Tuesday, October 9, 2018

ದಾರಿದ್ರ್ಯ ದಹನ ಶಿವಸ್ತೋತ್ರ

https://savigannadastotra.blogspot.com/2018/10/blog-post.html


ದಾರಿದ್ರ್ಯ ದಹನ ಶಿವಸ್ತೋತ್ರ

ಪ್ರಸ್ತಾವನೆ :

ಸಂಸ್ಕೃತ ಭಾಷೆಯ " ದಾರಿದ್ರ್ಯಮ್" ಎಂಬ ಒಂದು ಪದಕ್ಕೆ ಭಾರತೀಯ ಭಾಷೆಗಳಲ್ಲಿ ಅಂತಹುದೇ ಆದ ಅರ್ಥವುಳ್ಳ ಪದಗಳಿವೆಆದರೆ ಈ ಪದಕ್ಕೆ ಪಾಶ್ಚಿಮಾತ್ಯ ಭಾಷೆಗಳಲ್ಲಿ ಸರಿಸಮಾನವಾದ ಪದಗಳೇ ಇಲ್ಲವೆಂದರೂ ಅತಿಶಯೋಕ್ತಿಯಲ್ಲ. ಇದೇ ಸಂಸ್ಕೃತ ಭಾಷೆಯ ಸೌಂದರ್ಯ.

ದಾರಿದ್ರ್ಯಂ ಎಂಬ ಪದಕ್ಕೆ ಸಾಮಾನ್ಯವಾಗಿ ಅರ್ಥೈಸುವುದೇನೆಂದರೆ ಬಡತನ ಎಂಬುದಾಗಿ. ಬಡತನದ ಬಗ್ಗೆ ಯೋಚಿಸಿದಾಗ ನಮ್ಮ ಗಮನಕ್ಕೆ ಬರುವುದು ಭೌತಿಕ ಸಂಪತ್ತು ಹಾಗೂ ಅದರ ಸುತ್ತಾ ಸುತ್ತಿಕೊಂಡಿರುವ ಅಗತ್ಯತೆಗಳು. ಆದರೆ ದಾರಿದ್ರ್ಯಮ್ ಪದದ ಅಂತರಾರ್ಥವು ಇದಕ್ಕಿಂತ ವಿಶಾಲವಾದದ್ದು. ಭೌತಿಕವಾಗಿ ಅಪಾರ ಸಂಪತ್ತನ್ನು ಗಳಿಸಿರುವವನೂ ಅಥವಾ ಹುಟ್ಟಿನಿಂದಲೇ ಆಗರ್ಭ ಶ್ರೀಮಂತ ಕುಟುಂಬದಲ್ಲಿ ಬೆಳೆದು ಬಂದವನೂ ಕೂಡಾ ದಾರಿದ್ರ್ಯದಿಂದ ಬಳಲುತ್ತಿರಬಹುದು. ಹಲವಾರು ಶ್ರೀಮಂತ ವ್ಯಕ್ತಿಗಳು ತಮ್ಮ ರಜೆ ದಿನಗಳನ್ನು ದಿನಕ್ಕೊಂದು ದೇಶಗಳಲ್ಲಿ ಕಳೆದು ದಿನನಿತ್ಯವೂ ಐಷಾರಾಮೀ ಕಾರುಗಳಲ್ಲಿ ಓಡಾಡಿಕೊಂಡಿದ್ದರೂ ಅವರುಗಳೂ ಸಹ ದಾರಿದ್ರ್ಯವನ್ನನುಭವಿಸುತ್ತಿರಬಹುದು. ಅವರಲ್ಲಿ ಕೆಲವರನ್ನು ಕೂಲಿಯವರೊಂದಿಗೋ ಅಥವಾ ತರಕಾರಿ ಮಾರುವವರೊಂದಿಗೋ ಒಂದೆರಡು ರೂಪಾಯಿಗಳಿಗೂ ಚೌಕಾಸಿ ಮಾಡುವವರನ್ನು ಕಾಣಬಹುದು. ಈ ವಿಧದ ಅವರ ನಡಾವಳಿಕೆಗಳು ಅವರು ಅನುಭವಿಸುತ್ತಿರುವ ದಾರಿದ್ರ್ಯದ ಬಗೆಗೆ ಕೆಲವು ಉದಾಹರಣೆಗಳು. ಇದೇ ರೀತಿಯ ಅನೇಕ ಸಂದರ್ಭಗಳನ್ನು ನಮ್ಮ ದೈನಂದಿನ ಚಟುವಟಿಕೆಗಳಲ್ಲಿ ನಾವು ಗಮನಿಸಬಹುದು. ಇವುಗಳ ಒಟ್ಟಿನ ಸಾರಾಂಶವೆಂದರೆ ದಾರಿದ್ರ್ಯವು ಭೌತಿಕ ದಾರಿದ್ರ್ಯಕ್ಕೆ ಮಾತ್ರ ಅನ್ವಯಿಸಲಾರದು ಎಂಬುದನ್ನು ಖಚಿತಪಡಿಸುತ್ತದೆ. ದಾರಿದ್ರ್ಯವು ಭೌತಿಕ ಅಥವಾ ಸಂಪತ್ತಿಗೆ ಇಲ್ಲವೇ ಆಧ್ಯಾತ್ಮಿಕ ಬಡತನಕ್ಕೂ ಅನ್ವಯಿಸುತ್ತದೆ. ಮಹರ್ಷಿ ವಸಿಷ್ಠರ ಈ ಸ್ತೋತ್ರವು ಈ ವಿಧದ ಬಡತನದ ದುಃಖಗಳನ್ನು ನಾಶಮಾಡೆಂದು ದೇವ ದೇವ ಮಹಾದೇವನಲ್ಲಿ ಪ್ರಾರ್ಥಿಸುವುದು. ಶಿವನು ತಮೋಗುಣದ ಸಾಕಾರಮೂರ್ತಿಯಾದರೆ ಮಹಾವಿಷ್ಣುವು ಸತ್ವ ಹಾಗೂ ರಜೋಗುಣಗಳ ಸಾಕಾರ ಮೂರ್ತಿ. ಎಲ್ಲ ಮೂರೂ ಗುಣಗಳೂ ಪರಸ್ಪರ ಏಕಕಾಲದಲ್ಲಿ ಅಸ್ತಿತ್ವದಲ್ಲಿರಬೇಕು. ಹಾಗಾಗಿ ಸೃಷ್ಟಿ ಸ್ಥಿತಿ ಲಯಗಳ ಅಧಿಪತಿಗಳು ಪರಸ್ಪರ ಜೊತೆಯಾಗಿ ಬ್ರಹ್ಮಾಂಡ ನೃತ್ಯವನ್ನು ವಿಶ್ವದ ಸಮತೋಲನಕ್ಕಾಗಿ ನರ್ತಿಸಬೇಕು.

ಶ್ಲೋಕ- 1 -  ಸಂಸ್ಕೃತದಲ್ಲಿ :

ವಿಶ್ವೇಶ್ವರಾಯ ನರಕಾರ್ಣವ ತಾರಣಾಯ
ಕರ್ಣಾಮೃತಾಯ ಶಶಿಶೇಖರ ಧಾರಣಾಯ
ಕರ್ಪೂರಕಾಂತಿಧವಲಾಯ ಜಟಾಧರಾಯ
ದಾರಿದ್ರ್ಯ ದುಃಖ ದಹನಾಯ ನಮಃ ಶಿವಾಯ
ಕನ್ನಡದಲ್ಲಿ :

ವಿಶ್ವೇಶ್ವರನೆ ನರಕಾಂಬುಧಿ ದಾಟಿಸುವನೆ
ಕರ್ಣಾಮೃತನೆ ಚಂದ್ರಶಿಖೆಯ ಭೂಷಣನೆ
ಕರ್ಪೂರ ಮಲ್ಲಿಗೆ ಧವಳವರ್ಣನೆ ಜಟಾಧರನೆ
ದಾರಿದ್ರ್ಯದುಃಖ ದಹಿಸುವನೆ ಶಿವನೆ ನಮಿಪೆ

ವಿವರಣೆ :

ಯಾರು ಸಮಸ್ತ ವಿಶ್ವದ ಅಧಿಪತಿಯೋ, ಯಾರು ನಮ್ಮನ್ನು ನರಕ ಸದೃಶವಾದ ಸಂಸಾರ ಸಾಗರವನ್ನು ದಾಟಲು ಸಹಕರಿಸುತ್ತಾರೋ, ಯಾರ ಪರಮ ಪವಿತ್ರವಾದ ನಾಮವು ಕಿವಿಗೆ ಅಮೃತದಂತೆ ಆಪ್ಯಾಯಮಾನವನ್ನುಂಟು ಮಾಡುತ್ತದೋಯಾರು ಅರ್ಧ ಚಂದ್ರನನ್ನು ಒಡವೆಯಂತೆ ಧರಿಸಿರುವರೋ, ಯಾರ ದೇದೀಪ್ಯಮಾನವಾದ ಕರ್ಪೂರದ ದೀಪವು ಶುಭ್ರವಾದ ಬೆಳಕಿನಂತೆ ಬೆಳಗುತ್ತಿದೆಯೋಯಾರು ಬಾಚಿರದ ಹಾಗೂ ಕತ್ತರಿಸದೇ ಇರುವ ಕೂದಲನ್ನು ಧರಿಸಿರುವರೋಬಡತನದ ದುಃಖವನ್ನು ದಹಿಸುವ ಆ ಶಿವನಿಗೆ ನಾನು ವಂದಿಸುವೆ.

