Tuesday, June 19, 2018

ಭೀಷ್ಮಸ್ತವರಾಜ





ಭೀಷ್ಮಸ್ತವರಾಜ 

ಶ್ರೀ ಭೀಷ್ಮಸ್ತುತಿಯ ಉಗಮ ಕೌರವ, ಪಾಂಡವ ಕುಲದ ಪಿತಾಮಹ ಭೀಷ್ಮಾಚಾರ್ಯರು ಪಾಂಡವ ಸೈನ್ಯದೆದುರು ಭೀಕರ ಯುದ್ಧದ ನಂತರ ಶರ ಶೈಯ್ಯೆಯ ಮೇಲೆ ಮಲಗಿರುವರು. ಮಹಾಭಾರತದ ಯುದ್ಧದಲ್ಲಿ ಯಾವುದೇ ಆಯುಧವನ್ನು ಹಿಡಿಯುವುದಿಲ್ಲವೆಂದು ಶಪಥಗೈದಿದ್ದ ಶ್ರೀಕೃಷ್ಣನನ್ನು ತನ್ನ ಚಕ್ರವನ್ನು ಆಹ್ವಾನಿಸಿ ಭೀಷ್ಮರನ್ನು ನಾಶಮಾಡುವ ಸಂದರ್ಭವನ್ನು ಭೀಷ್ಮರು ಉಂಟುಮಾಡಿದ್ದಾರೆ. ಯುದ್ಧದಲ್ಲಿ ಭೀಷ್ಮರು ತಮ್ಮ ತೀಕ್ಷ್ಣ ಬಾಣಗಳಿಂದ ಶ್ರೀಕೃಷ್ಣನ ಕವಚವನ್ನು ತುಂಡರಿಸಿ ಅವನ ಶರೀರವನ್ನು ಘಾಸಿಗೊಳಿಸಿ ಮೈಮೇಲೆ ಆದ ಘಾಯಗಳಿಂದ ರಕ್ತ ಸುರಿಯುವಂತೆ ಮಾಡಿದ್ದರು. ಹಾಗೂ ಇನ್ನೇನು ಅರ್ಜುನನನ್ನು ತೀಕ್ಷ್ಣವಾಗಿ ಘಾಯಗೊಳಿಸುವುದರಲ್ಲಿದ್ದರು ಭೀಷ್ಮರು. ಆ ಸಮಯದಲ್ಲಿ ಪಾರ್ಥಸಾರಥಿಯು ರಥದಿಂದ ಧುಮುಕಿ ಸುದರ್ಶನ ಚಕ್ರವನ್ನು ಧರಿಸಿ ಭೀಷ್ಮರನ್ನು ನಾಶಪಡಿಸಲು ಮುನ್ನುಗ್ಗುತ್ತಿರುವುದನ್ನು ವೀಕ್ಷಿಸಿ ಭೀಷ್ಮ ಪಿತಾಮಹನು ಅನನ್ಯವಾದ ಭಕ್ತಿಪರವಶರಾಗಿ ಭಗವಂತನ ಈ ವಿಧವಾದ ಅಪರೂಪದ ದರ್ಶನ ದೊರಕಿದ್ದಕ್ಕೆ ಆನಂದಿತರಾಗಿದ್ದಾರೆ.
ಈ ವಿಧವಾದ ಶ್ರೀಕೃಷ್ಣನ ದರ್ಶನದಿಂದಾಗಿ ಭಾವೋನ್ಮತ್ತರಾದ ಭೀಷ್ಮ ಪಿತಾಮಹರು ಅದೇ ಸಂದರ್ಭದಲ್ಲಿ ತಮಗೊದಗಿದ ಭಾಗ್ಯವನ್ನು ಕೊಂಡಾಡುತ್ತಾ ಹತ್ತು ಶ್ಲೋಕಗಳನ್ನು ಯುದ್ಧಭೂಮಿಯಲ್ಲೇ ರಚಿಸುತ್ತಾರೆ.
ಈ ಹತ್ತು ಶ್ಲೋಕಗಳೇ ಭೀಷ್ಮಸ್ತುತಿ ಅಥವಾ ಭೀಷ್ಮಸ್ತವರಾಜಮ್ ಎಂಬುದಾಗಿ ಕರೆಯಲ್ಪಟ್ಟಿತು.
ಭಾಗವತ ಮಹಾಪುರಾಣದ ಪ್ರಥಮ ಸ್ಕಂಧದಲ್ಲಿನ 9ನೇ ಅಧ್ಯಾಯದಲ್ಲಿ ಈ ಶ್ಲೋಕಗಳನ್ನು ಉಲ್ಲೇಖಿಸಲಾಗಿದೆ.
ದಿನಕ್ಕೊಂದು ಶ್ಲೋಕದಂತೆ - ಸಂಸ್ಕೃತ ಶ್ಲೋಕ, ಸ್ತೋತ್ರಚಂದ್ರಿಕೆಯಲ್ಲಿ ಅವುಗಳ ಕನ್ನಡ ಅವತರಣಿಕೆ ಹಾಗೂ ಅವುಗಳ ಬಗೆಗಿನ ಯು.ವಿ.ಶ್ರೀ ಭಾಷ್ಯ ಸಿಂಹಾಸನಮ್ ಪುರಿಸಾಯಿ ನಾಡಾರ್ ಶ್ರೀ.ಕೃಷ್ಣಮಾಚಾರಿಯರ್ ಸ್ವಾಮಿಯವರ ಭಾಷ್ಯವನ್ನು ಆಂಗ್ಲ ಭಾಷೆಗೆ ಶ್ರೀ ನೃಸಿಂಹ ಸೇವಾ ರಸಿಕನ್ ಒಪ್ಪಿಲಿಯಪ್ಪನ್ ಕೊಯಿಲ್ ಶ್ರೀ.ವರದಾಚಾರಿ ಶಡಕೋಪನ್ ಭಾಷಾಂತರಿಸಿರುವುದನ್ನು ಕನ್ನಡದಲ್ಲಿ ಭಾಷಾಂತರಿಸಿ ತಮ್ಮ ಮುಂದಿಡುವ ಪ್ರಯತ್ನವನ್ನು ಮಾಡಬೇಕೆಂದಿದ್ದೇನೆ.

ಶ್ಲೋಕ - 1 - ಸಂಸ್ಕೃತ 
ತದೋಪಸಂಹೃತ್ಯ ಗಿರಃ ಸಹಸ್ರಣೀ-
ರ್ವಿಮುಕ್ತಸಂಗಂ ಮನ ಆದಿಪುರುಷೇ |
ಕೃಷ್ಣೇ ಲಸತ್ಪೀತಪಟೇ ಚತುರ್ಭುಜೇ
ಪುರಹಸ್ಥಿತೇs ಮೀಲಿತದೃ ಗ್ವೈಧಾರಯತ್ ||

ಕನ್ನಡದಲ್ಲಿ 
ಸಾಸಿರರಥಿ ಮೌನವನಾಂತು ತನ್ನೆದುರು
ಪೀತವಸ್ತ್ರ ಚತುರ್ಭುಜದಿಂ ವಿರಾಜಿಪ
ಆದಿಮೂರುತಿ ಕೃಷ್ಣನನೆವೆಯಿಡದೆ ನೋಡುತ್ತ
ನಿಸ್ಸಂಗಮನವನಲ್ಲೆ ನೆಲೆಗೊಳಿಸಿದ

ಅರ್ಥ ವಿವರಣೆ: 
ಸಾವಿರಾರು ರಥಿಕರ ಮುಂದಾಳಾಗಿದ್ದ ಭೀಷ್ಮ ಪಿತಾಮಹರು ವಾಣಿಯನ್ನು ಸಂಯಮಗೈದು (ಮೌನವಹಿಸಿ) ಮುಂದುಗಡೆ ಕಂಗೊಳಿಸುತ್ತಿದ್ದ ಚತುರ್ಭುಜನೂ, ಪೀತಾಂಬರ ವಿರಾಜಿತನೂ ಆದ ಆದಿಪುರುಷನಾದ ಭಗವಾನ್ ಶ್ರೀಕೃಷ್ಣನನ್ನು ಎವೆಯಿಕ್ಕದ ಕಣ್ಣುಗಳಿಂದ ದೃಷ್ಟಿಸುತ್ತಾ, ತಮ್ಮ ಸಂಗ್ರಹಿತವಾದ ಮನಸ್ಸನ್ನು ಅವನಲ್ಲಿ ನೆಲೆಗೊಳಿಸಿದರು.

