ್ಯವು ಜಗತ್ತಿನ ಮೇಲೆ ಪ್ರತೀಕೂಲ ಪ್ರಭಾವವನ್ನು ಬೀರಿ ಇಡೀ ಭೂಮಿಯು ಇದ್ದಕ್ಕಿದ್ದಂತೆ ನಿನ್ನ ಪಾದಗಳಡಿಯಲ್ಲಿ ಸಿಲುಕಿ ಇನ್ನೇನು ವಿಶ್ವದ ಅಂತ್ಯವು ಸಮೀಪಿಸುತ್ತಿದೆಯೆಂಬ ಸೂಚನೆಗಳು ಹೊರಹೊಮ್ಮತೊಡಗಿದವು, ಅಲ್ಲದೇ ವಿಷ್ಣುವಿನ ಲೋಕವೂ ಸಹ ನಿನ್ನ ಗದೆಯಂತಿರುವ ತೋಳುಗಳು ಗ್ರಹಗಳನ್ನು ಬಡಿಯತೊಡಗಿದಾಗ ಅಲುಗಾಡ ತೊಡಗಿತು. ದೇವಲೋಕವೂ ಸಹಾ ತನ್ನ ದಂಡೆಯನ್ನು ನಿನ್ನ ಕ್ಷೋಭೆಗೊಳಗಾದ ಜಟೆಯು ಬಡಿದಾಗ ಶೋಚನೀಯ ಸ್ಥಿತಿಯನ್ನು ಅನುಭವಿಸತೊಡಗಿತು.

ಶ್ಲೋಕ - 9 - ಸಂಸ್ಕೃತದಲ್ಲಿ :

ವಿಯದ್ವ್ಯಾಪೀ  ತಾರಾಗಣಗುಣಿತ ಫೇನೋದ್ಗಮರುಚಿಃ
ಪ್ರವಾಹೋ ವಾರಾಂ ಯಃ ಪೃಷತಲಘುದೃಷ್ಟಃ ಶಿರಸಿ ತೇ
ಜಗದ್ವೀಪಾಕಾರಂ ಜಲಧಿವಲಯಂ ತೇನ ಕೃತಮಿತಿ
ಅನೇನೈವೋನ್ನೇಯಂ ಧೃತಮಹಿಮಾ ದಿವ್ಯಂತವ ವಪುಃ              
ಕನ್ನಡದಲ್ಲಿ :         

ಜಲಧಿವಲಯದ ಜಗವನೆ ದ್ವೀಪವೆನಿಸುತ
ಗಗನವ ತುಂಬಿ ತಾರಾ ಗಣದಿಂದ ಹೆಚ್ಚಿದ ನೊರೆ
ಕಾಂತಿಯ ಜಲಪ್ರವಾಹ ತವ ಶಿರದೊಳು ಹನಿಗಿಂತ
ಕಿರುದೆನಿಪುದೆನಲು ಊಹಿಸಲಹುದು ನಿನ್ನ ರೂಪವನು


ವಿವರಣೆ :

ದೈವೀ ನದಿಯು ಆಕಾಶದೆಲ್ಲೆಡೆ ವಿಸ್ತಾರವಾಗಿ ಹರಿದು ತನ್ನ ಸೊಬಗನ್ನು ನದಿಯ ನೊರೆಯಿಂದ ಪ್ರತಿಫಲಿಸುವ  ನಕ್ಷತ್ರ ಪುಂಜಗಳಂತೆ ಹೆಚ್ಚಿಸಿಕೊಂಡಿದೆ. ( ಈ ದೈವೀ ನದಿಯನ್ನು ರಾಜಾ ಭಗೀರಥನು ಶಿವನನ್ನು ಆರಾಧಿಸಿ ಧರೆಗೆ ತಂದನು ಹಾಗೂ ಇದೇ ಗಂಗಾ ನದಿ). ಈ ನದಿಯು ಭೂಮಿಯಲ್ಲಿ ಅನೇಕ ದ್ವೀಪಗಳನ್ನೂ , ನೀರಿನ ಸುಳಿಗಳನ್ನೂ , ಸೃಷ್ಟಿಸಿತು. ಈ ಪ್ರಕ್ಷುಬ್ದವಾದ ನದಿಯಾದರೋ ನಿನ್ನ ಶಿರದಲ್ಲಿ ಕೇವಲ ಒಂದು ಹನಿ ನೀರಿನಂತೆ ಕಾಣುತ್ತದೆ. ಇದಿಷ್ಟೇ ಸಾಕು ನಿನ್ನ ಶರೀರವು ಅಪಾರವಾದ ದೈವೀಕ ಹಾಗೂ ಅತ್ಯುನ್ನತವಾದದ್ದು ಎಂಬುದನ್ನು ಮನಗಾಣಲು.