ಶ್ಲೋಕ - 2 -  ಸಂಸ್ಕೃತದಲ್ಲಿ :

ಗೌರೀಪ್ರಿಯಾಯ ರಜನೀಶಕಲಾಧರಾಯ
ಕಾಲಾಂತಕಾಯ ಭುಜಗಾಧಿಪಕಂಕಣಾಯ
ಗಂಗಾಧರಾಯ ಗಜರಾಜವಿಮರ್ದನಾಯ
ದಾರಿದ್ರ್ಯ ದುಃಖ ದಹನಾಯ ನಮಃ ಶಿವಾಯ
ಕನ್ನಡದಲ್ಲಿ :

ಗೌರೀಪ್ರಿಯ ಚಂದ್ರಕಲೆ ಧರಿಸಿದವನೇ
ಕಾಲಾಂತಕನೆ ಸರ್ಪರಾಜ ಕಂಕಣನೇ
ಗಂಗಾಧರನೆ ಗಜರಾಜನ ಮಣಿಸಿದವನೇ
ದಾರಿದ್ರ್ಯದುಃಖ ದಹಿಸುವನೆ ಶಿವನೆ ನಮಿಪೆ

ವಿವರಣೆ :

ಯಾರನ್ನು ದೇವಿ ಪಾರ್ವತಿಯು ಆರಾಧಿಸುತ್ತಾಳೋ, ಯಾರು ರಾತ್ರೆಯ ಅಧಿದೇವತೆಯಾದ ಅರ್ಧಚಂದ್ರನನ್ನು ತನ್ನ ಶಿರದಲ್ಲಿ ಧರಿಸಿರುವನೋ, ಕಾಲ ಯಮನನ್ನೇ ನಾಶಪಡಿಸುವವನೋ, ಯಾರು ಸರ್ಪಗಳ ರಾಜನನ್ನೇ ತನ್ನ ತೋಳ್ಬಂದಿಯನ್ನಾಗಿ ಧರಿಸಿರುವನೋ, ಯಾರು ತನ್ನ ಶಿರದಲ್ಲಿ ಗಂಗೆಯನ್ನು ಇಟ್ಟುಕೊಂಡಿರುವನೋಯಾರು ಗಜರಾಜನನ್ನು ಸಂಹಾರಮಾಡಿದವನೋ, ಬಡತನದ ದುಃಖಗಳನ್ನು ಸುಟ್ಟುಬೂದಿಮಾಡುವ ಓ ಶಿವನೆ ! ನಿನಗೆ ನನ್ನ ಭಕ್ತಿಪೂರ್ವಕ ನಮನಗಳು.

ಶ್ಲೋಕ - 3 - ಸಂಸ್ಕೃತದಲ್ಲಿ :

ಭಕ್ತಿಪ್ರಿಯಾಯ ಭವರೋಗಭಯಾಪಹಾಯ
ಉಗ್ರಾಯ ದುರ್ಗಭವಸಾಗರತಾರಣಾಯ
ಜ್ಯೋತಿರ್ಮಯಾಯ ಪುನರುದ್ಭವವಾರಣಾಯ
ದಾರಿದ್ರ್ಯ ದುಃಖ ದಹನಾಯ ನಮಃ ಶಿವಾಯ
ಕನ್ನಡದಲ್ಲಿ :

ಭಕ್ತಿಪ್ರಿಯನೆ ಭವರೋಗ ಭಯಹರನೆ
ಉಗ್ರನೆ ದುರ್ಗಮ ಭವಾಂಬುಧಿಯ ದಾಟಿಸುವನೆ
ಜ್ಯೋತಿಸ್ವರೂಪಿ ಮರುಜನ್ಮ ನಿವಾರಕನೆ
ದಾರಿದ್ರ್ಯದುಃಖ ದಹಿಸುವನೆ ಶಿವನೆ ನಮಿಪೆ

ವಿವರಣೆ :

ಯಾರನ್ನು ಅವನ ಭಕ್ತರು ತೀವ್ರವಾಗಿ ಪ್ರೀತಿಸಲ್ಪಡುತ್ತಾನೋಮಾನವನ ಜೀವನದಲ್ಲಿನ ರೋಗರುಜಿನಗಳ ಭೀತಿಯನ್ನು ನಾಶಪಡಿಸುವನೋ, ಯಾರ ಇರುವಿಕೆಯೇ ದುರ್ಜನರ ಮನದಲ್ಲಿ ಭೀತಿ ಹುಟ್ಟಿಸುವುದೋದುರ್ಭರವಾದ ಸಂಸಾರ ಸಾಗರವನ್ನು ದಾಟಲು ಮಾರ್ಗದರ್ಶನವನ್ನು ನೀಡುವನೋ, ಯಾರು ಬೆಳಕಿನ ಮೂರ್ತಸ್ವರೂಪನೋ, ಯಾರು ತನ್ನ ದಿವ್ಯ ನಾಮಗಳನ್ನು ಪಠಿಸುವಾಗ ನಾಟ್ಯಗೈಯುತ್ತಾರೋ, ಬಡತನದ ಬೇಗೆಯ ದುಃಖಗಳನ್ನು ಸುಟ್ಟುಬೂದಿ ಮಾಡುವ, ಮಹೇಶ್ವರನಿಗೆ ನನ್ನ ಭಕ್ತಿಪೂರ್ವಕ ನಮನಗಳು.

ಶ್ಲೋಕ - 4 -  ಸಂಸ್ಕೃತದಲ್ಲಿ :

ಚರ್ಮಾಂಬರಾಯ ಶವಭಸ್ಮವಿಲೇಪನಾಯ
ಭಾಲೇಕ್ಷಣಾಯ ಮಣಿಕುಂಡಲಮಂಡಿತಾಯ
ಮಂಜೀರಪಾದಯುಗಲಾಯ ಜಟಾಧರಾಯ
ದಾರಿದ್ರ್ಯ ದುಃಖ ದಹನಾಯ ನಮಃ ಶಿವಾಯ
ಕನ್ನಡದಲ್ಲಿ :

ಚರ್ಮಾಂಬರನೆ ಶವಭಸ್ಮ ವಿಲೇಪಿತನೆ
ಹಣೆಗಣ್ಣವನೆ ಸರ್ಪಕುಂಡಲ ಶೋಭಿತನೆ
ಪಾದದಿ ಗೆಜ್ಜೆ ತೊಟ್ಟವನೆ ಜಟಾಧರನೆ
ದಾರಿದ್ರ್ಯದುಃಖ ದಹಿಸುವನೆ ಶಿವನೆ ನಮಿಪೆ

ವಿವರಣೆ :

ಯಾರ ವಸ್ತ್ರವು ಪ್ರಾಣಿಯ ಚರ್ಮದಿಂದಾಗಿರುವುದೋ, ಯಾರು ತನ್ನ ಶರೀರವನ್ನೆಲ್ಲಾ ಚಿತೆಯಲ್ಲಿ ಉರಿದು ಬೂದಿಯಾದ ಭಸ್ಮವನ್ನೇ ಲೇಪಿಸಿಕೊಳ್ಳುವನೋ, ಯಾರು ತನ್ನ ಕಾಲುಗಳಿಗೆ ಸುಮಧುರ ನಾದವನ್ನು ಉಂಟುಮಾಡುವ ಗೆಜ್ಜೆಯನ್ನು ಧರಿಸಿರುವನೋ, ಯಾರು ತನ್ನ ತಲೆಗೂದಲನ್ನು ಬಾಚದೇ ಕತ್ತರಿಸದೇ ಇಟ್ಟುಕೊಂಡಿರುವನೋ, ಬಡತನದ ದುಃಖಗಳನ್ನು ಕ್ಷಣಮಾತ್ರದಲ್ಲಿ ಸುಟ್ಟುಬೂದಿಮಾಡುವ ಹೇ ಶಂಕರನೇ ನಿನಗೆ ನನ್ನ ಪ್ರಣಾಮಗಳು.


ಶ್ಲೋಕ - 5 - ಸಂಸ್ಕೃತದಲ್ಲಿ :

ಪಂಚಾನನಾಯ ಫಣಿರಾಜವಿಭೂಷಣಾಯ
ಹೇಮಾಂಶುಕಾಯ ಭುವನತ್ರಯಮಂಡನಾಯ
ಆನಂದಭೂಮಿವರದಾಯ ತಮೋಹರಾಯ
ದಾರಿದ್ರ್ಯ ದುಃಖ ದಹನಾಯ ನಮಃ ಶಿವಾಯ
ಕನ್ನಡದಲ್ಲಿ :

ಐಮೊಗನೆ ಸರ್ಪರಾಜ ವಿಭೂಷಿತನೆ
ಹೊನ್ನುತ್ತರೀಯ ಹೊದ್ದವನೆ ಮೂಲೋಕ ಶೋಭಿಪನೆ
ಆನಂದಾಶ್ರಯನೆ ವರದನೆ ತಮೋಹರನೆ
ದಾರಿದ್ರ್ಯದುಃಖ ದಹಿಸುವನೆ ಶಿವನೆ ನಮಿಪೆ

ವಿವರಣೆ :

ಯಾರಿಗೆ ಐದು ಮುಖಗಳಿರುವುದೋ ಹಾಗೂ ಸರ್ಪರಾಜನನ್ನೇ ಆಭರಣವಾಗಿ ಧರಿಸಿರುವನೋ, ಯಾರು ದಿವ್ಯವಾದ ಬಂಗಾರದ ವಸ್ತ್ರವನ್ನು ಧರಿಸಿರುವನೋ, ಮೂರು ಲೋಕಗಳಲ್ಲೂ ಶೋಭಿಸಲ್ಪಟ್ಟವನೋ, ಭಕ್ತರಿಗೆ ಬೇಡಿದ ವರವನ್ನು ಕರುಣಿಸುವವನೋ, ಆನಂದಸಾಗರನೋ, ತಾಮಸ ಶಕ್ತಿಯನ್ನೇ ಮೂರ್ತೀಭವಿಸಿರುವ, ಬಡತನದ ಬೇಗೆಯನ್ನು ಸುಟ್ಟು ಬೂದಿಮಾಡುವ ಶಿವನಿಗೆ ನನ್ನ ನಮನಗಳು.