ಶ್ಲೋಕ - 2 - ಸಂಸ್ಕೃತ 
ವಿಶುದ್ಧಯಾ ಧಾರಣಯಾ ಹತಾಶುಭ-
ಸ್ತದೀಕ್ಷಯ್ಯೆವಾಶುಗತಾಯುಧವ್ಯಥಃ |
ನಿವೃತ್ತಸರ್ವೇಂದ್ರಿಯವೃತ್ತಿ ವಿಭ್ರಮ-
ಸ್ತುಷ್ಟಾವ ಜನ್ಯಂ ವಿಸೃಜಂಜನಾರ್ದನಮ್

ಕನ್ನಡದಲ್ಲಿ 
ಧಾರಣೆಯಿಂದಲಶುಭಗಳು ತೊಲಗಿ
ಕಟಾಕ್ಷಮಾತ್ರದಿಂದಲೇ ಯುದ್ಧಗಾಯಗಳು ಕಳೆದು
ದೇಹತ್ಯಾಗ ಕಾಲದೊಳಿಂದ್ರಿಯ ಭ್ರಮಣೆಯ ನಿಲ್ಲಿಸಿ
ಪ್ರೇಮದಿಂ ಕೃಷ್ಣನನು ಸ್ತುತಿಗೈದನಿಂತು

ವಿವರಣೆ: 
ಹೀಗೆ ಭಗವಂತನನ್ನು ದೃಢವಾಗಿ ಧರಿಸಿದ ಧಾರಣಾ ಯೋಗದಿಂದ ಅವರ ಎಲ್ಲ ಅಶುಭಗಳು ತೊಲಗಿಹೋಗಿ, ಅವರಿಗೆ ಶಾಸ್ತ್ರಾಸ್ತ್ರಗಳಿಂದ ಉಂಟಾಗಿದ್ದ ಎಲ್ಲ ನೋವುಗಳು ಅವನ ಕೃಪಾಕಟಾಕ್ಷಮಾತ್ರದಿಂದ ಒಡನೆಯೇ ಕಳೆದುಹೋದುವು. ಈಗ ಶರೀರವನ್ನು ತ್ಯಜಿಸುವ ಸಮಯ, ಅವರು ಇಂದ್ರಿಯವ್ಯಾಪಾರಗಳ ಅಲೆದಾಟವನ್ನು ನಿಲ್ಲಿಸಿ ಪ್ರೇಮದಿಂದ ಭಗವಂತನನ್ನು ಈ ರೀತಿಯಾಗಿ ಸ್ತುತಿಸಿದರು.

ಶ್ರೀಭೀಷ್ಮ ಉವಾಚ
ಶ್ಲೋಕ - 3 - ಸಂಸ್ಕೃತ 

ಇತಿ ಮತಿರುಪಕಲ್ಪಿತಾ ವಿತೃಷ್ಣಾ
ಭಗವತಿ ಸಾತ್ವತಪುಂಗವೇ ವಿಭೂಮ್ನಿ |
ಸ್ವಸುಖಮುಪಗತೇ ಕ್ವಚಿದ್ವಿಹರ್ತುಂ
ಪ್ರಕೃತಿಮುಪೇಯುಷಿ ಯದ್ಬವಪ್ರವಾಹಃ ||

ಕನ್ನಡದಲ್ಲಿ 
ನಿಷ್ಕಾಮ ಮನವ ನೆಲೆಗೊಳಿಪೆ
ಸಾತ್ವಿಕ ಮಹಿಮ ಭಗವಂತನಲ್ಲಿ
ಸ್ವಾನಂದದಲಿರುತಲೆಮ್ಮೊಮ್ಮೆ
ಪ್ರಕೃತಿಯ ಕೂಡೆ ಹರಿವುದೀ ಸೃಷ್ಟಿಪ್ರವಾಹ

ವಿವರಣೆ : 
ಶ್ರೀಭೀಷ್ಮಪಿತಾಮಹರು ಹೇಳುತ್ತಾರೆ: ಅನೇಕ ಸಾಧನೆಗಳ ಅನುಷ್ಠಾನಗಳಿಂದ ಅತ್ಯಂತ ಶುದ್ಧವಾದ ಹಾಗೂ ಕಾಮನಾರಹಿತವಾದ ಬುದ್ಧಿಯನ್ನು ಈಗ ಮೃತ್ಯುವಿನ ಸಮಯದಲ್ಲಿ ನಾನು - ಯದುಕುಲಶಿರೋಮಣಿಯೂ, ಮಹಾಮಹಿಮನೂ, ಅನಂತನೂ ಆದ ಭಗವಾನ್ ಶ್ರೀಕೃಷ್ಣನ ಚರಣಾರವಿಂದಾಗಳಲ್ಲಿ ಸಮರ್ಪಿಸುತ್ತಿದ್ದೇನೆ. ಈತನು ಸದಾ ತನ್ನ ಸಹಜಾನಂದ ಸ್ವರೂಪದಲ್ಲಿ ನೆಲೆಗೊಂಡಿದ್ದುಕೊಂಡೇ, ತನ್ನ ಸಂಕಲ್ಪದಂತೆ ಲೀಲಾವಿಹಾರಕ್ಕಾಗಿ ಪ್ರಕೃತಿಯೊಡನೆ ಕೂಡಿದಾಗ ಈ ಸೃಷ್ಟಿ ಪರಂಪರೆಯು ನಡೆಯುತ್ತದೆ.

ಶ್ಲೋಕ - 4 - ಸಂಸ್ಕೃತ 
ತ್ರಿಭುವನಕಮನಂ ತಮಾಲವರ್ಣಂ
ರವಿಕರಗೌರವರಾಂಬರಂ ದಧಾನೇ
ವಪುರಲಕಕುಲಾವೃತಾನನಾಬ್ಜಂ
ವಿಜಯಸಖೇ ರತಿರಸ್ತು ಮೇsನವದ್ಯಾ

ಕನ್ನಡದಲ್ಲಿ 
ಹೊಂಗೆಯೆಲೆ ಬಣ್ಣ ಪೊಂಗಿರಣದೊಲು
ಕಂಗೊಳಿಪ ಪೀತಾಂಬರ ಮೂಲೋಕ ಸುಂದರ
ಗುಂಗುರು ಮುಂಗುರುಳ ಮುಖಪದ್ಮದ
ಮಂಗಳ ಮೂರ್ತಿ ವಿಜಯಸಖನೊಳೆನ್ನೊಲುಮೆ ನಿಲಲಿ

ವಿವರಣೆ: 
ಹೊಂಗೆಯ ಎಲೆಗಳಂತೆ ಶ್ಯಾಮಲವರ್ಣದ ಅಂಗಾಕಾಂತಿಯಿಂದ ಕಂಗೊಳಿಸುವ, ಸೂರ್ಯನ ಹೊಂಗಿರಣಗಳಂತೆ ಹೊಳೆಯುವ ಪೀತಾಂಬರವನ್ನು ಧರಿಸಿರುವ, ಮುಖ ಕಮಲದ ಮೇಲೆ ಗುಂಗುರು-ಗುಂಗುರಾದ ಮುಂಗುರುಳುಗಳು ಜೋಲಾಡುತ್ತಿರುವ ದಿವ್ಯಮಂಗಳ ವಿಗ್ರಹವುಳ್ಳ, ತ್ರಿಭುವನೈಕ ಸುಂದರನಾದ, ಅರ್ಜುನ ಮಿತ್ರನಾದ ಶ್ರೀಕೃಷ್ಣನಲ್ಲಿ ನನ್ನ ನಿರೂಪಾಧಿಕವಾದ ಪ್ರೇಮವು ನೆಲೆಗೊಳ್ಳಲಿ. ಹೀಗೆ ಭೀಷ್ಮರು ಶರಶೈಯ್ಯೆಯ ಮೇಲೆ ಮಲಗಿ ತನ್ನೆದುರಿಗೆ ನಿಂತಿರುವ ಶ್ರೀಕೃಷ್ಣನ ಸೌಂದರ್ಯವನ್ನು ವರ್ಣಿಸುತ್ತಾರೆ.
ಇಲ್ಲಿ ಭೀಷ್ಮ ಪಿತಾಮಹರು ಯಾವುದೇ ಪ್ರತಿಫಲಾಪೇಕ್ಷೆ ಬಯಸದೇ ತಮ್ಮ ಮನಸ್ಸನ್ನು ಶ್ರೀ ಕೃಷ್ಣನ ಶುಭಾಶ್ರಯದಲ್ಲಿ ಸೇರಿಸುವಂತೆ ಪ್ರಾರ್ಥಿಸುತ್ತಾರೆ. ಫಲಾಪೇಕ್ಷೆಯಿಂದ ಭಗವಂತನನ್ನು ಪ್ರಾರ್ಥಿಸುವುದು ಅಧಮಾಚಾರವಾಗುತ್ತದೆ. ಪ್ರಸ್ತುತದಲ್ಲಿ ಬಹಳ ಜನ ಅಧಮಾಚಾರವನ್ನೇ ಅನುಸರಿಸುತ್ತಾರೆ. ಯಾವುದೇ ಫಲಾಪೇಕ್ಷೆಯಿಲ್ಲದೇ ಭಗವಂತನನ್ನು ಪ್ರಾರ್ಥಿಸುವುದು ಹಾಗೂ ದರ್ಶಿಸುವುದು ಉತ್ತಮಾಚಾರಣೆ.