ಶ್ಲೋಕ  - 10 - ಸಂಸ್ಕೃತದಲ್ಲಿ :

ಹರಿಸ್ತೇ  ಸಾಹಸ್ರಂ ಕಮಲಬಲಿಮಾಧಾಯ ಪದಯೋಃ
ಯದೇಕೋನೇ ತಸ್ಮಿನ್ನಿಜಮುದಹರನ್ನೇತ್ರಕಮಲಮ್
ಗತೋ ಭಕ್ತ್ಯುದ್ರೇಕಃ ಪರಿಣತಿಮಸೌ ಚಕ್ರವಪುಷಾ
ತ್ರಯಾಣಾಂ ರಕ್ಷಾಯೈ  ತ್ರಿಪುರಹರ ಜಾಗರ್ತಿ ಜಗತಾಮ್             
ಕನ್ನಡದಲ್ಲಿ :         

ಹರಿ ನಿನ್ನ ಪಾದವ ಸಾಸಿರ ಪದ್ಮದಿಂ ಪೂಜಿಪೊಡೆ
ಪೂವೊಂದು ಕೊರೆಯಾಗೆ ತನ್ನ ಕಣ್ಣನೆ ಕಿತ್ತರ್ಪಿಸಿದ
ಆ ಭಕ್ತಿಯತಿಶಯವು ಚಕ್ರರೂಪವನು ತಳೆದು
ತ್ರಿಪುರಹರ ! ಮೂಲೋಕ ಪೊರೆಯುತಿಹುದು ಸತತ


ವಿವರಣೆ :

ವಿಷ್ಣುವು ಒಮ್ಮೆ ಸಹಸ್ರ ಕಮಲ ಪುಷ್ಪಗಳನ್ನು ಸಂಗ್ರಹಿಸಿ ಅವುಗಳನ್ನು ಒಂದೊಂದಾಗಿ ನಿನ್ನ ಪಾದಗಳಲ್ಲಿ ಅರ್ಪಿಸತೊಡಗಿದನು. 999 ಪುಷ್ಪಗಳನ್ನು ನಿನ್ನ ಪಾದಗಳಲ್ಲಿ ಅರ್ಪಿಸಿದ ನಂತರ ವಿಷ್ಣುವಿಗೆ ಕಡೆಯ ಪುಷ್ಪವು ಕಾಣೆಯಾದದ್ದು ಅರಿವಿಗೆ ಬಂದಿತು. ಆಗ ಮಹಾವಿಷ್ಣುವು ಒಂದು ಕ್ಷಣವೂ ಯೋಚಿಸದೇ ತನ್ನ ಒಂದು ಕಣ್ಣನ್ನೇ ಕಿತ್ತು ಅದನ್ನೆ ಕಮಲ ಪುಷ್ಪವೆಂದು ನಿನಗೆ ಅರ್ಪಿಸಿದನು. ಈ ರೀತಿಯ ಮಹಾವಿಷ್ಣುವಿನ ಅನುಕರಣೀಯವಾದ ಅತ್ಯುನ್ನತ ಮಟ್ಟದ ನಿನ್ನಲ್ಲಿನ ಅಪಾರ ಭಕ್ತಿಯು ಒಂದು ದೈವೀ ಚಕ್ರವಾಗಿ ( ಸುದರ್ಶನ ಚಕ್ರ ) ವಿಷ್ಣುವಿನ ಹಸ್ತವನ್ನು ಅಲಂಕರಿಸಿತು ಹಾಗೂ ಅದನ್ನು ವಿಷ್ಣುವು ಲೋಕರಕ್ಷಣೆಗೆ ಉಪಯೋಗಿಸ ತೊಡಗಿದ.

ಶ್ಲೋಕ - 11 -  ಸಂಸ್ಕೃತದಲ್ಲಿ :

ಶ್ಮಶಾನೇಷ್ವಾಕ್ರೀಡಾ ಸ್ಮರಹರ ಪಿಶಾಚಾಸ್ಸಹಚರಾಃ  
ಚಿತಾ ಭಸ್ಮಾಲೇಪಃ ಸ್ರಗಪಿ ನೃಕರೋಟೀ ಪರಿಕರಃ
ಅಮಂಗಲ್ಯಂ ಶೀಲಂ ತವಭವತು ನಾಮೈವಮಖಿಲಂ
ತಥಾsಪಿ ಸ್ಮತ ೄಣಾಂ ವರದ ಪರಮಂ ಮಂಗಲಮಸಿ
ಕನ್ನಡದಲ್ಲಿ :         