ಶ್ಲೋಕ - 6 - ಸಂಸ್ಕೃತದಲ್ಲಿ :

ಭಾನುಪ್ರಿಯಾಯ ದುರಿತಾರ್ಣವತಾರಣಾಯ
ಕಾಲಾಂತಕಾಯ ಕಮಲಾಸನ ಪೂಜಿತಾಯ
ನೇತ್ರತ್ರಯಾಯ ಶುಭಲಕ್ಷಣ ಲಕ್ಷಿತಾಯ
ದಾರಿದ್ರ್ಯ ದುಃಖ ದಹನಾಯ ನಮಃ ಶಿವಾಯ
ಕನ್ನಡದಲ್ಲಿ :

ಭಾನುಪ್ರಿಯನೆ ಪಾಪಶರಧಿ ದಾಟಿಸುವನೆ
ಕಾಲಾಂತಕನೆ ಕಮಲಾಸನ ಪೂಜಿತನೆ
ಮುಕ್ಕಣ್ಣನೆ ಶುಭಲಕ್ಷಣ ತೋರುವವನೆ
ದಾರಿದ್ರ್ಯದುಃಖ ದಹಿಸುವನೆ ಶಿವನೆ ನಮಿಪೆ

ವಿವರಣೆ :

ಯಾರು ಸೂರ್ಯದೇವನಿಗೆ ಅತ್ಯಂತ ಪ್ರೀತಿಪಾತ್ರನೋ, ಯಾರು ನಮಗೆ ಸಂಸಾರ ಸಾಗರವನ್ನು ಕ್ಷೇಮವಾಗಿ ದಾಟಲು ಸಹಾಯ ಮಾಡುತ್ತಾರೋ, ಯಾರು ಯಮಧರ್ಮ ರಾಜನನ್ನು ನಾಶಮಾಡಿದವನೋ, ಕಮಲ ಪುಷ್ಪದ ಸಿಂಹಾಸನದಲ್ಲಿ ವಿರಾಜಮಾನನಾಗಿರುವ ಬ್ರಹ್ಮನಿಂದ ಆರಾಧಿಸಲ್ಪಡುವವನನ್ನು, ಮತ್ತು ಯಾರಿಗೆ ಮೂರು ಕಣ್ಣುಗಳಿದ್ದು, ಸಮಸ್ತ ಶುಭಲಕ್ಷಣಗಳನ್ನು ತೋರುವ, ಬಡತನದ ದುಃಖಗಳನ್ನು ಕ್ಷಣಾರ್ಧದಲ್ಲಿ ಸುಟ್ಟುಬೂದಿ ಮಾಡುವ ಆ ಶಿವನಿಗೆ ನನ್ನ ಭಕ್ತಿಪೂರ್ವಕ ನಮನಗಳು.

ಶ್ಲೋಕ - 7- ಸಂಸ್ಕೃತದಲ್ಲಿ :

ರಾಮಪ್ರಿಯಾಯ ರಘುನಾಥವರಪ್ರದಾಯ
ನಾಗಪ್ರಿಯಾಯ ನರಕಾರ್ಣವತಾರಣಾಯ
ಪುಣ್ಯಾಯ ಪುಣ್ಯಚರಿತಾಯ ಸುರಾರ್ಚಿತಾಯ
ದಾರಿದ್ರ್ಯ ದುಃಖ ದಹನಾಯ ನಮಃ ಶಿವಾಯ
ಕನ್ನಡದಲ್ಲಿ :

ರಾಮಪ್ರಿಯನೆ ರಘುನಾಥ ವರದಾತನೆ
ನಾಗಪ್ರಿಯ ನರಕಾರ್ಣವ ದಾಟಿಸುವನೆ
ಪುಣ್ಯಸ್ವರೂಪಿ ಪುಣ್ಯಚರಿತ್ರ ದೇವ ಪೂಜಿತನೆ
ದಾರಿದ್ರ್ಯದುಃಖ ದಹಿಸುವನೆ ಶಿವನೆ ನಮಿಪೆ

ವಿವರಣೆ :

ಯಾರು ವಿಷ್ಣುವಿನ ಅವತಾರವಾದ ಶ್ರೀ ರಾಮನಿಗೆ ಅತ್ಯಂತ ಪ್ರೀತಿಪಾತ್ರನೋಹಾಗೂ ರಘುವಂಶದ ಶ್ರೇಷ್ಟ ಚಕ್ರವರ್ತಿಯಾದ ಶ್ರೀ ರಾಮಚಂದ್ರನಿಗೆ ಅನೇಕ ವರಗಳನ್ನು ದಯಪಾಲಿಸಿರುವನೋ, ಸರ್ಪಗಳಿಗೆ ಅತ್ಯಂತ ಪ್ರೀತಿಪಾತ್ರನಾದವನೋ, ನರಕವನ್ನೇ ನಾಶಪಡಿಸಿದವನೋ, ಪವಿತ್ರರಲ್ಲಿ ಪರಮ ಪವಿತ್ರನಾದವನೋ, ದೇವಾನುದೇವತೆಗಳಿಂದ ಪೂಜಿಸಲ್ಪಡುವವನೋ, ಭಕ್ತರ ಬಡತನದ ದುಃಖಗಳನ್ನು ಸುಟ್ಟು ಬೂದಿಮಾಡುವ ಆ ಶಂಕರ ಮಹಾದೇವನಿಗೆ ನನ್ನ ಭಕ್ತಿಪೂರ್ವಕ ನಮನಗಳು.

ಶ್ಲೋಕ  - 8 - ಸಂಸ್ಕೃತದಲ್ಲಿ :

ಮುಕ್ತೀಶ್ವರಾಯ ಫಲದಾಯ ಗಣೇಶ್ವರಾಯ
ಗೀತಪ್ರಿಯಾಯ ವೃಷಭೇಶ್ವರವಾಹನಾಯ
ಮಾತಂಗಚರ್ಮವಸನಾಯ ಮಹೇಶ್ವರಾಯ
ದಾರಿದ್ರ್ಯ ದುಃಖ ದಹನಾಯ ನಮಃ ಶಿವಾಯ
ಕನ್ನಡದಲ್ಲಿ :

ಮುಕ್ತೀಶನೆ ಫಲದಾತ ಗುಣಗಳೊಡೆಯ
ಗೀತಪ್ರಿಯನೆ ವೃಷಭೇಂದ್ರ ವಾಹನನೆ
ಮಾತಂಗ ಚರ್ಮಧರನೆ ಮಹೇಶ್ವರನೆ
ದಾರಿದ್ರ್ಯದುಃಖ ದಹಿಸುವನೆ ಶಿವನೆ ನಮಿಪೆ

ವಿವರಣೆ :

ಸಂಪೂರ್ಣ ಭಕ್ತಿಯಿಂದ ಭಜಿಸಿದರೆ ಮುಕ್ತಿಯನ್ನು ದಯಪಾಲಿಸುವ ದೇವ ದೇವನೇ ಅವನು. ಗಣಗಳ ರಾಜ ಹಾಗೂ ಸಂಗೀತಪ್ರಿಯ ಮತ್ತು ಅವನ ವಾಹನವು ನಂದಿ, ಗಜಚರ್ಮವನ್ನೇ ಧರಿಸಿರುವವನು ನೀನುಓ ಮಹೇಶ್ವರ ! ನೀನು ಕ್ಷಣ ಮಾತ್ರದಲ್ಲೇ ಬಡತನದ ದುಃಖಗಳನ್ನು ಸುಟ್ಟು ಬೂದಿಮಾಡುವೆ. ನಿನ್ನ ಪಾದಗಳಲ್ಲಿ ಶರಣಾಗಿ ಭಕ್ತಿಯಿಂದ ನಮಸ್ಕರಿಸುವೆ.

ಶ್ಲೋಕ - 9 - ಸಂಸ್ಕೃತದಲ್ಲಿ :

ಗೌರೀವಿಲಾಸ ಭುವನಾಯ ಮಹೋದಯಾಯ
ಪಂಚಾನನಾಯ ಶರಣಾಗತರಕ್ಷಕಾಯ
ಶರ್ವಾಯ ಸರ್ವಜಗತಾಮಧಿಪಾಯ ತಸ್ಮೈ
ದಾರಿದ್ರ್ಯ ದುಃಖ ದಹನಾಯ ನಮಃ ಶಿವಾಯ
ಕನ್ನಡದಲ್ಲಿ :

ಗೌರೀವಿಲಾಸ ನಿಲಯನೆ ಮುಕ್ತಿಪ್ರದಾತ
ಐಮೊಗನೆ ಶರಣೆಂಬರನು ಕಾಯುವನೆ
ಪ್ರಲಯಕರ ಎಲ್ಲ ಜಗದೊಡೆಯ ನಿನಗೆ
ದಾರಿದ್ರ್ಯದುಃಖ ದಹಿಸುವನೆ ಶಿವನೆ ನಮಿಪೆ

ವಿವರಣೆ :

ಭಕ್ತರ ದಾರಿದ್ರ್ಯವನ್ನು ದಹಿಸುವ, ಗೌರೀದೇವಿಯ ಅನುಗ್ರಹ ಪ್ರಪಂಚವಾದ, ದೇವ ದೇವನಾದ, ಸಿಂಹದಂತಿರುವ, ಸಮಸ್ತ ಕೋರಿಕೆಗ ಈಡೇರಿಸುವ ಕಲ್ಪವೃಕ್ಷವೇ ಆಗಿರುವ, ರಕ್ಷಣೆಯನ್ನು ಬೇಡುವವರಿಗೆ ಸರ್ವಸ್ವವೂ ಆಗಿರುವ, ಹಾಗೂ ಸಮಸ್ತ ವಿಶ್ವದ ಅಧಿಪತಿಯಾದ ಮಹಾದೇವನೆ ನಿನಗೆ ಭಕ್ತಿಪೂರ್ವಕ ನಮನಗಳು.

ಫಲಶ್ರುತಿ - ಸಂಸ್ಕೃತದಲ್ಲಿ :

ವಸಿಷ್ಟೇನ ಕೃತಂ ಸ್ತೋತ್ರಂ ಸರ್ವ ಸಂಪತ್ಕರಂ ಪರಂ
ತ್ರಿಸಂಧ್ಯಂ ಯಃ ಪಠೇನ್ನಿತ್ಯಂ ಸ ಹಿ ಸ್ವರ್ಗಮವಾಪ್ಯತಾಮ್
ಫಲಶ್ರುತಿ - ಕನ್ನಡದಲ್ಲಿ :

ವಸಿಷ್ಠ ಮಾಮುನಿ ರಚಿಸಿದೀ ಸ್ತೋತ್ರವನು ಭಕ್ತಿಯಿಂ ದಿನವು
ಮೂರ್ಕಾಲ ಪಠಿಸುವವಗೆಲ್ಲ ಸಂಪದ ಸಗ್ಗ ಸುಖವು

ವಿವರಣೆ :

ವಸಿಷ್ಠ ಮುನಿಗಳು ರಚಿಸಿದ ಈ ಸ್ತೋತ್ರವನ್ನು ತ್ರಿಕಾಲದಲ್ಲೂ ಭಕ್ತಿಯಿಂದ ಪಠಿಸುವವರ ಎಲ್ಲರ ರೋಗ ರುಜಿನಗಳನ್ನು ದೂರವಾಗಿ ಎಲ್ಲ ವಿಧದ ಸ್ವರ್ಗ ಸದೃಶವಾದ ಸಂಪತ್ತುಗಳನ್ನೂ ಅನುಭವಿಸುವರು.