ಶ್ಲೋಕ - 5 - ಸಂಸ್ಕೃತ 
ಯುಧಿ ತುರಗರಜೋವಿಧೂಮ್ರವಿಷ್ವಕ್
ಕಚಲುಲಿತಶ್ರಮವಾರ್ಯಲಂಕೃತಾಸ್ಯೇ
ಮಮ ನಿಷಿತಶರೈರ್ವಿಭಿದ್ಯಮಾನ-
ತ್ವಚಿ ವಿಲಸತ್ಕವಚೇsಸ್ತು ಕೃಷ್ಣ ಆತ್ಮಾ ||

ಕನ್ನಡದಲ್ಲಿ 
ಕದನದಿ ಕುದುರೆ ಕಾಲ್ಗಳ ಧೂಳಿನಿಂ ಕೆಟ್ಟು
ಕೆದರ್ದ ತಲೆ ಬೆಮರಪನಿ ಮೊಗದ
ಹರಿತ ಶರಗಳ ಘಾತಿಸಿದ ತ್ವಚೆಯ
ಕವಚಧರ ಕೃಷ್ಣಗರ್ಪಿತವಾಗಲೆನ್ನಾತ್ಮ

ವಿವರಣೆ : 
ರಣರಂಗದಲ್ಲಿ ರಾರಾಜಿಸುತ್ತಿದ್ದ ಆತನ (ಶ್ರೀಕೃಷ್ಣ) ಮೋಹನ ಮೂರ್ತಿಯು ನನಗೆ ನೆನಪಾಗುತ್ತದೆ. ಅವನ ಮುಖದ ಮೇಲೆ ಕೆದರಿ ಹೋಗಿದ್ದ ಮುಂಗುರುಳುಗಳು ಕುದುರೆಗಳ ಕಾಲಿನಿಂದೆದ್ದ ಧೂಳಿನಿಂದ ಧೂಸರವರ್ಣವಾಗಿಬಿಟ್ಟಿತ್ತು. ಆಯಾಸದ ಬೆವರಿನ ಹನಿಗಳು ಅಲ್ಲಲ್ಲಿ ಅಂಟಿಕೊಂಡು ಶೋಭಿಸುತ್ತಿದ್ದವು. ನನ್ನ ತೀಕ್ಷ್ಣವಾದ ಬಾಣಗಳು ಚರ್ಮದಮೇಲೆ ನಾಟಿ ಗಾಯಗಳನ್ನುಂಟುಮಾಡಿವೆ. ಇಷ್ಟೆಲ್ಲಾ ಇದ್ದರೂ ಕುಂದದ ಸೌಂದರ್ಯದಿಂದ ರಮಣೀಯವಾಗಿ ಕಂಗೊಳಿಸುತ್ತಿರುವ ಆ ಕವಚಧಾರಿಯಾದ ಶ್ರೀಕೃಷ್ಣನಲ್ಲಿ ನನ್ನ ಆತ್ಮವು ಸಮರ್ಪಿತವಾಗಲಿ.

ವ್ಯಾಖ್ಯಾನ: 
ಭಗವಂತನು ಅಪ್ರಾಕೃತ, ಶುದ್ಧಸತ್ವ ದಿವ್ಯ ಮೂರ್ತಿ. ಆದ್ದರಿಂದ ಅವನು ಬೆವರುವುದಾಗಲೀ, ರಕ್ತಸ್ರಾವವಾಗುವುದಾಗಲೀ ಅಥವಾ ಆಯಾಸದಿಂದ ಧೂಳಿನಿಂದ ಕುಡಿದವನಾಗುವುದು ಅಸಾಧ್ಯ. ಆದರೆ ಇಲ್ಲಿ ತನ್ನ ಮಿತ್ರನಾದ ಅರ್ಜುನನನ್ನು ಮೆಚ್ಚಿಸಲು ಭಗವಂತನು ಈ ವಿಧವಾದ ನಾಟಕವನ್ನು ಪ್ರದರ್ಶಿಸಿರುವನು. ಅಲ್ಲದೆ ಶ್ರೀಕೃಷ್ಣನ ಮತ್ತೊಂದು ಉದ್ದೇಶವೆಂದರೆ ಭೀಷ್ಮರ ಬಾಣಗಳಲ್ಲಡಗಿರುವ ಅಪಾರ ಶಕ್ತಿಯನ್ನು ಪ್ರಪಂಚಕ್ಕೆ ವಿಶದಪಡಿಸುವುದಾಗಿತ್ತು. ತನ್ನ ಇಬ್ಬರು ಭಕ್ತರನ್ನೂ ಸಂತೋಷಪಡಿಸಲು ಭಗವಾನ್ ಕೃಷ್ಣನು ತನ್ನ ಅವತಾರ ಮಹಿಮೆಯನ್ನು ಮರೆಮಾಚಿ ಸಾಮಾನ್ಯ ಮನುಷ್ಯನ ಪಾತ್ರವನ್ನು ಆಯ್ದುಕೊಂಡನು. ಅರ್ಜುನನಿಗೂ ಸಹ ಈ ಅಸಾಮಾನ್ಯ ದೃಶ್ಯವನ್ನು ವೀಕ್ಷಿಸಲಾಗಲಿಲ್ಲ. ಆದರೆ ಭೀಷ್ಮರಿಗೆ ಈ ವಿಧದ ಅಪರೂಪ ಆಶೀರ್ವಾದವನ್ನು ಭಕ್ತ ಕಿಂಕರನಾದ ಶ್ರೀಕೃಷ್ಣನು ನೀಡಿ ಅವರನ್ನು ಸಂತೋಷಪಡಿಸಿದನು.

ಶ್ಲೋಕ - 6 - ಸಂಸ್ಕೃತ 
ಸಪದಿ ಸಖಿವಚೋ ನಿಶಮ್ಯ ಮಧ್ಯೇ
ನಿಜಪರಯೋರ್ಬಲಯೋ ರಥಂ ನಿವೇಶ್ಯ |
ಸ್ಥಿತವತಿ ಪರಸೈನಿಕಾಯೂರಕ್ಷ್ಣ
ಹೃತವತಿ ಪಾರ್ಥಸಖೇ ರತಿರ್ಮಮಾಸ್ತು ||


ಕನ್ನಡದಲ್ಲಿ 
ಸಖನ ಮಾತನು ಕೇಳಿ ರಥವನುಭಯ-
ಸೇನೆಯ ನಡುವೆ ನಿಲ್ಲಿಸಿ ಶತ್ರುಸೈನಿಕರಾ-
ಯುಷ್ಯವನು ಕುಡಿನೋಟದೊಳೆ ಕದ್ದ
ಪಾರ್ಥಸಖನೊಳೆನಗೆ ಅಮಿತಪ್ರೇಮವಿರಲಿ

ವಿವರಣೆ 
ತನ್ನ ಮಿತ್ರನಾದ ಅರ್ಜುನನ ಮಾತನ್ನು ಕೇಳಿ, ಒಡನೆಯೇ ಸ್ವಸೈನ್ಯ ಮತ್ತು ಶತ್ರುಸೈನ್ಯಗಳ ಮಧ್ಯದಲ್ಲಿ ರಥವನ್ನು ನಿಲ್ಲಿಸಿದವನಾಗಿ, ಕೇವಲ ತನ್ನ ದೃಷ್ಟಿಯಿಂದಲೇ ಶತ್ರುಸೈನಿಕರ ಆಯುಸ್ಸನ್ನು ಕಸಿದು ಬಿಟ್ಟಿರುವ ಪಾರ್ಥ ಸಖನಾದ ಭಗವಾನ್ ಶ್ರೀಕೃಷ್ಣನಲ್ಲಿ ನನಗೆ ಪರಮ ಪ್ರೇಮವಿರಲಿ.