ಸುಡುಗಾಡೊಳಾಟ ಸ್ಮರಹರನೆ ಪಿಶಾಚಿಗಳೊಡನಾಟ
ಚಿತೆಯ ಬೂದಿಯ ಲೇಪ ನರರ ಬುರುಡೆಯ ಹಾರ
ಹೀಗೆ ನಿನ್ನ ಚರ್ಯರ್ಯೆಗಳೆಲ್ಲ ಅಮಂಗಲವೆ ಎನಿಸಿದರೂ
ವರದನೆ ನಿನ್ನ ನೆನೆವರಿಗೆ ನೀ ಪರಮ ಮಂಗಳನು


ವಿವರಣೆ :

ಹೇ ! ದೇವ ದೇವ, ಮಹಾದೇವನೆ ! ಕಾಮ ನಾಶಕನೆ ! ನೀನು ಉರಿಯುತ್ತಿರುವ ಚಿತಾ ಘಟ್ಟದಲ್ಲಿ ಕ್ರೀಡೋನ್ಮತ್ತನಾಗಿರುವೆ , ನಿನ್ನ ಅನುಯಾಯಿ ಗಳಾದರೋ ಭೂತ ಗಣಗಳು. ನಿನ್ನ ಶರೀರವೋ ಸದಾ ಚಿತಾಭಸ್ಮದಿಂದ ಲೇಪಿತವಾಗಿರುವುದು. ನಿನ್ನ ಕೊರಳಿನಲ್ಲಿ ರಾರಾಜಿಸುತ್ತಿರುವುದು ಮಾನವ ತಲೆಬುರುಡೆಗಳ ಹಾರ. ಹೀಗೆ ಪ್ರತಿಯೊಂದೂ ಕೂಡಾ ಅಶುಭವನ್ನು ಸೂಚಿಸುವಂತದ್ದು. ಇಷ್ಟೆಲ್ಲ ಇದ್ದರೂ ಚಿಂತೆಯಿಲ್ಲ, ಏಕೆಂದರೆ ಇಷ್ಟೆಲ್ಲ ವಿಚಿತ್ರಗಳ ನಡುವೆಯೂ ನೀನು, ಯಾರು ನಿನ್ನನ್ನು ಭಕ್ತಿಯಿಂದ ಭಜಿಸುತ್ತಾರೋ ಅವರಿಗೆ ಬೇಗನೆ ಮಂಗಳಕರವಾದದ್ದನ್ನೆ ಕರುಣಿಸುತ್ತೀಯೆ.  (ಶಂಕರ ಭಗವತ್ಪಾದರು ತಮ್ಮ ದೇವೀ ಅಪರಾಧ ಕ್ಷಮಾಪಣಾ ಸ್ತೋತ್ರದಲ್ಲಿ - "ಶಿವನ  ಬಳಿ ಈ ವಿಧದ ಅಮಂಗಳಕರವಾದ ವಸ್ತುಗಳಿದ್ದಾಗ್ಯೂ ಅವನಿಗೆ ಭಕ್ತರು ಬೇಡಿದ್ದನ್ನು ಕೂಡಲೇ ಕರುಣಿಸುವ ಶಕ್ತಿಯು ಬಂದಿದ್ದು ಕೇವಲ ಅವನು ಪರ್ವತರಾಜಕುಮಾರಿ ಪಾರ್ವತಿ ದೇವಿಯನ್ನು ವಿವಾಹವಾಗಿದ್ದಕ್ಕೆ ಮಾತ್ರ" ಎಂಬುದಾಗಿ ವಿವರಿಸಿದ್ದಾರೆ. ಆದರೆ ಪುಷ್ಪದಂತನು ಈ ಶಿವ ಮಹಿಮ್ನ ಸ್ತೋತ್ರದಲ್ಲಿ - ಪಾರ್ವತಿಯು ಶಿವನು ತನ್ನ ಸೌಂದರ್ಯಕ್ಕೆ ಆಕರ್ಷಿತನಾಗಿ ತನ್ನ ಅರ್ಧ ಶರೀರವನ್ನೇ ಅವಳ ಶರೀರದೊಂದಿಗೆ ಹಂಚಿಕೊಂಡನೆಂಬುದಾಗಿ ಭಾವಿಸಿದರೆ ಅದು ಅವಳ ಮುಗ್ಧತೆಯನ್ನು ತೋರಿಸುತ್ತದೆ ಎಂಬುದಾಗಿ ಉದ್ಗರಿಸಿರುವನು. ಈ ವಿಧದ ವೈರುಧ್ಯವಾದ ಚಿಂತನೆಗಳು ಉಂಟಾಗುವುದು ಯಾವಾಗ ಎಂದರೆ ಸ್ತೋತ್ರ ರಚನಾಕಾರನು ಸಾಮಾನ್ಯವಾಗಿ ಒಬ್ಬ ದೇವನನ್ನು ಶ್ಲಾಘಿಸಲು ಉದ್ದೇಶಿಸಿದಾಗ ಉಳಿದ ದೇವರುಗಳನ್ನು ಸ್ವಲ್ಪ ಮಟ್ಟಿಗೆ ಕೆಳಗಿಳಿಸುವುದು ವಾಡಿಕೆ ).