ಓಂ ನಮಃ ಶಿವಾಯ ಶಿವಾಯ ನಮಃ ಓಂ

ಪ್ರಸ್ತುತಿಯ ಮೂಲ :

1. ಸಂಸ್ಕೃತ ಶ್ಲೋಕಗಳು - devshoppe.com
2. ‎ಕನ್ನಡ ಶ್ಲೋಕಗಳು - ಶ್ರೀ.ಬಿ.ಎಸ್. ಚಂದ್ರಶೇಖರ ಅವರ ಕೃತಿ -  "ಸವಿಗನ್ನಡ ಸ್ತೋತ್ರಚಂದ್ರಿಕೆ"
3. ‎ಅರ್ಥ / ವಿವರಣೆ : Timesofindia.speakingtree.in - ಆಂಗ್ಲ ಮೂಲದಿಂದ ಕನ್ನಡದಲ್ಲಿ ಭಾವಾನುವಾದ - ಗುರುಪ್ರಸಾದ್ ಹಾಲ್ಕುರಿಕೆ.

ಈ ಸ್ತೋತ್ರದ ವೀಡಿಯೋ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ : https://youtu.be/kULVNZz8DOk


















Tuesday, June 19, 2018

ಭೀಷ್ಮಸ್ತವರಾಜ





ಭೀಷ್ಮಸ್ತವರಾಜ 

ಶ್ರೀ ಭೀಷ್ಮಸ್ತುತಿಯ ಉಗಮ ಕೌರವ, ಪಾಂಡವ ಕುಲದ ಪಿತಾಮಹ ಭೀಷ್ಮಾಚಾರ್ಯರು ಪಾಂಡವ ಸೈನ್ಯದೆದುರು ಭೀಕರ ಯುದ್ಧದ ನಂತರ ಶರ ಶೈಯ್ಯೆಯ ಮೇಲೆ ಮಲಗಿರುವರು. ಮಹಾಭಾರತದ ಯುದ್ಧದಲ್ಲಿ ಯಾವುದೇ ಆಯುಧವನ್ನು ಹಿಡಿಯುವುದಿಲ್ಲವೆಂದು ಶಪಥಗೈದಿದ್ದ ಶ್ರೀಕೃಷ್ಣನನ್ನು ತನ್ನ ಚಕ್ರವನ್ನು ಆಹ್ವಾನಿಸಿ ಭೀಷ್ಮರನ್ನು ನಾಶಮಾಡುವ ಸಂದರ್ಭವನ್ನು ಭೀಷ್ಮರು ಉಂಟುಮಾಡಿದ್ದಾರೆ. ಯುದ್ಧದಲ್ಲಿ ಭೀಷ್ಮರು ತಮ್ಮ ತೀಕ್ಷ್ಣ ಬಾಣಗಳಿಂದ ಶ್ರೀಕೃಷ್ಣನ ಕವಚವನ್ನು ತುಂಡರಿಸಿ ಅವನ ಶರೀರವನ್ನು ಘಾಸಿಗೊಳಿಸಿ ಮೈಮೇಲೆ ಆದ ಘಾಯಗಳಿಂದ ರಕ್ತ ಸುರಿಯುವಂತೆ ಮಾಡಿದ್ದರು. ಹಾಗೂ ಇನ್ನೇನು ಅರ್ಜುನನನ್ನು ತೀಕ್ಷ್ಣವಾಗಿ ಘಾಯಗೊಳಿಸುವುದರಲ್ಲಿದ್ದರು ಭೀಷ್ಮರು. ಆ ಸಮಯದಲ್ಲಿ ಪಾರ್ಥಸಾರಥಿಯು ರಥದಿಂದ ಧುಮುಕಿ ಸುದರ್ಶನ ಚಕ್ರವನ್ನು ಧರಿಸಿ ಭೀಷ್ಮರನ್ನು ನಾಶಪಡಿಸಲು ಮುನ್ನುಗ್ಗುತ್ತಿರುವುದನ್ನು ವೀಕ್ಷಿಸಿ ಭೀಷ್ಮ ಪಿತಾಮಹನು ಅನನ್ಯವಾದ ಭಕ್ತಿಪರವಶರಾಗಿ ಭಗವಂತನ ಈ ವಿಧವಾದ ಅಪರೂಪದ ದರ್ಶನ ದೊರಕಿದ್ದಕ್ಕೆ ಆನಂದಿತರಾಗಿದ್ದಾರೆ.
ಈ ವಿಧವಾದ ಶ್ರೀಕೃಷ್ಣನ ದರ್ಶನದಿಂದಾಗಿ ಭಾವೋನ್ಮತ್ತರಾದ ಭೀಷ್ಮ ಪಿತಾಮಹರು ಅದೇ ಸಂದರ್ಭದಲ್ಲಿ ತಮಗೊದಗಿದ ಭಾಗ್ಯವನ್ನು ಕೊಂಡಾಡುತ್ತಾ ಹತ್ತು ಶ್ಲೋಕಗಳನ್ನು ಯುದ್ಧಭೂಮಿಯಲ್ಲೇ ರಚಿಸುತ್ತಾರೆ.
ಈ ಹತ್ತು ಶ್ಲೋಕಗಳೇ ಭೀಷ್ಮಸ್ತುತಿ ಅಥವಾ ಭೀಷ್ಮಸ್ತವರಾಜಮ್ ಎಂಬುದಾಗಿ ಕರೆಯಲ್ಪಟ್ಟಿತು.
ಭಾಗವತ ಮಹಾಪುರಾಣದ ಪ್ರಥಮ ಸ್ಕಂಧದಲ್ಲಿನ 9ನೇ ಅಧ್ಯಾಯದಲ್ಲಿ ಈ ಶ್ಲೋಕಗಳನ್ನು ಉಲ್ಲೇಖಿಸಲಾಗಿದೆ.
ದಿನಕ್ಕೊಂದು ಶ್ಲೋಕದಂತೆ - ಸಂಸ್ಕೃತ ಶ್ಲೋಕ, ಸ್ತೋತ್ರಚಂದ್ರಿಕೆಯಲ್ಲಿ ಅವುಗಳ ಕನ್ನಡ ಅವತರಣಿಕೆ ಹಾಗೂ ಅವುಗಳ ಬಗೆಗಿನ ಯು.ವಿ.ಶ್ರೀ ಭಾಷ್ಯ ಸಿಂಹಾಸನಮ್ ಪುರಿಸಾಯಿ ನಾಡಾರ್ ಶ್ರೀ.ಕೃಷ್ಣಮಾಚಾರಿಯರ್ ಸ್ವಾಮಿಯವರ ಭಾಷ್ಯವನ್ನು ಆಂಗ್ಲ ಭಾಷೆಗೆ ಶ್ರೀ ನೃಸಿಂಹ ಸೇವಾ ರಸಿಕನ್ ಒಪ್ಪಿಲಿಯಪ್ಪನ್ ಕೊಯಿಲ್ ಶ್ರೀ.ವರದಾಚಾರಿ ಶಡಕೋಪನ್ ಭಾಷಾಂತರಿಸಿರುವುದನ್ನು ಕನ್ನಡದಲ್ಲಿ ಭಾಷಾಂತರಿಸಿ ತಮ್ಮ ಮುಂದಿಡುವ ಪ್ರಯತ್ನವನ್ನು ಮಾಡಬೇಕೆಂದಿದ್ದೇನೆ.

ಶ್ಲೋಕ - 1 - ಸಂಸ್ಕೃತ 
ತದೋಪಸಂಹೃತ್ಯ ಗಿರಃ ಸಹಸ್ರಣೀ-
ರ್ವಿಮುಕ್ತಸಂಗಂ ಮನ ಆದಿಪುರುಷೇ |
ಕೃಷ್ಣೇ ಲಸತ್ಪೀತಪಟೇ ಚತುರ್ಭುಜೇ
ಪುರಹಸ್ಥಿತೇs ಮೀಲಿತದೃ ಗ್ವೈಧಾರಯತ್ ||

ಕನ್ನಡದಲ್ಲಿ 
ಸಾಸಿರರಥಿ ಮೌನವನಾಂತು ತನ್ನೆದುರು
ಪೀತವಸ್ತ್ರ ಚತುರ್ಭುಜದಿಂ ವಿರಾಜಿಪ
ಆದಿಮೂರುತಿ ಕೃಷ್ಣನನೆವೆಯಿಡದೆ ನೋಡುತ್ತ
ನಿಸ್ಸಂಗಮನವನಲ್ಲೆ ನೆಲೆಗೊಳಿಸಿದ

ಅರ್ಥ ವಿವರಣೆ: 
ಸಾವಿರಾರು ರಥಿಕರ ಮುಂದಾಳಾಗಿದ್ದ ಭೀಷ್ಮ ಪಿತಾಮಹರು ವಾಣಿಯನ್ನು ಸಂಯಮಗೈದು (ಮೌನವಹಿಸಿ) ಮುಂದುಗಡೆ ಕಂಗೊಳಿಸುತ್ತಿದ್ದ ಚತುರ್ಭುಜನೂ, ಪೀತಾಂಬರ ವಿರಾಜಿತನೂ ಆದ ಆದಿಪುರುಷನಾದ ಭಗವಾನ್ ಶ್ರೀಕೃಷ್ಣನನ್ನು ಎವೆಯಿಕ್ಕದ ಕಣ್ಣುಗಳಿಂದ ದೃಷ್ಟಿಸುತ್ತಾ, ತಮ್ಮ ಸಂಗ್ರಹಿತವಾದ ಮನಸ್ಸನ್ನು ಅವನಲ್ಲಿ ನೆಲೆಗೊಳಿಸಿದರು.