ವ್ಯಾಖ್ಯಾನ 
ಅರ್ಜುನನು ಕೃಷ್ಣನಿಗೆ ತಮ್ಮ ರಥವನ್ನು ಉಭಯ ಸೇನೆಗಳ ಮಧ್ಯೆ ತಂದು ನಿಲ್ಲಿಸುವಂತೆ ಆಜ್ಞೆ ಮಾಡಿದ ಧಾಟಿಯು ಅಹಂಕಾರದಿಂದ ಕೂಡಿತ್ತಾದರೂ, ಶ್ರೀಕೃಷ್ಣನು ಅದನ್ನು ತಪ್ಪಾಗಿ ಗ್ರಹಿಸದೇ ಅರ್ಜುನನು ಹೇಳಿದಂತೆ ರಥವನ್ನು ಉಭಯ ಸೇನೆಗಳ ಮಧ್ಯೆ ಕೊಂಡೊಯ್ದನು.
ನಂತರ ಶ್ರೀಕೃಷ್ಣನು ತನ್ನ ಮಿತ್ರ ಅರ್ಜುನನಿಗೆ - "ಓ ಅರ್ಜುನ ! ನಮ್ಮ ಮುಂದಿರುವ ಕೌರವರನ್ನು ನೋಡು"
ಇಲ್ಲಿ ರಾಮಾನುಜಾಚಾರ್ಯರ ವ್ಯಾಖ್ಯಾನವು ಹೃದಯಸ್ಪರ್ಶಿಯಾಗಿದೆ. ಅವರು ಹೀಗೆ ಬಣ್ಣಿಸುತ್ತಾರೆ :
"ಬ್ರಹ್ಮಾಂಡ ನಾಯಕನು ಗರ್ವದಿಂದ ಆಜ್ಞೆಮಾಡಿದ ಅರ್ಜುನನ ಮಾತಿಗೆ ಮನ್ನಣೆ ನೀಡುತ್ತಾನೆ."
" ತನ್ನಲ್ಲಿ ಆಶ್ರಯ ಪಡೆಯುವವರ ಮೇಲೆ ಅತೀವ ಪ್ರೀತಿಯುಳ್ಳವನಾಗಿ, ಸಂಪೂರ್ಣ ಜ್ಞಾನ ನಿಧಿ, ಅಪಾರ ಶಕ್ತಿ, ಪ್ರಭುತ್ವ, ಸಾಮರ್ಥ್ಯ ಮತ್ತು ವೈಭವೋಪೇತನಾದ, ತನ್ನ ಇಚ್ಛೆಯಂತೆ ಇಡೀ ವಿಶ್ವವನ್ನು ಸೃಷ್ಟಿಸಿ ಹಾಗೂ ವಿಸರ್ಜಿಸುವ ಶಕ್ತಿಯುಳ್ಳ, ಪ್ರತಿ ಹಂತದಲ್ಲೂ ನಮ್ಮ ಅಂತರಂಗ ಹಾಗೂ ಬಹಿರಂಗಗಳನ್ನು ಯಾವಾಗಲೂ ನಿಯಂತ್ರಿಸುವ, ಸರ್ವೋಚ್ಚ ಶ್ರೀ ಕೃಷ್ಣನು ಅರ್ಜುನನು ಆಜ್ಞಾಪಿಸಿದ ಕಾರ್ಯವನ್ನು ( ರಥವನ್ನು ಎರಡು ಸೈನ್ಯಗಳ ಮಧ್ಯೆ ನಿಲ್ಲಿಸಬೇಕೆಂಬ) ಕೂಡಲೇ ಕಾರ್ಯಗತಗೊಳೋಸಿದನು". ಆಚಾರ್ಯ ರಾಮಾನುಜರು ಈ ಮೂಲಕ ನಮಗೆ ಈ ಸಂದರ್ಭದಲ್ಲಿ ಯಾರು ಸೇವಕ ಮತ್ತು ಯಜಮಾನ ಎಂಬುದನ್ನು ಸ್ಪಷ್ಟೀಕರಿಸುತ್ತಾರೆ. ಶ್ರೀಕೃಷ್ಣನು ತನ್ನ ಒಂದು ಕಿರುನೋಟದಿಂದಲೇ ಪಾಂಡವರ ಶತ್ರುಗಳ ಪ್ರಾಣವನ್ನು ಹಾಗೂ ತನ್ನ ಪ್ರಾಣವನ್ನೂ ಸಹ ತೆಗೆಯುವ ಸುಳಿವನ್ನು ಈ ಶ್ಲೋಕದಲ್ಲಿ ವ್ಯಕ್ತಪಡಿಸಿದನೆಂದು ಭೀಷ್ಮ ಪಿತಾಮಹರು ವ್ಯಕ್ತಪಡಿಸಿದ್ದಾರೆ. ಶತ್ರುಗಳ ಸಾವು ಒಂದೊಂದಾಗಿ ನಾಟಕದಲ್ಲಿನ ನಟರು ತಮ್ಮ ತಮ್ಮ ಪಾತ್ರಗಳನ್ನು ನಟಿಸುವಂತೆ ಮುಂದೆ ಬಂದೇ ಬರುತ್ತದೆ.

ಶ್ಲೋಕ - 7 - ಸಂಸ್ಕೃತ 
ವ್ಯವಹಿತಪೃತನಾಮುಖಂ ನಿರೀಕ್ಷ್ಯ
ಸ್ವಜನವಧಾದ್ವಿಮುಖಸ್ಯ ದೋಷಬುಧ್ಯಾ |
ಕುಮತಿಮಹರದಾತ್ಮಾವಿದ್ಯಯಾ ಯ-
ಶ್ಚರಾಣರತಿಃ ಪರಮಸ್ಯ ತಸ್ಯ ಮೇsಸ್ತು ||

ಕನ್ನಡದಲ್ಲಿ 
ಕುರುಸೇನಾ ಪ್ರಮುಖರನು ವೀಕ್ಷಿಸುತ
ಪರಿಜನವಧೆಗಳುಕಿದರ್ಜುನ-
ಗರುಹಿ ಆತ್ಮ ವಿದ್ಯೆಯಂ ಮೋಹಗಳೆದ
ಪರಮನ ಚರಣದೊಲವೆನಗಿರಲಿ

ವಿವರಣೆ 
ಅರ್ಜುನನು ದೂರದಿಂದ ಕೌರವ ಸೇನೆಯ ಮುಖ್ಯಸ್ಥರಾದ ನಮ್ಮನ್ನು ನೋಡಿದಾಗ ಯುದ್ಧಮಾಡುವುದು ಪಾಪವೆಂದು ತಿಳಿದು, ಅವನು ಸ್ವಜನ ವಧೆಯಿಂದ ವಿಮುಖನಾದನು. ಆಗ ಯಾವ ಜ್ಞಾನಮೂರ್ತಿಯು ಶ್ರೀಗೀತೆಯೆಂಬ ಆತ್ಮವಿದ್ಯೆಯನ್ನು ಉಪದೇಶಿಸಿ, ಅವನ ಮೋಹವನ್ನು ಹೋಗಲಾಡಿಸಿದನೋ ಅಂತಹ ಪರಮ ಪುರುಷ ಭಗವಾನ್ ಶ್ರೀಕೃಷ್ಣನ ಚರಣಗಳಲ್ಲಿ ನನ್ನ ಪ್ರೀತಿಯು ಸ್ಥಿರವಾಗಿರಲಿ.

ವ್ಯಾಖ್ಯಾನ 
ಪಾರ್ಥಸಾರಥಿಯು ಗೊಂಡಲದಲ್ಲಿದ್ದ ಅರ್ಜುನನಿಗೆ ಗೀತೋಪದೇಶವನ್ನು ನೀಡಿ ಧರ್ಮಯುದ್ಧದಲ್ಲಿ ಬಂಧು ಬಾಂಧವರನ್ನು ಹತ್ಯೆಗೈಯುವುದು ಪಾಪದ ಕೆಲಸವಲ್ಲವೆಂದು ಆದೇಶಿಸುತ್ತಾನೆ. ಮುಂದುವರೆದು ಶ್ರೀಕೃಷ್ಣನು ಅರ್ಜುನನಿಗೆ ಈ ರೀತಿಯಾಗಿ ತಿಳಿಹೇಳುತ್ತಾನೆ - "ಅರ್ಜುನ, ಸಂತಾಪಕ್ಕೆ ಅರ್ಹರಲ್ಲದವರ ಬಗೆಗೆ ನೀನು ದುಃಖಪಡುತ್ತಿರುವೆ. ಶತ್ರು ಪಕ್ಷದಲ್ಲಿರುವ ಯಾವ ಯೋಧರ ಬಗೆಗೆ ನೀನು ಸಂತಾಪ ಪಡುತ್ತಿರುವೆಯೋ ಅವರನ್ನೆಲ್ಲಾ ಆಗಲೇ ನಾನು ನಾಶ ಮಾಡಿರುವೆ. ಅವರ ದೈಹಿಕ ವಿನಾಶವನ್ನು ಮಾಡಲು ನೀನು ಕೇವಲ ನೆಪಮಾತ್ರ. ಆದ್ದರಿಂದ ಪಾಪವು ನಿನ್ನನ್ನು ಸುತ್ತಿಕೊಳ್ಳುವುದಿಲ್ಲ". ಭೀಷ್ಮ ಪಿತಾಮಹನು ಗೀತಾಚಾರ್ಯನ ಪಾದ ಪದ್ಮಗಳಲ್ಲಿ ಅವಿಚ್ಛಿನ್ನವಾದ ಹಾಗೂ ಅವಿರತವಾದ ಭಕ್ತಿಯನ್ನು ನೀಡಿ ಆಶೀರ್ವಹಿಸೆಂದು ಪ್ರಾರ್ಥಿಸುತ್ತಾನೆ.