ಶ್ಲೋಕ - 12 - ಸಂಸ್ಕೃತದಲ್ಲಿ :

ಮನಃ ಪ್ರತ್ಯಕ್ಚಿತ್ತೇ ಸವಿಧಮವಿಧಾಯಾತ್ತ ಮರುತಃ
ಪ್ರಹೃಷ್ಯದ್ರೋಮಾಣಃ ಪ್ರಮದಸಲಿಲೋತ್ಸಂಗಿತದೃಶಃ
ದಾಲೋಕ್ಯಾಹ್ಲಾದಂ ಹ್ರದ ಇವ ನಿಮಜ್ಜ್ಯಾಮೃತಮಯೇ
ದಧತ್ಯಂತಸ್ತತ್ತ್ವಂ ಕಿಮಪಿ ಯಮಿನಸ್ತತ್ಕಿಲ ಭವಾನ್              
ಕನ್ನಡದಲ್ಲಿ :         

ವಿಧಿವಿಹಿತ ಪ್ರಾಣಾಯಾಮದಿಂದ ಮನವನಾತ್ಮದಲಿ
ನಿಲಿಸಿ ರೋಮಾಂಚನವೊಂದಿ ನಯನದಿ ಬಾಷ್ಪ ತುಂಬಿ
ಯಾವಂತಸ್ತತ್ತ್ವ ಕಂಡಮೃತಸರದೊಳಾಳ್ದಂತಿಹರೋ
ಯೋಗಿಗಳು, ಆ ತತ್ವ ನಿಜದಿ ನೀನೆ ಪರಮೇಶ್ವರಾ


ವಿವರಣೆ :

ಮಹಾನ್ ಯೋಗಿಗಳು ತಮ್ಮ ಶ್ವಾಸೋಚ್ವಾಸವನ್ನು ನಿಯಂತ್ರಿಸಿಕೊಂಡಿದ್ದು ಮತ್ತು ತಮ್ಮ ಮನಸ್ಸನ್ನು ಸ್ಥಿರವಾಗಿಟ್ಟುಕೊಂಡಿದ್ದು , ಅಂತರ್ಮುಖಿಗಳಾಗಿ, ರೋಮಾಂಚಿತರಾಗಿ , ಕಣ್ಣುಗಳಿಂದ ಆನಂದ ಬಾಷ್ಪವನ್ನು ಸುರಿಸುತ್ತಾ , ಪರಮಾನಂದವನ್ನು ಅನುಭವಿಸುತ್ತಾರೆ. ಅವರು ಅಮೃತದಲ್ಲಿ ಮುಳುಗಿರುವಂತೆ ಕಾಣಿಸುತ್ತಾರೆ. ಅವರ ಅಂತರಂಗದಲ್ಲಿನ ಈ ಪರಮಾನಂದವು ಬೇರೆ ಯಾವುದರಿಂದಲೂ ಉಂಟಾದದ್ದಲ್ಲ ಅದು ಕೇವಲ ನೀನೇ ಹಾಗೂ ನಿನ್ನಿಂದಲೇ ಮಾತ್ರ.

ಶ್ಲೋಕ  - 13 - ಸಂಸ್ಕೃತದಲ್ಲಿ :

ತ್ವಮರ್ಕಸ್ತ್ವಂ ಸೋಮಸ್ತ್ವಮಸಿ ಪವನಸ್ತ್ವಂ ಹುತವಹಃ
ತ್ವಮಾಪಸ್ತ್ವಂ ವ್ಯೋಮತ್ವಮು ಧರಣಿರಾತ್ಮಾ ತ್ವಮಿತಿ ಚ
ಪರಿಚ್ಛಿನ್ನಾಮೇವಂ ತ್ವಯಿ ಪರಿಣತಾ ಬಿಭ್ರತಿ ಗಿರಂ
ನ ವಿದ್ಮಸ್ತತ್ತತ್ತ್ವಂ ವಯಮಿಹ ತು ಯತ್ತ್ವಂ ನ ಭವಸಿ           
ಕನ್ನಡದಲ್ಲಿ :         

ನೀ ರವಿಯು ಚಂದ್ರನು ನೀ ನೀನೆ ವಾಯು ನೀನಗ್ನಿಯು
ನೀನೆ ಜಲ ನೀ ಗಗನ ನೀ ಭೂಮಿ ನೀನಾತ್ಮನೆಂದು
ಮಿತಿಗೊಳಿಸಿಯೆ ನಿನ್ನನು ಬಣ್ಣಿಪರು ಪಂಡಿತರು
ನಾವುಗಳೋ ನೀನಲ್ಲದುದಾವುದೆಂಬುದನರಿಯೆವು