ಶ್ಲೋಕ - 2 - ಸಂಸ್ಕೃತ 
ವಿಶುದ್ಧಯಾ ಧಾರಣಯಾ ಹತಾಶುಭ-
ಸ್ತದೀಕ್ಷಯ್ಯೆವಾಶುಗತಾಯುಧವ್ಯಥಃ |
ನಿವೃತ್ತಸರ್ವೇಂದ್ರಿಯವೃತ್ತಿ ವಿಭ್ರಮ-
ಸ್ತುಷ್ಟಾವ ಜನ್ಯಂ ವಿಸೃಜಂಜನಾರ್ದನಮ್

ಕನ್ನಡದಲ್ಲಿ 
ಧಾರಣೆಯಿಂದಲಶುಭಗಳು ತೊಲಗಿ
ಕಟಾಕ್ಷಮಾತ್ರದಿಂದಲೇ ಯುದ್ಧಗಾಯಗಳು ಕಳೆದು
ದೇಹತ್ಯಾಗ ಕಾಲದೊಳಿಂದ್ರಿಯ ಭ್ರಮಣೆಯ ನಿಲ್ಲಿಸಿ
ಪ್ರೇಮದಿಂ ಕೃಷ್ಣನನು ಸ್ತುತಿಗೈದನಿಂತು

ವಿವರಣೆ: 
ಹೀಗೆ ಭಗವಂತನನ್ನು ದೃಢವಾಗಿ ಧರಿಸಿದ ಧಾರಣಾ ಯೋಗದಿಂದ ಅವರ ಎಲ್ಲ ಅಶುಭಗಳು ತೊಲಗಿಹೋಗಿ, ಅವರಿಗೆ ಶಾಸ್ತ್ರಾಸ್ತ್ರಗಳಿಂದ ಉಂಟಾಗಿದ್ದ ಎಲ್ಲ ನೋವುಗಳು ಅವನ ಕೃಪಾಕಟಾಕ್ಷಮಾತ್ರದಿಂದ ಒಡನೆಯೇ ಕಳೆದುಹೋದುವು. ಈಗ ಶರೀರವನ್ನು ತ್ಯಜಿಸುವ ಸಮಯ, ಅವರು ಇಂದ್ರಿಯವ್ಯಾಪಾರಗಳ ಅಲೆದಾಟವನ್ನು ನಿಲ್ಲಿಸಿ ಪ್ರೇಮದಿಂದ ಭಗವಂತನನ್ನು ಈ ರೀತಿಯಾಗಿ ಸ್ತುತಿಸಿದರು.

ಶ್ರೀಭೀಷ್ಮ ಉವಾಚ
ಶ್ಲೋಕ - 3 - ಸಂಸ್ಕೃತ 

ಇತಿ ಮತಿರುಪಕಲ್ಪಿತಾ ವಿತೃಷ್ಣಾ
ಭಗವತಿ ಸಾತ್ವತಪುಂಗವೇ ವಿಭೂಮ್ನಿ |
ಸ್ವಸುಖಮುಪಗತೇ ಕ್ವಚಿದ್ವಿಹರ್ತುಂ
ಪ್ರಕೃತಿಮುಪೇಯುಷಿ ಯದ್ಬವಪ್ರವಾಹಃ ||

ಕನ್ನಡದಲ್ಲಿ 
ನಿಷ್ಕಾಮ ಮನವ ನೆಲೆಗೊಳಿಪೆ
ಸಾತ್ವಿಕ ಮಹಿಮ ಭಗವಂತನಲ್ಲಿ
ಸ್ವಾನಂದದಲಿರುತಲೆಮ್ಮೊಮ್ಮೆ
ಪ್ರಕೃತಿಯ ಕೂಡೆ ಹರಿವುದೀ ಸೃಷ್ಟಿಪ್ರವಾಹ

ವಿವರಣೆ : 
ಶ್ರೀಭೀಷ್ಮಪಿತಾಮಹರು ಹೇಳುತ್ತಾರೆ: ಅನೇಕ ಸಾಧನೆಗಳ ಅನುಷ್ಠಾನಗಳಿಂದ ಅತ್ಯಂತ ಶುದ್ಧವಾದ ಹಾಗೂ ಕಾಮನಾರಹಿತವಾದ ಬುದ್ಧಿಯನ್ನು ಈಗ ಮೃತ್ಯುವಿನ ಸಮಯದಲ್ಲಿ ನಾನು - ಯದುಕುಲಶಿರೋಮಣಿಯೂ, ಮಹಾಮಹಿಮನೂ, ಅನಂತನೂ ಆದ ಭಗವಾನ್ ಶ್ರೀಕೃಷ್ಣನ ಚರಣಾರವಿಂದಾಗಳಲ್ಲಿ ಸಮರ್ಪಿಸುತ್ತಿದ್ದೇನೆ. ಈತನು ಸದಾ ತನ್ನ ಸಹಜಾನಂದ ಸ್ವರೂಪದಲ್ಲಿ ನೆಲೆಗೊಂಡಿದ್ದುಕೊಂಡೇ, ತನ್ನ ಸಂಕಲ್ಪದಂತೆ ಲೀಲಾವಿಹಾರಕ್ಕಾಗಿ ಪ್ರಕೃತಿಯೊಡನೆ ಕೂಡಿದಾಗ ಈ ಸೃಷ್ಟಿ ಪರಂಪರೆಯು ನಡೆಯುತ್ತದೆ.

ಶ್ಲೋಕ - 4 - ಸಂಸ್ಕೃತ 
ತ್ರಿಭುವನಕಮನಂ ತಮಾಲವರ್ಣಂ
ರವಿಕರಗೌರವರಾಂಬರಂ ದಧಾನೇ
ವಪುರಲಕಕುಲಾವೃತಾನನಾಬ್ಜಂ
ವಿಜಯಸಖೇ ರತಿರಸ್ತು ಮೇsನವದ್ಯಾ

ಕನ್ನಡದಲ್ಲಿ 
ಹೊಂಗೆಯೆಲೆ ಬಣ್ಣ ಪೊಂಗಿರಣದೊಲು
ಕಂಗೊಳಿಪ ಪೀತಾಂಬರ ಮೂಲೋಕ ಸುಂದರ
ಗುಂಗುರು ಮುಂಗುರುಳ ಮುಖಪದ್ಮದ
ಮಂಗಳ ಮೂರ್ತಿ ವಿಜಯಸಖನೊಳೆನ್ನೊಲುಮೆ ನಿಲಲಿ

ವಿವರಣೆ: 
ಹೊಂಗೆಯ ಎಲೆಗಳಂತೆ ಶ್ಯಾಮಲವರ್ಣದ ಅಂಗಾಕಾಂತಿಯಿಂದ ಕಂಗೊಳಿಸುವ, ಸೂರ್ಯನ ಹೊಂಗಿರಣಗಳಂತೆ ಹೊಳೆಯುವ ಪೀತಾಂಬರವನ್ನು ಧರಿಸಿರುವ, ಮುಖ ಕಮಲದ ಮೇಲೆ ಗುಂಗುರು-ಗುಂಗುರಾದ ಮುಂಗುರುಳುಗಳು ಜೋಲಾಡುತ್ತಿರುವ ದಿವ್ಯಮಂಗಳ ವಿಗ್ರಹವುಳ್ಳ, ತ್ರಿಭುವನೈಕ ಸುಂದರನಾದ, ಅರ್ಜುನ ಮಿತ್ರನಾದ ಶ್ರೀಕೃಷ್ಣನಲ್ಲಿ ನನ್ನ ನಿರೂಪಾಧಿಕವಾದ ಪ್ರೇಮವು ನೆಲೆಗೊಳ್ಳಲಿ. ಹೀಗೆ ಭೀಷ್ಮರು ಶರಶೈಯ್ಯೆಯ ಮೇಲೆ ಮಲಗಿ ತನ್ನೆದುರಿಗೆ ನಿಂತಿರುವ ಶ್ರೀಕೃಷ್ಣನ ಸೌಂದರ್ಯವನ್ನು ವರ್ಣಿಸುತ್ತಾರೆ.
ಇಲ್ಲಿ ಭೀಷ್ಮ ಪಿತಾಮಹರು ಯಾವುದೇ ಪ್ರತಿಫಲಾಪೇಕ್ಷೆ ಬಯಸದೇ ತಮ್ಮ ಮನಸ್ಸನ್ನು ಶ್ರೀ ಕೃಷ್ಣನ ಶುಭಾಶ್ರಯದಲ್ಲಿ ಸೇರಿಸುವಂತೆ ಪ್ರಾರ್ಥಿಸುತ್ತಾರೆ. ಫಲಾಪೇಕ್ಷೆಯಿಂದ ಭಗವಂತನನ್ನು ಪ್ರಾರ್ಥಿಸುವುದು ಅಧಮಾಚಾರವಾಗುತ್ತದೆ. ಪ್ರಸ್ತುತದಲ್ಲಿ ಬಹಳ ಜನ ಅಧಮಾಚಾರವನ್ನೇ ಅನುಸರಿಸುತ್ತಾರೆ. ಯಾವುದೇ ಫಲಾಪೇಕ್ಷೆಯಿಲ್ಲದೇ ಭಗವಂತನನ್ನು ಪ್ರಾರ್ಥಿಸುವುದು ಹಾಗೂ ದರ್ಶಿಸುವುದು ಉತ್ತಮಾಚಾರಣೆ.

ಶ್ಲೋಕ - 5 - ಸಂಸ್ಕೃತ 
ಯುಧಿ ತುರಗರಜೋವಿಧೂಮ್ರವಿಷ್ವಕ್
ಕಚಲುಲಿತಶ್ರಮವಾರ್ಯಲಂಕೃತಾಸ್ಯೇ
ಮಮ ನಿಷಿತಶರೈರ್ವಿಭಿದ್ಯಮಾನ-
ತ್ವಚಿ ವಿಲಸತ್ಕವಚೇsಸ್ತು ಕೃಷ್ಣ ಆತ್ಮಾ ||

ಕನ್ನಡದಲ್ಲಿ 
ಕದನದಿ ಕುದುರೆ ಕಾಲ್ಗಳ ಧೂಳಿನಿಂ ಕೆಟ್ಟು
ಕೆದರ್ದ ತಲೆ ಬೆಮರಪನಿ ಮೊಗದ
ಹರಿತ ಶರಗಳ ಘಾತಿಸಿದ ತ್ವಚೆಯ
ಕವಚಧರ ಕೃಷ್ಣಗರ್ಪಿತವಾಗಲೆನ್ನಾತ್ಮ

ವಿವರಣೆ : 
ರಣರಂಗದಲ್ಲಿ ರಾರಾಜಿಸುತ್ತಿದ್ದ ಆತನ (ಶ್ರೀಕೃಷ್ಣ) ಮೋಹನ ಮೂರ್ತಿಯು ನನಗೆ ನೆನಪಾಗುತ್ತದೆ. ಅವನ ಮುಖದ ಮೇಲೆ ಕೆದರಿ ಹೋಗಿದ್ದ ಮುಂಗುರುಳುಗಳು ಕುದುರೆಗಳ ಕಾಲಿನಿಂದೆದ್ದ ಧೂಳಿನಿಂದ ಧೂಸರವರ್ಣವಾಗಿಬಿಟ್ಟಿತ್ತು. ಆಯಾಸದ ಬೆವರಿನ ಹನಿಗಳು ಅಲ್ಲಲ್ಲಿ ಅಂಟಿಕೊಂಡು ಶೋಭಿಸುತ್ತಿದ್ದವು. ನನ್ನ ತೀಕ್ಷ್ಣವಾದ ಬಾಣಗಳು ಚರ್ಮದಮೇಲೆ ನಾಟಿ ಗಾಯಗಳನ್ನುಂಟುಮಾಡಿವೆ. ಇಷ್ಟೆಲ್ಲಾ ಇದ್ದರೂ ಕುಂದದ ಸೌಂದರ್ಯದಿಂದ ರಮಣೀಯವಾಗಿ ಕಂಗೊಳಿಸುತ್ತಿರುವ ಆ ಕವಚಧಾರಿಯಾದ ಶ್ರೀಕೃಷ್ಣನಲ್ಲಿ ನನ್ನ ಆತ್ಮವು ಸಮರ್ಪಿತವಾಗಲಿ.