ಶ್ಲೋಕ - 8 - ಸಂಸ್ಕೃತ 
ಸ್ವನಿಗಮಮಪಹಾಯ ಮತ್ಪ್ರತಿಜ್ಞಾಮ್
ಋತಮಧಿಕರ್ತಮವಪ್ಲುತೋ ರಥಸ್ಥಃ |
ಧೃತರತಚರಣೋsಭ್ಯಾಯಾಚ್ಚಲದ್ಗು-
ರ್ಹರಿರಿವ ಹಂತುಮಿಭಂ ಗತೋತ್ತರೀಯಃ ||

ಕನ್ನಡದಲ್ಲಿ 
ಎನ್ನ ಪ್ರತಿಜ್ಞೆಯ ನಿಜವ ಗೈಯಲು
ತನ್ನ ಶಪಥವ ಮುರಿದು ರಥದಿಂ ಧುಮುಕಿ
ಸನ್ನುತನು ಚಕ್ರವಪಿಡಿದು ಆನೆ ಕೊಲ್ವ ಸಿಂಹದೊ-
ಲೆನ್ನೆಡೆಗೆ ಧಾವಿಸೆ ಬಿದ್ದುದವನುತ್ತರೀಯ

ವಿವರಣೆ 
"ಶ್ರೀಕೃಷ್ಣನು ಯುದ್ಧದಲ್ಲಿ ಶಸ್ತ್ರವನ್ನು ಧರಿಸುವಂತೆ ಮಾಡಿಬಿಡುತ್ತೇನೆ" ಎಂದು ನಾನು ಪ್ರತಿಜ್ಞೆ ಮಾಡಿದ್ದೆ. "ನಾನು ಯುದ್ಧದಲ್ಲಿ ಶಸ್ತ್ರವನ್ನು ಹಿಡಿಯುವುದಿಲ್ಲ" ಎಂದು ಶ್ರೀಕೃಷ್ಣನು ಪ್ರತಿಜ್ಞೆ ಮಾಡಿದ್ದನು. ಆದರೆ ಭಕ್ತನಾದ ನನ್ನ ಪ್ರತಿಜ್ಞೆಯನ್ನು ನಿಜವಾಗಿಸುವುದಕ್ಕಾಗಿ ತನ್ನ ಶಪಥವನ್ನೇ ಮುರಿದು, ಸ್ವಾಮಿಯು ರಥದಿಂದ ಕೆಳಗೆ ಧುಮುಕಿ, ಸಿಂಹವು ಆನೆಯನ್ನು ಸಂಹರಿಸಲು ಅದರ ಮೇಲೆ ಎರಗುವಂತೆ, ಚಕ್ರವನ್ನೆತ್ತಿಕೊಂಡು ನನ್ನ ಮೇಲೆರಗಲು ಧಾವಿಸಿ ಬರುತ್ತಿರುವಾಗ ಭೂಮಿಯು ನಡುಗಿತು. ಹೆಗಲಲ್ಲಿ ಹೊತ್ತ ಉತ್ತರೀಯವು ಜಾರಿ ಬಿತ್ತು. ಇಂಥಹ ಶ್ರೀಕೃಷ್ಣನಲ್ಲಿ ನನ್ನ ಪ್ರೀತಿಯು ಸ್ಥಿರವಾಗಲಿ.

ಮತ್ತೊಂದು ವಿವರಣೆ / ವ್ಯಾಖ್ಯಾನ: 
ಭಗವಂತನು ಪವಿತ್ರ ವೇದಗಳಿಗೆ ಸಮಾನವಾದ ತನ್ನ ಶಪಥವನ್ನು ಮರೆತು ನನ್ನ ಶಪಥವನ್ನು (ನಾನು ಯುದ್ಧ ಪೂರ್ವದಲ್ಲಿ ಕೃಷ್ಣನನ್ನು ನನ್ನೊಡನೆ ನಡೆಯುವ ಯುದ್ಧದಲ್ಲಿ ಶಸ್ತ್ರ ಧರಿಸುವಂತೆ ಮಾಡಿಯೇ ತೀರುತ್ತೇನೆಂದು ಮಾಡಿದ್ದ ಶಪಥ) ಪೂರೈಸಲು ಮದಿಸಿದ ಆನೆಯನ್ನು ಕೊಲ್ಲುವ ಸಿಂಹದಂತೆ ನನ್ನಡೆಗೆ ಧಾವಿಸಿ ಬರುತ್ತಿರುವ ದೃಶ್ಯವನ್ನು ವೀಕ್ಷಿಸುವ ಅನುಭವವು ರೋಮಾಂಚನವಾದದ್ದು. ಶ್ರೀಕೃಷ್ಣನು ರಥದಿಂದ ಧುಮಿಕಿದೊಡನೇ ಅವನ ಭಾರಕ್ಕೆ ಭೂಮಿಯು ಕಂಪಿಸಿತು, ಅವನು ಧರಿಸಿದ್ದ ಮೇಲ್ವಸ್ತ್ರವು ಅವಣಿಗರಿವಿಲ್ಲದಂತೆ ಜಾರಿ ಭೂಮಿಯಮೇಲೆ ಬಿದ್ದಿತು ಹಾಗೂ ಅವನು ತನ್ನ ಕೈಯಲ್ಲಿ ಸುದರ್ಶನ ಚಕ್ರವನ್ನು ಹಿಡಿದು ನನ್ನೆಡೆಗೆ ಧಾವಿಸಿ ಬರತೊಡಗಿದನು. ಅವನ ತೋಳುಗಳು ನನ್ನ ತೀಕ್ಷ್ಣ ಬಾಣಗಳಿಂದ ತೂತಾಗಿ ಅಲ್ಲಿಂದ ರಕ್ತ ಸುರಿಯುತ್ತಿದ್ದರೂ ಲೆಕ್ಕಿಸದೇ ಶಾಸ್ತ್ರಧಾರಿಯಾದ ನನ್ನನ್ನು ಕೊಲ್ಲಲು ಧಾವಿಸಿ ಬರುತ್ತಿರುವನು. ಭಕ್ತ ವತ್ಸಲನು ತನ್ನ ಒಬ್ಬ ಭಕ್ತನಿಗೆ (ಅರ್ಜುನನಿಗೆ) ಪ್ರಾಣದಾನವನ್ನು ನೀಡುವುದರ ಜೊತೆಗೆ ಮತ್ತೊಬ್ಬ ಭಕ್ತನ (ನನ್ನ) ಪ್ರತಿಜ್ಞೆಯನ್ನು ಪೂರೈಸುವ ಅಪಾರ ಕರುಣಾಮೂರ್ತಿಯು ಎರಡು ಬಾರಿ ಭಕ್ತದಾಕ್ಷಿಣ್ಯವನ್ನು ಕೊಡಮಾಡಿದನು. ಅಂತಹ ಭಕ್ತವತ್ಸಲ ಮುಕುಂದನು ನನಗೆ ಶಾಶ್ವತವಾದ ಆಶ್ರಯ ಹಾಗೂ ಸಹಾಯವನ್ನು ಕರುಣಿಸಲಿ. (ವಿ.ಸೂ: ಇದೇ ವ್ಯಾಖ್ಯಾನವು ಮುಂದಿನ ಶ್ಲೋಕಕ್ಕೂ ಅನ್ವಯಿಸುತ್ತದೆ)

ಶ್ಲೋಕ - 9 ಸಂಸ್ಕೃತ
ಶಿತವಿಶಿಖಹತೋ ವಿಶೀರ್ಣದಂಶಃ
ಕ್ಷತಜಪರಿಪ್ಲುತಆತತಾಯಿನೋ ಮೇ |
ಪ್ರಸಭಮಭಿಸಸಾರ ಮದ್ವಧಾರ್ಥಂ
ಸ ಭವತು ಮೇ ಭಗವಾನ್ಗತಿರ್ಮುಕುಂದಃ ||

ಕನ್ನಡದಲ್ಲಿ 
ದುರುಳನಾದೆನ್ನ ಹರಿತಶರಗಳಿಂ
ತರಿದು ಕವಚ ರುಧಿರಮಯವಾಗಿರೆ
ಉರವು ರಭಸದಿಂ ವಧಿಸೆ ನುಗ್ಗಿದ
ಸಿರಿಮುಕುಂದನೆನಗಾಶ್ರಯಮಾಗಲಿ

ವಿವರಣೆ 
ಆತತಾಯಿಯಾದ ನಾನು ತೀಕ್ಷ್ಣವಾದ ಬಾಣಗಳನ್ನು ಹೊಡೆದು ಅವನ ಕವಚವನ್ನು ತುಂಡರಿಸಿದ್ದೆ. ಅದರಿಂದ ಅವನ ಇಡೀ ಶರೀರವು ರಕ್ತದಿಂದ ತೊಯ್ದು ಹೋಗಿತ್ತು. ಅರ್ಜುನನು ತಡೆಯುತ್ತಿದ್ದರೂ ಕೇಳದೆ ನನ್ನನ್ನು ಕೊಂದೇ ಹಾಕುವೆನೆಂದು ಬಲವಂತವಾಗಿ ಯಾವಾತನು ನನ್ನನ್ನು ಅನುಗ್ರಹಿಸಲು ನನ್ನ ಕಡೆಗೆ ಓಡಿ ಬಂದನೋ, ಅಂತಹ ಭಕ್ತವತ್ಸಲನಾದ ಭಗವಾನ್ ಶ್ರೀಕೃಷ್ಣನೇ ನನಗೆ ಗತಿಯಾಗಲಿ; ಆಶ್ರಯವಾಗಲಿ.