            ವಿವರಣೆ :

ಹೇ ಮಹಾದೇವನೇ ! ನೀನೆ ಸೂರ್ಯ , ಚಂದ್ರ , ಅಗ್ನಿ, ವಾಯು , ಜಲಭೂಮಿ , ಆಕಾಶ. ನೀನೇ ಸರ್ವೋತ್ತಮ,, ಹಾಗೂ ಸರ್ವಾಂತರ್ಯಾಮಿ. ಈ ವಿಧವಾಗಿ ಎಲ್ಲ ಗುಣಲಕ್ಷಣಗಳನ್ನೂ ನಿನಗೆ ಹೋಲಿಸಿ ಭಕ್ತರು ಬಣ್ಣಿಸುವರು. ನನಗಾದರೋ ನಿನ್ನದಲ್ಲದ ಯಾವುದೇ ಮೂಲಭೂತವಸ್ತುವಿನ ಬಗೆಗೆ ಅರಿಯದು.

ಶ್ಲೋಕ - 14 - ಸಂಸ್ಕೃತದಲ್ಲಿ :

ನಮೋ ನೇದಿಷ್ಠಾಯ ಪ್ರಿಯದವ ದವಿಷ್ಠಾಯ ಚ ನಮೋ
ನಮಃ ಕ್ಷೋದಿಷ್ಠಾಯ ಸ್ಮರಹರ ಮಹಿಷ್ಠಾಯ ಚ ನಮಃ
ನಮೋ ವರ್ಷಿಷ್ಠಾಯ ತ್ರಿನಯನ ಯವಿಷ್ಠಾಯ ಚ ನಮೋ  
ನಮಸ್ಸರ್ವಸ್ಮೈ ತೇ ತದಿದಮತಿಸರ್ವಾಯ ಚ ನಮಃ              
ಕನ್ನಡದಲ್ಲಿ :         

ವನಪ್ರಿಯನೆ ಅತಿ ಸನಿಹ ಅತಿದೂರವಿಹನೆ ನಮಿಪೆ
ಕಾಮಾಂತಕ ಅತಿಸೂಕ್ಷ್ಮ ಬೃಹದಾಕಾರ ನಿನಗೆ ನಮಿಪೆ
ಮುಕ್ಕಣ್ಣನೆ ಅತಿಹಿರಿಯ ಅತಿಕಿರಿಯ ನಿನಗೆ ನಮಿಪೆ
ಇವೆಲ್ಲವಾಗಿರುತ ಎಲ್ಲವನುಮೀರಿದ ನಿನಗೆ ನಮಿಪೆ
              

ವಿವರಣೆ :

! ಮನ್ಮಥ ನಾಶಕನೆ ! ಓ ಮುಕ್ಕಣ್ಣನೆ ! ವನ ಪ್ರಿಯನೆ, ಅತಿ ಸನಿಹ ಮತ್ತು ಅತಿ ದೂರದಲ್ಲಿರುವವನೆ , ಸೂಕ್ಷ್ಮಾತಿ ಸೂಕ್ಷ್ಮನೇ , ಮತ್ತು ಅಗಾಧ ಸ್ಚರೂಪನೇ , ಅತಿ ಕಿರಿಯನೇ, ಅತ್ಯಂತ ಹಿರಿಯನೇ , ನಿನಗೆ ನನ್ನ ಭಕ್ತಿಪೂರ್ವಕ ವಂದನೆಗಳು. ನೀನೇ ಎಲ್ಲವೂ ಹಾಗೂ ಎಲ್ಲವನ್ನೂ ಮೀರಿದವನು.


ಶ್ಲೋಕ - 15 -   ಸಂಸ್ಕೃತದಲ್ಲಿ :

ಬಹುಲ ರಜಸೇ ವಿಶ್ವೋತ್ಪತ್ತೌ ಭಾವಾಯ ನಮೋ ನಮಃ
ಪ್ರಬಲತಮಸೇ ತತ್ಸಂಹಾರೇ ಹರಾಯ ನಮೋ ನಮಃ
ಜನಸುಖಕೃತೇ ಸತ್ತ್ವೋದ್ರಿಕ್ತೌ ಮೃಡಾಯ ನಮೋ ನಮಃ
ಪ್ರಮಹಸಿ ಪದೇ ನಿಸ್ತ್ರೈಗುಣ್ಯೇ ಶಿವಾಯ ನಮೋ ನಮಃ
ಕನ್ನಡದಲ್ಲಿ :         