ವ್ಯಾಖ್ಯಾನ: 
ಭಗವಂತನು ಅಪ್ರಾಕೃತ, ಶುದ್ಧಸತ್ವ ದಿವ್ಯ ಮೂರ್ತಿ. ಆದ್ದರಿಂದ ಅವನು ಬೆವರುವುದಾಗಲೀ, ರಕ್ತಸ್ರಾವವಾಗುವುದಾಗಲೀ ಅಥವಾ ಆಯಾಸದಿಂದ ಧೂಳಿನಿಂದ ಕುಡಿದವನಾಗುವುದು ಅಸಾಧ್ಯ. ಆದರೆ ಇಲ್ಲಿ ತನ್ನ ಮಿತ್ರನಾದ ಅರ್ಜುನನನ್ನು ಮೆಚ್ಚಿಸಲು ಭಗವಂತನು ಈ ವಿಧವಾದ ನಾಟಕವನ್ನು ಪ್ರದರ್ಶಿಸಿರುವನು. ಅಲ್ಲದೆ ಶ್ರೀಕೃಷ್ಣನ ಮತ್ತೊಂದು ಉದ್ದೇಶವೆಂದರೆ ಭೀಷ್ಮರ ಬಾಣಗಳಲ್ಲಡಗಿರುವ ಅಪಾರ ಶಕ್ತಿಯನ್ನು ಪ್ರಪಂಚಕ್ಕೆ ವಿಶದಪಡಿಸುವುದಾಗಿತ್ತು. ತನ್ನ ಇಬ್ಬರು ಭಕ್ತರನ್ನೂ ಸಂತೋಷಪಡಿಸಲು ಭಗವಾನ್ ಕೃಷ್ಣನು ತನ್ನ ಅವತಾರ ಮಹಿಮೆಯನ್ನು ಮರೆಮಾಚಿ ಸಾಮಾನ್ಯ ಮನುಷ್ಯನ ಪಾತ್ರವನ್ನು ಆಯ್ದುಕೊಂಡನು. ಅರ್ಜುನನಿಗೂ ಸಹ ಈ ಅಸಾಮಾನ್ಯ ದೃಶ್ಯವನ್ನು ವೀಕ್ಷಿಸಲಾಗಲಿಲ್ಲ. ಆದರೆ ಭೀಷ್ಮರಿಗೆ ಈ ವಿಧದ ಅಪರೂಪ ಆಶೀರ್ವಾದವನ್ನು ಭಕ್ತ ಕಿಂಕರನಾದ ಶ್ರೀಕೃಷ್ಣನು ನೀಡಿ ಅವರನ್ನು ಸಂತೋಷಪಡಿಸಿದನು.

ಶ್ಲೋಕ - 6 - ಸಂಸ್ಕೃತ 
ಸಪದಿ ಸಖಿವಚೋ ನಿಶಮ್ಯ ಮಧ್ಯೇ
ನಿಜಪರಯೋರ್ಬಲಯೋ ರಥಂ ನಿವೇಶ್ಯ |
ಸ್ಥಿತವತಿ ಪರಸೈನಿಕಾಯೂರಕ್ಷ್ಣ
ಹೃತವತಿ ಪಾರ್ಥಸಖೇ ರತಿರ್ಮಮಾಸ್ತು ||


ಕನ್ನಡದಲ್ಲಿ 
ಸಖನ ಮಾತನು ಕೇಳಿ ರಥವನುಭಯ-
ಸೇನೆಯ ನಡುವೆ ನಿಲ್ಲಿಸಿ ಶತ್ರುಸೈನಿಕರಾ-
ಯುಷ್ಯವನು ಕುಡಿನೋಟದೊಳೆ ಕದ್ದ
ಪಾರ್ಥಸಖನೊಳೆನಗೆ ಅಮಿತಪ್ರೇಮವಿರಲಿ

ವಿವರಣೆ 
ತನ್ನ ಮಿತ್ರನಾದ ಅರ್ಜುನನ ಮಾತನ್ನು ಕೇಳಿ, ಒಡನೆಯೇ ಸ್ವಸೈನ್ಯ ಮತ್ತು ಶತ್ರುಸೈನ್ಯಗಳ ಮಧ್ಯದಲ್ಲಿ ರಥವನ್ನು ನಿಲ್ಲಿಸಿದವನಾಗಿ, ಕೇವಲ ತನ್ನ ದೃಷ್ಟಿಯಿಂದಲೇ ಶತ್ರುಸೈನಿಕರ ಆಯುಸ್ಸನ್ನು ಕಸಿದು ಬಿಟ್ಟಿರುವ ಪಾರ್ಥ ಸಖನಾದ ಭಗವಾನ್ ಶ್ರೀಕೃಷ್ಣನಲ್ಲಿ ನನಗೆ ಪರಮ ಪ್ರೇಮವಿರಲಿ.

ವ್ಯಾಖ್ಯಾನ 
ಅರ್ಜುನನು ಕೃಷ್ಣನಿಗೆ ತಮ್ಮ ರಥವನ್ನು ಉಭಯ ಸೇನೆಗಳ ಮಧ್ಯೆ ತಂದು ನಿಲ್ಲಿಸುವಂತೆ ಆಜ್ಞೆ ಮಾಡಿದ ಧಾಟಿಯು ಅಹಂಕಾರದಿಂದ ಕೂಡಿತ್ತಾದರೂ, ಶ್ರೀಕೃಷ್ಣನು ಅದನ್ನು ತಪ್ಪಾಗಿ ಗ್ರಹಿಸದೇ ಅರ್ಜುನನು ಹೇಳಿದಂತೆ ರಥವನ್ನು ಉಭಯ ಸೇನೆಗಳ ಮಧ್ಯೆ ಕೊಂಡೊಯ್ದನು.
ನಂತರ ಶ್ರೀಕೃಷ್ಣನು ತನ್ನ ಮಿತ್ರ ಅರ್ಜುನನಿಗೆ - "ಓ ಅರ್ಜುನ ! ನಮ್ಮ ಮುಂದಿರುವ ಕೌರವರನ್ನು ನೋಡು"
ಇಲ್ಲಿ ರಾಮಾನುಜಾಚಾರ್ಯರ ವ್ಯಾಖ್ಯಾನವು ಹೃದಯಸ್ಪರ್ಶಿಯಾಗಿದೆ. ಅವರು ಹೀಗೆ ಬಣ್ಣಿಸುತ್ತಾರೆ :
"ಬ್ರಹ್ಮಾಂಡ ನಾಯಕನು ಗರ್ವದಿಂದ ಆಜ್ಞೆಮಾಡಿದ ಅರ್ಜುನನ ಮಾತಿಗೆ ಮನ್ನಣೆ ನೀಡುತ್ತಾನೆ."
" ತನ್ನಲ್ಲಿ ಆಶ್ರಯ ಪಡೆಯುವವರ ಮೇಲೆ ಅತೀವ ಪ್ರೀತಿಯುಳ್ಳವನಾಗಿ, ಸಂಪೂರ್ಣ ಜ್ಞಾನ ನಿಧಿ, ಅಪಾರ ಶಕ್ತಿ, ಪ್ರಭುತ್ವ, ಸಾಮರ್ಥ್ಯ ಮತ್ತು ವೈಭವೋಪೇತನಾದ, ತನ್ನ ಇಚ್ಛೆಯಂತೆ ಇಡೀ ವಿಶ್ವವನ್ನು ಸೃಷ್ಟಿಸಿ ಹಾಗೂ ವಿಸರ್ಜಿಸುವ ಶಕ್ತಿಯುಳ್ಳ, ಪ್ರತಿ ಹಂತದಲ್ಲೂ ನಮ್ಮ ಅಂತರಂಗ ಹಾಗೂ ಬಹಿರಂಗಗಳನ್ನು ಯಾವಾಗಲೂ ನಿಯಂತ್ರಿಸುವ, ಸರ್ವೋಚ್ಚ ಶ್ರೀ ಕೃಷ್ಣನು ಅರ್ಜುನನು ಆಜ್ಞಾಪಿಸಿದ ಕಾರ್ಯವನ್ನು ( ರಥವನ್ನು ಎರಡು ಸೈನ್ಯಗಳ ಮಧ್ಯೆ ನಿಲ್ಲಿಸಬೇಕೆಂಬ) ಕೂಡಲೇ ಕಾರ್ಯಗತಗೊಳೋಸಿದನು". ಆಚಾರ್ಯ ರಾಮಾನುಜರು ಈ ಮೂಲಕ ನಮಗೆ ಈ ಸಂದರ್ಭದಲ್ಲಿ ಯಾರು ಸೇವಕ ಮತ್ತು ಯಜಮಾನ ಎಂಬುದನ್ನು ಸ್ಪಷ್ಟೀಕರಿಸುತ್ತಾರೆ. ಶ್ರೀಕೃಷ್ಣನು ತನ್ನ ಒಂದು ಕಿರುನೋಟದಿಂದಲೇ ಪಾಂಡವರ ಶತ್ರುಗಳ ಪ್ರಾಣವನ್ನು ಹಾಗೂ ತನ್ನ ಪ್ರಾಣವನ್ನೂ ಸಹ ತೆಗೆಯುವ ಸುಳಿವನ್ನು ಈ ಶ್ಲೋಕದಲ್ಲಿ ವ್ಯಕ್ತಪಡಿಸಿದನೆಂದು ಭೀಷ್ಮ ಪಿತಾಮಹರು ವ್ಯಕ್ತಪಡಿಸಿದ್ದಾರೆ. ಶತ್ರುಗಳ ಸಾವು ಒಂದೊಂದಾಗಿ ನಾಟಕದಲ್ಲಿನ ನಟರು ತಮ್ಮ ತಮ್ಮ ಪಾತ್ರಗಳನ್ನು ನಟಿಸುವಂತೆ ಮುಂದೆ ಬಂದೇ ಬರುತ್ತದೆ.