ಶ್ಲೋಕ - 10 - ಸಂಸ್ಕೃತ 
ವಿಜಯರಥಕುಟುಂಬ ಆತ್ತತೋತ್ರೇ
ಧೃತಹಯರಶ್ಮಿನಿ ತಚ್ಛ್ರಿಯೇಕ್ಷಣೀಯೇ |
ಭಗವತಿ ರತಿರಸ್ತು ಮೇ ಮುಮೂರ್ಷೋ-
ರ್ಯಮಿಹ ನಿರೀಕ್ಷ್ಯಹತಾ ಗತಾಃಸರುಪಮ್ ||

ಕನ್ನಡದಲ್ಲಿ 
ಯಾರನೀಕ್ಷಿಸುತ ರಣದಲಿ ಮಡಿದು
ಸಾರೂಪ್ಯ ಮುಕುತಿಯ ತಾವು ಪಡೆದರೊ
ಚಾರುಕರದ ಲಗಾಮು ಚಾಟಿಯ ಪಾರ್ಥ-
ಸಾರಥಿಯೊಲ್ಮೆಯಾಗಲಿ ಸಾಯುತಿರುವೆನಗೆ

ವಿವರಣೆ 
ಅರ್ಜುನನ ರಥ ಸಾರಥಿಯಾಗಿ ಒಂದು ಕೈಯಲ್ಲಿ ಚಾವಟಿಗೆಯನ್ನೂ, ಮತ್ತೊಂದು ಕೈಯಲ್ಲಿ ಕುದುರೆಗಳ ವಾಘೆಗಳನ್ನು ಹಿಡಿದುಕೊಂಡು, ಆ ವೇಷದಲ್ಲಿಯೂ ಅತ್ಯಂತ ರಮಣೀಯದರ್ಶನನಾಗಿದ್ದ ಪ್ರಭುವನ್ನು ನೋಡುತ್ತಾ ಮಹಾಭಾರತದ ಯುದ್ಧದಲ್ಲಿ ಮಡಿದವರೆಲ್ಲರೂ ಆತನ ಸಾರೂಪ್ಯ ಮುಕ್ತಿಯನ್ನೇ ಪಡೆದರೋ, ಅಂತಹ ಪಾರ್ಥಸಾರಥಿ ಭಗವಾನ್ ಶ್ರೀಕೃಷ್ಣನಲ್ಲಿ ಮರಣಾಸನ್ನನಾದ ನನಗೆ ಪರಮ ಪ್ರೀತಿ ಉಂಟಾಗಲಿ.

ವ್ಯಾಖ್ಯಾನ: 
ಸಾಮಾನ್ಯವಾಗಿ ಕೆಲವು ಕಾರ್ಯಗಳನ್ನು ನಿಷೇಧಿಸಿದ್ದರೂ ತನ್ನ ಸಂಸಾರವನ್ನು ಎಲ್ಲ ಸಂದರ್ಭದಲ್ಲೂ ರಕ್ಷಿಸಲು ಎಲ್ಲ ವಿಧದ ಕಾರ್ಯಗಳನ್ನು ಕೈಗೊಳ್ಳಬಹುದೆಂದು ಧರ್ಮಶಾಸ್ತ್ರವು ಅನುಮತಿಸುತ್ತದೆ. ಪಾರ್ಥಸಾರಥಿಯು ತನ್ನ ಪ್ರತಿಜ್ಞೆಯನ್ನು (ಪಾಂಡವ-ಕೌರವ ಯುದ್ಧದಲ್ಲಿ ಯುದ್ಧಭೂಮಿಯಲ್ಲಿ ಶಸ್ತ್ರವನ್ನು ಉಪಯೋಗಿಸುವುದಿಲ್ಲವೆಂಬ) ಕೈಬಿಟ್ಟದ್ದು ಧರ್ಮಶಾಸ್ತ್ರದ ಆಣತಿಯ ಮೇರೆಗೆ ಇರಬಹುದು. ಅವನ ಉದ್ದೇಶವು ವಿಜಯ-ರಥ ಕುಟುಂಬವನ್ನು ಉಳಿಸುವುದಾಗಿತ್ತು. ಭೂಭಾರವನ್ನು ಕಡಿಮೆ ಮಾಡುವುದೇ ನಮ್ಮ ಭಗವಂತನ ಸಂಕಲ್ಪ. ಅವನು ತನ್ನ ಪ್ರತಿಜ್ಞೆಯನ್ನು ಮುರಿಯುವ ಉದ್ದೇಶವನ್ನು ವಿಶ್ಲೇಷಿಸುವ ಕಾರ್ಯವು ನಮ್ಮಂಥಃ ಅಲ್ಪರಿಗೆ ಸಾಧ್ಯವೆ? ವರ್ಣನೆಗೆ ನಿಲುಕದ ಯೋಗಶಕ್ತಿಯು ಭಗವಂತನಿಗಿದೆ. ಭೀಷ್ಮರಿಗೆ ಮಾತ್ರ ತನ್ನ ಕೊನೆಯ ಕ್ಷಣದಲ್ಲಿ ಭಗವಾನ್ ಶ್ರೀಕೃಷ್ಣನ ದಿವ್ಯ ದರ್ಶನ ಹಾಗೂ ಆಶೀರ್ವಾದದಿಂದ ಮೋಕ್ಷವನ್ನು ಪಡೆದರು. ಮೋಕ್ಷವನ್ನು ಪಡೆಯಲು ಅವರ ಹೇಳಿಕೆಯನ್ನು ಅನುಸರಿಸಿದರೆ ಸಾಕು.

ಶ್ಲೋಕ - 11 - ಸಂಸ್ಕೃತ
ಲಲಿತಗತಿವಿಲಾಸವಲ್ಗುಹಾಸ-
ಪ್ರಣಯನಿರೀಕ್ಷಣಕಲ್ಪಿತೋರುಮಾನಾಃ |
ಕೃತಮನುಕೃತವತ್ಯ ಉನ್ಮಾದಾಂಧಾಃ
ಪ್ರಕೃತಿಮಗನ್ಕಿಲ ಯಸ್ಯ ಗೋಪವಧ್ವಃ ||

ಕನ್ನಡದಲ್ಲಿ
ಆರ ಹಾವ ಭಾವ ಕುಡಿಗಣ್ಣೋಟದಿಂ ಗೋಪೀ - 
ನಾರಿಯರತ್ಯಾನಂದ ಪರವಶರಾಗಿ
ವಾರಿಜಾಕ್ಷನ ಲೀಲೆಯನನುಕರಿಸಿದರಾ ಅ-
ಪಾರ ಮಹಿಮನಲೆನಗೊಲುಮೆಯಕ್ಕೆ

ವಿವರಣೆ 
ಯಾರ ಹಾವ - ಭಾವಗಳಿಂದ ಕೂಡಿದ ವಿಲಾಸ, ಮಧುರವಾದ ಮಂದಹಾಸ, ಬೆಡಗು, ಬಿನ್ನಾಣ, ಪ್ರೇಮಯುಕ್ತವಾದ ಕಡೆಗಣ್ಣ ನೋಟದಿಂದ ಅತ್ಯಂತ ಸಮ್ಮಾನಿತರಾದ ಗೋಪಿಯರು ರಾಸಲೀಲೆಯಲ್ಲಿ ಅವನು ಅಂತರ್ಧಾನನಾದಾಗ ಪ್ರೇಮೋನ್ಮತ್ತರಾಗಿ ಅವನ ಆ ದಿವ್ಯಲೀಲೆಗಳನ್ನು ಅನುಕರಣೆ ಮಾಡುತ್ತಾ ತನ್ಮಯರಾಗಿ ಬಿಟ್ಟರೋ, ಅಂತಹ ಭಗವಾನ್ ಶ್ರೀಕೃಷ್ಣನಲ್ಲಿ ನನಗೆ ಪರಮ ಪ್ರೇಮವು ಉಂಟಾಗಲಿ