ಬಹು ರಜೋಗುಣಿ ಸೃಷ್ಟಿಕರ್ತ ಭವಗೆ ನಮೋ ನಮೋ
ಅದನಳಿಸುವಾ ಹಿರಿ ತಮಸ ಹರಗೆ ನಮೋ ನಮೋ
ಜಗಸುಖಕರ ಸತ್ವಾಧಿಕಗೆ ಮೃಡಗೆ ನಮೋ ನಮೋ
ತ್ರಿಗುಣರಹಿತ ತೇಜೋಮಯಿ ಶಿವಗೆ ನಮೋ ನಮೋ
              

ವಿವರಣೆ :

ಹೇ ಮಹಾದೇವನೆ ! ರಜಸ್ಸನ್ನು ಪ್ರಮುಖ ಗುಣವನ್ನಾಗಿಸಿಕೊಂಡು, ವಿಶ್ವ ಸೃಷ್ಟಿಯನ್ನು ಮಾಡಿದ ನಿನಗೆ " ಭವ "ಎಂಬ ನಾಮದಿಂದ ನಮಸ್ಕರಿಸುವೆ. ಹಾಗೇ ತಾಮಸ ವನ್ನು ಪ್ರಮುಖ ಗುಣವನ್ನಾಗಿಸಿಕೊಂಡು ವಿಶ್ವವನ್ನು ನಾಶಗೈಯುವ ನಿನಗೆ "ಹರ " ಎಂಬ ನಾಮದಿಂದ ನಮಿಸುವೆ. ಸತ್ವವನ್ನೇ ಪ್ರಮುಖ ಗುಣವನ್ನಾಗಿಸಿಕೊಂಡು ವಿಶ್ವವನ್ನು ರಕ್ಷಿಸಿ ಪಾಲಿಸುವ ನಿನ್ನನ್ನು " ಮೃಡ " ಎಂಬ ನಾಮದಿಂದ ನಮಸ್ಕರಿಸುವೆ. ಮತ್ತೊಮ್ಮೆ ನೀನು ಮೂರೂ ಗುಣಗಳಿಗಿಂತ ಅತೀತನಾಗಿ ಅತ್ಯುನ್ನತ ಪರಮಾನಂದ ಪದವಿಯೇ ಆಗಿರುವ ನಿನ್ನನ್ನು " ಶಿವ " ಎಂಬ ನಾಮದಿಂದ ಭಕ್ತಿಪೂರ್ವಕವಾಗಿ ನಮಿಸುವೆ.


ಶ್ಲೋಕ  - 16 - ಸಂಸ್ಕೃತದಲ್ಲಿ :

ಕೃತಪರಿಣತಿ ಚೇತಃ ಕ್ಲೇಶವಶ್ಯಂ ಕ್ವ ಚೇದಂ
ಕ್ವ ಚ ತವ ಗುಣ ಸೀಮೋಲ್ಲಂಘಿನೀ ಶಶ್ವದೃದ್ಧಿಃ
ಇತಿ ಚಕಿತಮಮಂದೀಕೃತ್ಯ ಮಾಂ ಭಕ್ತಿರಾಧಾತ್
ವರದ ಚರಣಯೋಸ್ತೇ ವಾಕ್ಯ ಪುಷ್ಪೋಪಹಾರಮ್
ಕನ್ನಡದಲ್ಲಿ :         

ಅಲ್ಪ ಕುಶಲಿ ಆತಂಕದೆನ್ನ ಬುದ್ಧಿಯದೆಲ್ಲಿ
ಗುಣಾತೀತನಹ ಶಾಶ್ವತ ನಿನ್ನೈಶ್ವರ್ಯವೆಲ್ಲಿ
ಎಂದು ಹೆದರಿದೆನ್ನ ಭಯವನಳಿಸಿ ಭಕ್ತಿಯು
ನುಡಿಯ ಹೂಹಾರ ನಿನ್ನಡಿಗೆ ತರಿಸಿತಲಾ
              

ವಿವರಣೆ :

ಹೇ ಶಂಕರನೆ ! ನನ್ನಲ್ಲಿ , ನಿನ್ನ ಅಪರಿಮಿತ ಗುಣಗಳ ಬೆಳವಣಿಗೆಯ ಬಗೆಗೆ , ನನ್ನ ಪೀಡಿತ ಮನಸ್ಸಿನಲ್ಲಿ ಅತಿ ಕಡಿಮೆ ಅರಿವಿರುವುದನ್ನು ಮನಗಂಡು ನಾನು ಗೊಂದಲದಲ್ಲಿ ಸಿಲುಕಿರುವೆ. ಆದರೂ ನಿನ್ನಲ್ಲಿನ ನನ್ನ ಅನನ್ಯ ಭಕ್ತಿಯು ಈ ಭಿನ್ನತೆಯನ್ನು ದೂರಮಾಡಿ ನಿನ್ನ ಪಾದದಡಿಯಲ್ಲಿ ಪುಷ್ಪಗುಚ್ಛವನ್ನು ಅರ್ಪಿಸುವೆ.