ಶ್ಲೋಕ - 7 - ಸಂಸ್ಕೃತ 
ವ್ಯವಹಿತಪೃತನಾಮುಖಂ ನಿರೀಕ್ಷ್ಯ
ಸ್ವಜನವಧಾದ್ವಿಮುಖಸ್ಯ ದೋಷಬುಧ್ಯಾ |
ಕುಮತಿಮಹರದಾತ್ಮಾವಿದ್ಯಯಾ ಯ-
ಶ್ಚರಾಣರತಿಃ ಪರಮಸ್ಯ ತಸ್ಯ ಮೇsಸ್ತು ||

ಕನ್ನಡದಲ್ಲಿ 
ಕುರುಸೇನಾ ಪ್ರಮುಖರನು ವೀಕ್ಷಿಸುತ
ಪರಿಜನವಧೆಗಳುಕಿದರ್ಜುನ-
ಗರುಹಿ ಆತ್ಮ ವಿದ್ಯೆಯಂ ಮೋಹಗಳೆದ
ಪರಮನ ಚರಣದೊಲವೆನಗಿರಲಿ

ವಿವರಣೆ 
ಅರ್ಜುನನು ದೂರದಿಂದ ಕೌರವ ಸೇನೆಯ ಮುಖ್ಯಸ್ಥರಾದ ನಮ್ಮನ್ನು ನೋಡಿದಾಗ ಯುದ್ಧಮಾಡುವುದು ಪಾಪವೆಂದು ತಿಳಿದು, ಅವನು ಸ್ವಜನ ವಧೆಯಿಂದ ವಿಮುಖನಾದನು. ಆಗ ಯಾವ ಜ್ಞಾನಮೂರ್ತಿಯು ಶ್ರೀಗೀತೆಯೆಂಬ ಆತ್ಮವಿದ್ಯೆಯನ್ನು ಉಪದೇಶಿಸಿ, ಅವನ ಮೋಹವನ್ನು ಹೋಗಲಾಡಿಸಿದನೋ ಅಂತಹ ಪರಮ ಪುರುಷ ಭಗವಾನ್ ಶ್ರೀಕೃಷ್ಣನ ಚರಣಗಳಲ್ಲಿ ನನ್ನ ಪ್ರೀತಿಯು ಸ್ಥಿರವಾಗಿರಲಿ.

ವ್ಯಾಖ್ಯಾನ 
ಪಾರ್ಥಸಾರಥಿಯು ಗೊಂಡಲದಲ್ಲಿದ್ದ ಅರ್ಜುನನಿಗೆ ಗೀತೋಪದೇಶವನ್ನು ನೀಡಿ ಧರ್ಮಯುದ್ಧದಲ್ಲಿ ಬಂಧು ಬಾಂಧವರನ್ನು ಹತ್ಯೆಗೈಯುವುದು ಪಾಪದ ಕೆಲಸವಲ್ಲವೆಂದು ಆದೇಶಿಸುತ್ತಾನೆ. ಮುಂದುವರೆದು ಶ್ರೀಕೃಷ್ಣನು ಅರ್ಜುನನಿಗೆ ಈ ರೀತಿಯಾಗಿ ತಿಳಿಹೇಳುತ್ತಾನೆ - "ಅರ್ಜುನ, ಸಂತಾಪಕ್ಕೆ ಅರ್ಹರಲ್ಲದವರ ಬಗೆಗೆ ನೀನು ದುಃಖಪಡುತ್ತಿರುವೆ. ಶತ್ರು ಪಕ್ಷದಲ್ಲಿರುವ ಯಾವ ಯೋಧರ ಬಗೆಗೆ ನೀನು ಸಂತಾಪ ಪಡುತ್ತಿರುವೆಯೋ ಅವರನ್ನೆಲ್ಲಾ ಆಗಲೇ ನಾನು ನಾಶ ಮಾಡಿರುವೆ. ಅವರ ದೈಹಿಕ ವಿನಾಶವನ್ನು ಮಾಡಲು ನೀನು ಕೇವಲ ನೆಪಮಾತ್ರ. ಆದ್ದರಿಂದ ಪಾಪವು ನಿನ್ನನ್ನು ಸುತ್ತಿಕೊಳ್ಳುವುದಿಲ್ಲ". ಭೀಷ್ಮ ಪಿತಾಮಹನು ಗೀತಾಚಾರ್ಯನ ಪಾದ ಪದ್ಮಗಳಲ್ಲಿ ಅವಿಚ್ಛಿನ್ನವಾದ ಹಾಗೂ ಅವಿರತವಾದ ಭಕ್ತಿಯನ್ನು ನೀಡಿ ಆಶೀರ್ವಹಿಸೆಂದು ಪ್ರಾರ್ಥಿಸುತ್ತಾನೆ.

ಶ್ಲೋಕ - 8 - ಸಂಸ್ಕೃತ 
ಸ್ವನಿಗಮಮಪಹಾಯ ಮತ್ಪ್ರತಿಜ್ಞಾಮ್
ಋತಮಧಿಕರ್ತಮವಪ್ಲುತೋ ರಥಸ್ಥಃ |
ಧೃತರತಚರಣೋsಭ್ಯಾಯಾಚ್ಚಲದ್ಗು-
ರ್ಹರಿರಿವ ಹಂತುಮಿಭಂ ಗತೋತ್ತರೀಯಃ ||

ಕನ್ನಡದಲ್ಲಿ 
ಎನ್ನ ಪ್ರತಿಜ್ಞೆಯ ನಿಜವ ಗೈಯಲು
ತನ್ನ ಶಪಥವ ಮುರಿದು ರಥದಿಂ ಧುಮುಕಿ
ಸನ್ನುತನು ಚಕ್ರವಪಿಡಿದು ಆನೆ ಕೊಲ್ವ ಸಿಂಹದೊ-
ಲೆನ್ನೆಡೆಗೆ ಧಾವಿಸೆ ಬಿದ್ದುದವನುತ್ತರೀಯ

ವಿವರಣೆ 
"ಶ್ರೀಕೃಷ್ಣನು ಯುದ್ಧದಲ್ಲಿ ಶಸ್ತ್ರವನ್ನು ಧರಿಸುವಂತೆ ಮಾಡಿಬಿಡುತ್ತೇನೆ" ಎಂದು ನಾನು ಪ್ರತಿಜ್ಞೆ ಮಾಡಿದ್ದೆ. "ನಾನು ಯುದ್ಧದಲ್ಲಿ ಶಸ್ತ್ರವನ್ನು ಹಿಡಿಯುವುದಿಲ್ಲ" ಎಂದು ಶ್ರೀಕೃಷ್ಣನು ಪ್ರತಿಜ್ಞೆ ಮಾಡಿದ್ದನು. ಆದರೆ ಭಕ್ತನಾದ ನನ್ನ ಪ್ರತಿಜ್ಞೆಯನ್ನು ನಿಜವಾಗಿಸುವುದಕ್ಕಾಗಿ ತನ್ನ ಶಪಥವನ್ನೇ ಮುರಿದು, ಸ್ವಾಮಿಯು ರಥದಿಂದ ಕೆಳಗೆ ಧುಮುಕಿ, ಸಿಂಹವು ಆನೆಯನ್ನು ಸಂಹರಿಸಲು ಅದರ ಮೇಲೆ ಎರಗುವಂತೆ, ಚಕ್ರವನ್ನೆತ್ತಿಕೊಂಡು ನನ್ನ ಮೇಲೆರಗಲು ಧಾವಿಸಿ ಬರುತ್ತಿರುವಾಗ ಭೂಮಿಯು ನಡುಗಿತು. ಹೆಗಲಲ್ಲಿ ಹೊತ್ತ ಉತ್ತರೀಯವು ಜಾರಿ ಬಿತ್ತು. ಇಂಥಹ ಶ್ರೀಕೃಷ್ಣನಲ್ಲಿ ನನ್ನ ಪ್ರೀತಿಯು ಸ್ಥಿರವಾಗಲಿ.