ಮತ್ತೊಂದು ವಿವರಣೆ / ವ್ಯಾಖ್ಯಾನ : 
ಕ್ಷತ್ರಿಯ ಧರ್ಮವನ್ನು ಅನುಸರಿಸಿ ಮುಕ್ತಿಯನ್ನು ಪಡೆಯುವುದರಲ್ಲಿ ಆಶ್ಚರ್ಯವೇನಿಲ್ಲ. ಭಗವಾನ್ ಶ್ರೀಕೃಷ್ಣನ ಲೀಲೆಯನ್ನು ನೋಡಿ ಆನಂದಿಸಿದ ವಿಶೇಷ ಜ್ಞಾನವಿಲ್ಲದ ಗೋಪಿಯರೂ ಮುಕ್ತಿಯನ್ನು ಪಡೆದರು. ಭಗವಂತನಿಗೆ ಗೋಪಿಕಾಸ್ತ್ರೀಯರು ಪ್ರೀತಿ ಹಾಗೂ ಗೌರವಗಳ ಸಂಕೇತವಾಗಿದ್ದರು ಮತ್ತು ಅವರು ಕೃಷ್ಣ ಲೀಲೆಗಳಲ್ಲಿ ಭಾಗವಹಿಸಿ ಮುಕ್ತಿಯನ್ನು ಪಡೆದರು. ಶ್ರೀ ಕೃಷ್ಣನ ಸುಂದರ ಲೀಲೆ, ಸುಂದರ ಆಟ-ಪಾಠಗಳಲ್ಲಿ, ಮನಮೋಹಕ ಮುಗುಳುನಗೆಗಳಲ್ಲಿ, ಕರುಣಾಪೂರಿತ ನೋಟಗಳಲ್ಲಿ ಮತ್ತು ಅವನ ಪ್ರೀತಿಗೆ ಪಾತ್ರರಾಗುವ ಅದೃಷ್ಟವನ್ನು ಪಡೆದ ಗೋಪಿಕಾಸ್ತ್ರೀಯರು ಅವನ ಅನುಗ್ರಹದಿಂದ ಮೋಕ್ಷವನ್ನು ಪಡೆದರು.

ಶ್ಲೋಕ - 12 - ಸಂಸ್ಕೃತ 
ಮುನಿಗಣನೃಪವರ್ಯಸಂಕುಲೇsಂತಃ
ಸದಸಿ ಯುಧಿಷ್ಠಿರರಾಜಸೂಯ ಏಷಾಮ್ |
ಅರ್ಹಣಮುಪಪೇದ ಈಕ್ಷಣೀಯೋ
ಮಮ ದೃಶಿಗೋಚರ ಏಷ ಆವಿರಾತ್ಮಾ ||

ಕನ್ನಡದಲ್ಲಿ 
ಮುನಿಗಣ ರಾಜವರ್ಯರು ನೆರೆದ
ಘನ ರಾಜಸೂಯದಲಗ್ರಪೂಜೆಯ ಪಡೆದ
ಗುಣನಿಧಿಯಿಂದಿಲ್ಲಿ.ಕರುಣಿಸಿಹ ದರು -
ಶನವನೆನಗೆ ಅವನಲೆನ್ನಾತ್ಮ ನೆಲೆಗೊಳಲಿ

ವಿವರಣೆ 
ಮಹಾಮುನಿಗಳೂ, ರಾಜಶ್ರೇಷ್ಠರೂ ನೆರೆದಿದ್ದ ಧರ್ಮರಾಜನ ರಾಜಸೂಯ ಯಜ್ಞದ ಸಭೆಯಲ್ಲಿ ಮೊಟ್ಟಮೊದಲಿಗೆ ಯಾರ ಅಗ್ರಪೂಜೆಯು ನನ್ನ ಕಣ್ಣಮುಂದೆಯೇ ನಡೆಯಿತೋ, ಅಂತಹ ಸರ್ವರಿಗೂ ಆತ್ಮಸ್ವರೂಪನಾದ ಭಗವಾನ್ ಶ್ರೀಕೃಷ್ಣನೇ ಇಂದು ನನ್ನ ಮೃತ್ಯುಸಮಯದಲ್ಲಿ ನನ್ನೆದುರಿನಲ್ಲೇ ದರ್ಶನ ನೀಡುತ್ತಿರುವನಲ್ಲ ! ಅವನಲ್ಲಿ ನನಗೆ ಅಖಂಡವಾದ ಪ್ರೇಮ ಉಂಟಾಗಲಿ.

ಮತ್ತೊಂದು ವಿವರಣೆ / ವ್ಯಾಖ್ಯಾನ : 
ಯುಧಿಷ್ಠಿರನ ರಾಜಸೂಯ ಯಾಗದಲ್ಲಿ ಭಾಗವಹಿಸಿದ್ದ ಋಷಿಗಳು, ಪ್ರಖ್ಯಾತ ರಾಜರುಗಳು ಭಗವಾನ್ ಶ್ರೀಕೃಷ್ಣನ ಅಪ್ರತಿಮ ಸೌಂದರ್ಯವನ್ನು ಕೊಂಡಾಡಿ, ಅವನ ಕರುಣಾಪೂರಿತ ದೃಷ್ಟಿಗಳಲ್ಲಿ ಮಿಂದು ಪಾವನರಾಗಿ ಅವನಿಗೆ ತಮ್ಮನ್ನೇ ಅರ್ಪಿಸಿಕೊಂಡರು. ಎಲ್ಲರ ಪ್ರಶಂಸೆಗಳನ್ನು ಪಡೆದ ಆ ಭಗವಂತನು ನನ್ನೆದುರು ನಿಂತು ತನ್ನ ದಿವ್ಯ ದರ್ಶನವನ್ನು ಕರುಣಿಸಿ ನನ್ನನ್ನು ಆಶೀರ್ವಹಿಸಿದ್ದು ನನ್ನ ಪರಮ ಸೌಭಾಗ್ಯ. ಅವನ ಆಶೀರ್ವಾದಕ್ಕೆ ಸರಿಸಾಟಿಯಿಲ್ಲ ಮತ್ತು ಅಳೆಯಲಾಗದ್ದು.

ಶ್ಲೋಕ - 13 - ಸಂಸ್ಕೃತ 
ತಮಿಮಮಹಮಜಂ ಶರೀರಭಾಜಾಂ
ಹೃದಿ ಹೃದಿ ದಿಷ್ಠಿತಮಾತ್ಮಕಲ್ಪಿತಾನಾಮ್ |
ಪ್ರತಿದೃಶಮಿವ ನೈಕಧಾರ್ಕಮೇಕಂ
ಸಮಧಿಗತೋsಸ್ಮಿ ವಿಧೂತಭೇದಮೋಹಃ ||

ಕನ್ನಡದಲ್ಲಿ 
ಓರ್ವನೆ ರವಿ ಜಗಕೆ ಪರಿಪರಿಯಾಗಿ
ತೋರ್ವಂತೊಬ್ಬ ಅಜನು ತಾನೆ ಬಹುರೂಪಿ
ಸರ್ವಭೇದವ ತೊರೆದು ಮೋಹವ ಕಳೆದು
ಸರ್ವಾತ್ಮ ಕೃಷ್ಣನಲೆ ಲೀನವಹೆ ನಾನಿನ್ನು