ಶ್ಲೋಕ  - 17 - ಸಂಸ್ಕೃತದಲ್ಲಿ :

ಅಸಿತ ಗಿರಿ ಸಮಂ ಸ್ಯಾತ್ ಕಜ್ಜಲಂ ಸಿಂಧು ಪಾತ್ರೇ
ಸುರ ತರುವರ ಶಾಖಾ ಲೇಖನೀ ಪತ್ರಮುರ್ವೀ
ಲಿಖತಿ ಯದಿ ಗೃಹೀತ್ವಾ ಶಾರದಾ ಸರ್ವಕಾಲಂ
ತದಪಿ ತವ ಗುಣಾನಾಮೀಶ ಪಾರಂ ನ ಯಾತಿ     
ಕನ್ನಡದಲ್ಲಿ :         

ನೀಲಗಿರಿಯಷ್ಟು ಮಸಿ ಶರಧಿಯ ಕುಡಿಕೆ
ಕಲ್ಪವೃಕ್ಷವ ಕೊಂಬೆ ಲೆಕ್ಕಣಿ ಭುವಿಯ ಪತ್ರವ ಮಾಡಿ
ಶಾರದೆಯೆಲ್ಲ ಕಾಲವು ಬರೆದರೂ
ನಿನ್ನ ಗುಣಗಳ ಸೀಮೆ ಮುಟ್ಟದದು ಸರ್ವೇಶ
              

ವಿವರಣೆ :

ಓ ದೇವನೆ ! ನೀಲಾದ್ರಿಪರ್ವತವನ್ನು ಬರೆಯುವ ಶಾಯಿಯನ್ನಾಗಿಯೂಸಾಗರವನ್ನು ಮಸಿಕುಡಿಕೆಯನ್ನಾಗಿಯೂ , ದೇವಲೋಕದ ವೃಕ್ಷವನ್ನು ಲೇಖನಿಯನ್ನಾಗಿ , ಮತ್ತು ಭೂಮಿಯನ್ನೇ ಕಾಗದವನ್ನಾಗಿ ಹಾಗೂ ದೇವಿ ಸರಸ್ವತಿಯೇ ಸ್ವತಃ ಬರೆಯುವವಳಾಗಿ, ಎಷ್ಟೇ ದೀರ್ಘಕಾಲದವರೆಗೂ ನಿನ್ನ ಮಹಿಮೆಯ ಬಗೆಗೆ ಬರೆಯತೊಡಗಿದರೂ , ದೇವಿಯು ನಿನ್ನ ಅಪಾರವಾದ ಮಹಿಮೆಯ ಗಡಿಯನ್ನೂ ಸಹ ತಲುಪಲಾಗಲಿಲ್ಲ.

  
ಶ್ಲೋಕ - 18 -  ಸಂಸ್ಕೃತದಲ್ಲಿ :

ತವ ತತ್ತ್ವ ಂ  ನ ಜಾನಾಮಿ ಕೀದೃಶೋsಸಿ ಮಹೇಶ್ವರ
ಯಾದೃಶೋsಸಿ ಮಹಾದೇವ ತಾದೃಶಾಯ ನಮೋ ನಮಃ    
ಕನ್ನಡದಲ್ಲಿ :         

ನಿನ್ನ ತತ್ತ್ವವನರಿಯೆ ಹೇಗೆ ಕಾಂಬೆ ಮಹೇಶ್ವರಾ
ಹೇಗೆ ಕಾಂಬೆಯೋ ಮಹಾದೇವಾ ಹಾಗಿರುವ ನಿನ್ನ ನಮಿಪೆ
              

ವಿವರಣೆ :

ನೀನು ಹೇಗಿರುವೆ ಮತ್ತು ನಿನ್ನ ಸ್ವಭಾವಗಳ ಬಗೆಗೆ ಸತ್ಯಾಸತ್ಯತೆಯು ನನಗೆ ಅರಿಯದು. ಓ ಮಹಾದೇವನೆ ! ನಿನ್ನ ಗುಣಗಳಲ್ಲಿ ನೀನೇ ಆಗಿರುವ ನಿನಗೆ ನನ್ನ ಪ್ರಣಾಮಗಳು.