ವಿವರಣೆ 
ಒಬ್ಬನೇ ಸೂರ್ಯನು ಬೇರೆ - ಬೇರೆ ಕಣ್ಣುಗಳಿಗೆ ಅನೇಕ ರೂಪಿಯಾಗಿ ತೋರುವಂತೆಯೇ ಅಜನ್ಮನಾದ ಭಗವಾನ್ ಶ್ರೀಕೃಷ್ಣನು ತನ್ನಿಂದಲೇ ರಚಿತವಾದ ಅನೇಕ ಶರೀರಧಾರಿಗಳ ಹೃದಯಗಳಲ್ಲಿ ಅಂತರ್ಯಾಮಿಯಾಗಿ ಅನೇಕರೂಪಗಳಂತೆ ಕಂಡು ಬರುತ್ತಿದ್ದಾನೆ. ವಾಸ್ತವವಾಗಿ ಓರ್ವನೇ ಎಲ್ಲರಲ್ಲಿ ವಿರಾಜಮಾನನಾಗಿದ್ದಾನೆ. ಅಂತಹ ಭಗವಂತನನ್ನು ನಾನು ಭೇದ-ಭ್ರಮರಹಿತನಾಗಿ ಪಡೆದುಕೊಂಡು ಏಕಾತ್ಮಭಾವವುಂಟಾದವನಾಗಿ, ಅವನ ಇದಿರಿನಲ್ಲೇ ಶರೀರತ್ಯಾಗ ಮಾಡುತ್ತಿದ್ದೇನೆ.
ಮತ್ತೊಂದು ವಿವರಣೆ: 
ಭಗವಂತನ ಸೃಷ್ಟಿಯಲ್ಲಿನ ಪ್ರತಿಯೊಂದು ಜೀವಿಗಳ ಹೃದಯದಲ್ಲೂ ಬೆಳಗುತ್ತಿರುವ ಹುಟ್ಟು ಸಾವುಗಳಿಲ್ಲದ ಶಕ್ತಿಯೊಂದಿದೆ ಎಂಬ ಸತ್ಯ ಸಂಗತಿಯು ನನಗೀಗ ಮನವರಿಕೆಯಾಗುತ್ತಿದೆ. ಈ ಸರ್ವೋಚ್ಚ ಸತ್ಯವನ್ನರಿತ ನಂತರ ನನ್ನನ್ನು ಆವರಿಸಿದ ಅಜ್ಞಾನವು ಈಗ ಮಾಯವಾಯಿತು.
ಆಕಾಶದಲ್ಲಿ ಪ್ರಜ್ವಲಿಸುತ್ತಿರುವ ಸೂರ್ಯನೊಬ್ಬನೇ ಆದರೂ ಅವನನ್ನು ನೋಡುತ್ತಿರುವುದು ಎಲ್ಲ ಕಣ್ಣುಗಳು. ಅಪಾರವಾದ ಕಣ್ಣುಗಳು ಸೂರ್ಯನನ್ನು ವೀಕ್ಷಿಸುವ ಅನುಭವಗಳನ್ನು ಹೊಂದಿದ್ದರೂ, ನೋಡಲ್ಪಟ್ಟಿರುವ ಸೂರ್ಯನಲ್ಲಿ ಯಾವುದೇ ವ್ಯತ್ಯಾಸವಿರುವುದಿಲ್ಲ. ಅದೇ ಸೂರ್ಯನನ್ನು ನೀರು ತುಂಬಿದ ಎಣಿಸಲಾಗದಷ್ಟು ಪಾತ್ರೆಗಳಲ್ಲಿ ಪ್ರತಿಬಿಂಬರೂಪದಲ್ಲಿ ಕಾಣಿಸಿದರೂ ಯಾವುದೇ ವ್ಯತ್ಯಾಸವಿರುವುದಿಲ್ಲ.
ಅಂತೆಯೇ ಲೆಕ್ಕವಿಲ್ಲದಷ್ಟು ಯೋಗಿಗಳ ಹೃದಯಗಳಲ್ಲಿ ಪರಮಾತ್ಮನ ಅನುಭವಗಳನ್ನು ತುಂಬಿಕೊಂಡಿದ್ದರೂ ಎಲ್ಲವೂ ಒಂದೇ ಆಗಿರುತ್ತದೆ. ಈಗ ನನಗೆ ಈ ಪರಮ ಸತ್ಯದ ಅರಿವುಂಟಾಗಿ ನಿತ್ಯ ತೃಪ್ತಿಯನ್ನು ಪಡೆದೆ.

ವ್ಯಾಖ್ಯಾನ : 
ಹೀಗೆ ಭರತ ವಂಶದ ಪಿತಾಮಹ ಭೀಷ್ಮರು ಭಗವಾನ್ ಶ್ರೀ ಕೃಷ್ಣನನ್ನು ಯುದ್ಧ ಭೂಮಿಯಲ್ಲಿ ಸ್ತುತಿಸಿದರು ಮತ್ತು ತಮ್ಮ ಕಾಯಾ ವಾಚಾ ಮನಸ್ಸನ್ನು ಮತ್ತು ಇಂದ್ರಿಯಗಳನ್ನು ಅವನ ಪವಿತ್ರ ಪಾದಗಳಲ್ಲಿ ಸಮರ್ಪಿಸಿದರು. ಸಮರ್ಪಣೆ ಅಪೂರ್ವ ಸಂದರ್ಭದಲ್ಲಿ ಭಗವಂತನ ಆಣತಿಯ ಮೇರೆಗೆ ಸಂಪೂರ್ಣ ನಿಃಶಬ್ಧತೆಯು ನೆಲೆಸಿತ್ತು. ಶ್ರೀಕೃಷ್ಣನ ಪರಮ ಭಕ್ತ, ಭೀಷ್ಮರ ಆತ್ಮ ಜ್ಯೋತಿಯು ಅವನ ಪವಿತ್ರ ಪಾದಗಳನ್ನು ಸೇರಿತು.

ಉಪಸಂಹಾರ 
ಶರಶಯ್ಯೆಯಲ್ಲಿ ಮಲಗಿದ ಭೀಷ್ಮಪಿತಾಮಹರು ವಿಷ್ಣುಸಹಸ್ರನಾಮದ ಮೂಲಕ ಅತ್ಯಂತ ಆದರ, ಶ್ರದ್ಧೆಯಿಂದ ಭಗವಂತನನ್ನು ಸ್ತುತಿಸಿದ್ದರು. ಭಕ್ತರಲ್ಲಿ ಇದರ ಕುರಿತು ಅತ್ಯಾದರವಿದೆ. ಭಾಗವತವನ್ನು ಓದುವವರು ಈ ಭೀಷ್ಮಸ್ತುತಿಯನ್ನು ಪದೇ-ಪದೇ ಓದುತ್ತಾರೆ. ಮಹಾಭಾರತದಲ್ಲಿ ಭೀಷ್ಮರಿಂದ ಮಾಡಲ್ಪಟ್ಟ ಸ್ತುತಿಯು "ಭೀಷ್ಮಸ್ತವರಾಜ" ಎಂಬ ಹೆಸರಿನಿಂದ ಖ್ಯಾತವಾಗಿದೆ. ಭಕ್ತರಾದವರಲ್ಲಿ ಇದರ ಕುರಿತು ಬಹಳ ಆದರವಿದೆ. ಈ ಸ್ತುತಿಗಳಲ್ಲಿ ಭಗವಂತನ ಪ್ರಭಾವ, ಲೀಲೆಗಳನ್ನು ಭೀಷ್ಮರು ಅಲೌಕಿಕವಾಗಿ ವರ್ಣಿಸಿರುವರು. ಭಕ್ತಜನರು ವಿಷ್ಣುಸಹಸ್ರನಾಮವನ್ನು ಅತ್ಯಂತ ಶ್ರದ್ಧೆಯಿಂದ ಪಠಿಸುತ್ತಾರೆ.

ಇಂತು ಭೀಷ್ಮ ಸ್ತವರಾಜ (ಸ್ತುತಿಯು) ಸಂಪೂರ್ಣವಾಯಿತು.
ಲೇಖನದ ಮೂಲಗಳು :
ಸಂಸ್ಕೃತ ಶ್ಲೋಕಗಳ ಮೂಲ : "ಭಾಗವತ ಮಹಾಪುರಾಣ - ಪ್ರಥಮ ಸ್ಕಂದ"
ಕನ್ನಡ ಶ್ಲೋಕಗಳ ಮೂಲ - ಬಿ.ಎಸ್.ಚಂದ್ರಶೇಖರ್ ಅವರ "ಸವಿಗನ್ನಡ ಸ್ತೋತ್ರಚಂದ್ರಿಕೆ", ಪ್ರಕಟಿಸಿದವರು - "ಕನ್ನಡ ಸ್ತೋತ್ರಚಂದ್ರ ಬಳಗ, ಬೆಂಗಳೂರು".
ವಿವರಣೆಯ ಮೂಲ : "ಭಾಗವತ ಮಹಾಪುರಾಣ - ಪ್ರಥಮ ಸ್ಕಂದ"
ವ್ಯಾಖ್ಯಾನಗಳ ಮೂಲ - "ಯು.ವಿ.ಶ್ರೀ ಭಾಷ್ಯ ಸಿಂಹಾಸನಮ್ ಪುರಿಸಾಯಿ ನಾಡಾರ್ ಶ್ರೀ.ಕೃಷ್ಣಮಾಚಾರಿಯರ್ ಸ್ವಾಮಿಯವರ ಭಾಷ್ಯವನ್ನು ಆಂಗ್ಲ ಭಾಷೆಗೆ ಶ್ರೀ ನೃಸಿಂಹ ಸೇವಾ ರಸಿಕನ್ ಒಪ್ಪಿಲಿಯಪ್ಪನ್ ಕೊಯಿಲ್ ಶ್ರೀ.ವರದಾಚಾರಿ ಶಡಕೋಪನ್ ಭಾಷಾಂತರಿಸಿರುವುದನ್ನು ಕನ್ನಡದಲ್ಲಿ ಭಾಷಾಂತರ - ಗುರುಪ್ರಸಾದ್ ಹಾಲ್ಕುರಿಕೆ.





No comments:

Post a Comment

ದಾರಿದ್ರ್ಯ ದಹನ ಶಿವಸ್ತೋತ್ರ

https://savigannadastotra.blogspot.com/2018/10/blog-post.html ದಾರಿದ್ರ್ಯ ದಹನ ಶಿವಸ್ತೋತ್ರ ಪ್ರಸ್ತಾವನೆ : ಸಂಸ್ಕ...