ಶ್ಲೋಕ  - 19 - ಸಂಸ್ಕೃತದಲ್ಲಿ :

ಏಕಕಾಲಂ ದ್ವಿಕಾಲಂ ವಾ ತ್ರಿಕಾಲಂ ಯಃ ಪಠೇನ್ನರಃ
ಸರ್ವಪಾಪ ವಿನುರ್ಮುಕ್ತಃ ಶಿವಲೋಕೇ ಮಹೀಯತೇ              
ಕನ್ನಡದಲ್ಲಿ :         

ಒಮ್ಮೆ , ಎರಡು ಸಲ, ಮೂರು ಸಲಇದನ್ನೋದುವನು
ಸರ್ವಪಾಪ ಮುಕ್ತನಹನು ಕೈಲಾಸದಿ ಬೆಳಗುವನು
              

ವಿವರಣೆ :

ಯಾರು ಪ್ರತಿದಿನವೂ ಈ ಸ್ತೋತ್ರವನ್ನು ಭಕ್ತಿಯಿಂದ ಒಮ್ಮೆ , ಎರಡು ಬಾರಿ ಅಥವಾ ಮೂರು ಬಾರಿ ಪಠಿಸುತ್ತಾರೋ , ಅವರು ಎಲ್ಲ ಪಾಪಗಳಿಂದ ಮುಕ್ತರಾಗಿ, ಶಿವನ ವಾಸಸ್ಥಾನದಲ್ಲಿ ಆನಂದವನ್ನು ಪಡೆಯುವರು.


ಶ್ಲೋಕ  - 20 - ಸಂಸ್ಕೃತದಲ್ಲಿ :

ಶ್ರೀ ಪುಷ್ಪದಂತ ಮುಖ ಪಂಕಜ ನಿರ್ಗತೇನ
ಸ್ತೋತ್ರೇಣ ಕಿಲ್ಬಿಷಹರೇಣ ಹರ ಪ್ರಿಯೇಣ
ಕಂಠಸ್ಥಿತೇನ ಪಠಿತೇನ ಸಮಾಹಿತೇನ
ಸುಪ್ರೀಣಿತೋ ಭವತಿ ಭೂತಪತಿರ್ಮಹೇಶಃ     
ಕನ್ನಡದಲ್ಲಿ :         

ಶ್ರೀಪುಷ್ಪದಂತನ ಮುಖ ಕಮಲದಿಂದರಳಿದ
ಪಾಪಹರವೀ ಹರಪ್ರಿಯಸ್ತೋತ್ರವನು
ಕಂಠಸ್ಥ ಮಾಡಲೋದಲು ಮನೆಯಲಿರಿಸಿರಲು
ಜಗದೊಡೆಯ ಪರಮೇಶ ಸುಪ್ರೀತನಹನು
              

ವಿವರಣೆ :

ಮಹಾದೇವನಿಗೆ ಪ್ರಿಯವಾದ ಈ ಸ್ತೋತ್ರವು ಪುಷ್ಪದಂತನ ಮುಖಾರವಿಂದದಿಂದ ಹೊರಬಂದು ಎಲ್ಲ ಪಾಪಗಳನ್ನೂ ನಿವಾರಿಸುವ ಶಕ್ತಿಯುಳ್ಳದ್ದಾಗಿದೆ. ಯಾರು ಈ ಸ್ತೋತ್ರವನ್ನು ಕಂಠಪಾಠ ಮಾಡಿಕೊಳ್ಳುವರೋ ಮತ್ತು  / ಅಥವಾ ಏಕಾಗ್ರತೆಯಿಂದ ಸ್ತುತಿಸುತ್ತಾರೋ ಅವರಲ್ಲಿ ಮಹಾದೇವನು ಸುಪ್ರೀತನಾಗುವನು.


ಲೇಖನದ ಮೂಲಗಳು:
ಸಂಸ್ಕೃತ ಶ್ಲೋಕ : ms.uky.edu/~sohum/Sanskrit/mahimna/mahimna.htm
ಕನ್ನಡ ಶ್ಲೋಕಗಳು : ಶ್ರೀ.ಬಿ.ಎಸ್.ಚಂದ್ರಶೇಖರ ಅವರ “ಸವಿಗನ್ನಡ ಸ್ತೋತ್ರಚಂದ್ರಿಕೆ”.
ವಿವರಣೆ:  ms.uky.edu/~sohum/Sanskrit/mahimna/mahimna.htm – ಆಂಗ್ಲ ಭಾಷೆಯಲ್ಲಿನ ವಿವರಣೆಗಳ ಭಾವಾರ್ಥವನ್ನು ಕನ್ನಡದಲ್ಲಿ ಪ್ರಸ್ತುತಿ ಪಡಿಸಿದವರು – ಗುರುಪ್ರಸಾದ್ ಹಾಲ್ಕುರಿಕೆ.









                      













                         






No comments:

Post a Comment

ದಾರಿದ್ರ್ಯ ದಹನ ಶಿವಸ್ತೋತ್ರ

https://savigannadastotra.blogspot.com/2018/10/blog-post.html ದಾರಿದ್ರ್ಯ ದಹನ ಶಿವಸ್ತೋತ್ರ ಪ್ರಸ್ತಾವನೆ : ಸಂಸ್ಕ...