ಮತ್ತೊಂದು ವಿವರಣೆ / ವ್ಯಾಖ್ಯಾನ: 
ಭಗವಂತನು ಪವಿತ್ರ ವೇದಗಳಿಗೆ ಸಮಾನವಾದ ತನ್ನ ಶಪಥವನ್ನು ಮರೆತು ನನ್ನ ಶಪಥವನ್ನು (ನಾನು ಯುದ್ಧ ಪೂರ್ವದಲ್ಲಿ ಕೃಷ್ಣನನ್ನು ನನ್ನೊಡನೆ ನಡೆಯುವ ಯುದ್ಧದಲ್ಲಿ ಶಸ್ತ್ರ ಧರಿಸುವಂತೆ ಮಾಡಿಯೇ ತೀರುತ್ತೇನೆಂದು ಮಾಡಿದ್ದ ಶಪಥ) ಪೂರೈಸಲು ಮದಿಸಿದ ಆನೆಯನ್ನು ಕೊಲ್ಲುವ ಸಿಂಹದಂತೆ ನನ್ನಡೆಗೆ ಧಾವಿಸಿ ಬರುತ್ತಿರುವ ದೃಶ್ಯವನ್ನು ವೀಕ್ಷಿಸುವ ಅನುಭವವು ರೋಮಾಂಚನವಾದದ್ದು. ಶ್ರೀಕೃಷ್ಣನು ರಥದಿಂದ ಧುಮಿಕಿದೊಡನೇ ಅವನ ಭಾರಕ್ಕೆ ಭೂಮಿಯು ಕಂಪಿಸಿತು, ಅವನು ಧರಿಸಿದ್ದ ಮೇಲ್ವಸ್ತ್ರವು ಅವಣಿಗರಿವಿಲ್ಲದಂತೆ ಜಾರಿ ಭೂಮಿಯಮೇಲೆ ಬಿದ್ದಿತು ಹಾಗೂ ಅವನು ತನ್ನ ಕೈಯಲ್ಲಿ ಸುದರ್ಶನ ಚಕ್ರವನ್ನು ಹಿಡಿದು ನನ್ನೆಡೆಗೆ ಧಾವಿಸಿ ಬರತೊಡಗಿದನು. ಅವನ ತೋಳುಗಳು ನನ್ನ ತೀಕ್ಷ್ಣ ಬಾಣಗಳಿಂದ ತೂತಾಗಿ ಅಲ್ಲಿಂದ ರಕ್ತ ಸುರಿಯುತ್ತಿದ್ದರೂ ಲೆಕ್ಕಿಸದೇ ಶಾಸ್ತ್ರಧಾರಿಯಾದ ನನ್ನನ್ನು ಕೊಲ್ಲಲು ಧಾವಿಸಿ ಬರುತ್ತಿರುವನು. ಭಕ್ತ ವತ್ಸಲನು ತನ್ನ ಒಬ್ಬ ಭಕ್ತನಿಗೆ (ಅರ್ಜುನನಿಗೆ) ಪ್ರಾಣದಾನವನ್ನು ನೀಡುವುದರ ಜೊತೆಗೆ ಮತ್ತೊಬ್ಬ ಭಕ್ತನ (ನನ್ನ) ಪ್ರತಿಜ್ಞೆಯನ್ನು ಪೂರೈಸುವ ಅಪಾರ ಕರುಣಾಮೂರ್ತಿಯು ಎರಡು ಬಾರಿ ಭಕ್ತದಾಕ್ಷಿಣ್ಯವನ್ನು ಕೊಡಮಾಡಿದನು. ಅಂತಹ ಭಕ್ತವತ್ಸಲ ಮುಕುಂದನು ನನಗೆ ಶಾಶ್ವತವಾದ ಆಶ್ರಯ ಹಾಗೂ ಸಹಾಯವನ್ನು ಕರುಣಿಸಲಿ. (ವಿ.ಸೂ: ಇದೇ ವ್ಯಾಖ್ಯಾನವು ಮುಂದಿನ ಶ್ಲೋಕಕ್ಕೂ ಅನ್ವಯಿಸುತ್ತದೆ)

ಶ್ಲೋಕ - 9 ಸಂಸ್ಕೃತ
ಶಿತವಿಶಿಖಹತೋ ವಿಶೀರ್ಣದಂಶಃ
ಕ್ಷತಜಪರಿಪ್ಲುತಆತತಾಯಿನೋ ಮೇ |
ಪ್ರಸಭಮಭಿಸಸಾರ ಮದ್ವಧಾರ್ಥಂ
ಸ ಭವತು ಮೇ ಭಗವಾನ್ಗತಿರ್ಮುಕುಂದಃ ||

ಕನ್ನಡದಲ್ಲಿ 
ದುರುಳನಾದೆನ್ನ ಹರಿತಶರಗಳಿಂ
ತರಿದು ಕವಚ ರುಧಿರಮಯವಾಗಿರೆ
ಉರವು ರಭಸದಿಂ ವಧಿಸೆ ನುಗ್ಗಿದ
ಸಿರಿಮುಕುಂದನೆನಗಾಶ್ರಯಮಾಗಲಿ

ವಿವರಣೆ 
ಆತತಾಯಿಯಾದ ನಾನು ತೀಕ್ಷ್ಣವಾದ ಬಾಣಗಳನ್ನು ಹೊಡೆದು ಅವನ ಕವಚವನ್ನು ತುಂಡರಿಸಿದ್ದೆ. ಅದರಿಂದ ಅವನ ಇಡೀ ಶರೀರವು ರಕ್ತದಿಂದ ತೊಯ್ದು ಹೋಗಿತ್ತು. ಅರ್ಜುನನು ತಡೆಯುತ್ತಿದ್ದರೂ ಕೇಳದೆ ನನ್ನನ್ನು ಕೊಂದೇ ಹಾಕುವೆನೆಂದು ಬಲವಂತವಾಗಿ ಯಾವಾತನು ನನ್ನನ್ನು ಅನುಗ್ರಹಿಸಲು ನನ್ನ ಕಡೆಗೆ ಓಡಿ ಬಂದನೋ, ಅಂತಹ ಭಕ್ತವತ್ಸಲನಾದ ಭಗವಾನ್ ಶ್ರೀಕೃಷ್ಣನೇ ನನಗೆ ಗತಿಯಾಗಲಿ; ಆಶ್ರಯವಾಗಲಿ.

ಶ್ಲೋಕ - 10 - ಸಂಸ್ಕೃತ 
ವಿಜಯರಥಕುಟುಂಬ ಆತ್ತತೋತ್ರೇ
ಧೃತಹಯರಶ್ಮಿನಿ ತಚ್ಛ್ರಿಯೇಕ್ಷಣೀಯೇ |
ಭಗವತಿ ರತಿರಸ್ತು ಮೇ ಮುಮೂರ್ಷೋ-
ರ್ಯಮಿಹ ನಿರೀಕ್ಷ್ಯಹತಾ ಗತಾಃಸರುಪಮ್ ||

ಕನ್ನಡದಲ್ಲಿ 
ಯಾರನೀಕ್ಷಿಸುತ ರಣದಲಿ ಮಡಿದು
ಸಾರೂಪ್ಯ ಮುಕುತಿಯ ತಾವು ಪಡೆದರೊ
ಚಾರುಕರದ ಲಗಾಮು ಚಾಟಿಯ ಪಾರ್ಥ-
ಸಾರಥಿಯೊಲ್ಮೆಯಾಗಲಿ ಸಾಯುತಿರುವೆನಗೆ

ವಿವರಣೆ 
ಅರ್ಜುನನ ರಥ ಸಾರಥಿಯಾಗಿ ಒಂದು ಕೈಯಲ್ಲಿ ಚಾವಟಿಗೆಯನ್ನೂ, ಮತ್ತೊಂದು ಕೈಯಲ್ಲಿ ಕುದುರೆಗಳ ವಾಘೆಗಳನ್ನು ಹಿಡಿದುಕೊಂಡು, ಆ ವೇಷದಲ್ಲಿಯೂ ಅತ್ಯಂತ ರಮಣೀಯದರ್ಶನನಾಗಿದ್ದ ಪ್ರಭುವನ್ನು ನೋಡುತ್ತಾ ಮಹಾಭಾರತದ ಯುದ್ಧದಲ್ಲಿ ಮಡಿದವರೆಲ್ಲರೂ ಆತನ ಸಾರೂಪ್ಯ ಮುಕ್ತಿಯನ್ನೇ ಪಡೆದರೋ, ಅಂತಹ ಪಾರ್ಥಸಾರಥಿ ಭಗವಾನ್ ಶ್ರೀಕೃಷ್ಣನಲ್ಲಿ ಮರಣಾಸನ್ನನಾದ ನನಗೆ ಪರಮ ಪ್ರೀತಿ ಉಂಟಾಗಲಿ.

ವ್ಯಾಖ್ಯಾನ: 
ಸಾಮಾನ್ಯವಾಗಿ ಕೆಲವು ಕಾರ್ಯಗಳನ್ನು ನಿಷೇಧಿಸಿದ್ದರೂ ತನ್ನ ಸಂಸಾರವನ್ನು ಎಲ್ಲ ಸಂದರ್ಭದಲ್ಲೂ ರಕ್ಷಿಸಲು ಎಲ್ಲ ವಿಧದ ಕಾರ್ಯಗಳನ್ನು ಕೈಗೊಳ್ಳಬಹುದೆಂದು ಧರ್ಮಶಾಸ್ತ್ರವು ಅನುಮತಿಸುತ್ತದೆ. ಪಾರ್ಥಸಾರಥಿಯು ತನ್ನ ಪ್ರತಿಜ್ಞೆಯನ್ನು (ಪಾಂಡವ-ಕೌರವ ಯುದ್ಧದಲ್ಲಿ ಯುದ್ಧಭೂಮಿಯಲ್ಲಿ ಶಸ್ತ್ರವನ್ನು ಉಪಯೋಗಿಸುವುದಿಲ್ಲವೆಂಬ) ಕೈಬಿಟ್ಟದ್ದು ಧರ್ಮಶಾಸ್ತ್ರದ ಆಣತಿಯ ಮೇರೆಗೆ ಇರಬಹುದು. ಅವನ ಉದ್ದೇಶವು ವಿಜಯ-ರಥ ಕುಟುಂಬವನ್ನು ಉಳಿಸುವುದಾಗಿತ್ತು. ಭೂಭಾರವನ್ನು ಕಡಿಮೆ ಮಾಡುವುದೇ ನಮ್ಮ ಭಗವಂತನ ಸಂಕಲ್ಪ. ಅವನು ತನ್ನ ಪ್ರತಿಜ್ಞೆಯನ್ನು ಮುರಿಯುವ ಉದ್ದೇಶವನ್ನು ವಿಶ್ಲೇಷಿಸುವ ಕಾರ್ಯವು ನಮ್ಮಂಥಃ ಅಲ್ಪರಿಗೆ ಸಾಧ್ಯವೆ? ವರ್ಣನೆಗೆ ನಿಲುಕದ ಯೋಗಶಕ್ತಿಯು ಭಗವಂತನಿಗಿದೆ. ಭೀಷ್ಮರಿಗೆ ಮಾತ್ರ ತನ್ನ ಕೊನೆಯ ಕ್ಷಣದಲ್ಲಿ ಭಗವಾನ್ ಶ್ರೀಕೃಷ್ಣನ ದಿವ್ಯ ದರ್ಶನ ಹಾಗೂ ಆಶೀರ್ವಾದದಿಂದ ಮೋಕ್ಷವನ್ನು ಪಡೆದರು. ಮೋಕ್ಷವನ್ನು ಪಡೆಯಲು ಅವರ ಹೇಳಿಕೆಯನ್ನು ಅನುಸರಿಸಿದರೆ ಸಾಕು.

ಶ್ಲೋಕ - 11 - ಸಂಸ್ಕೃತ
ಲಲಿತಗತಿವಿಲಾಸವಲ್ಗುಹಾಸ-
ಪ್ರಣಯನಿರೀಕ್ಷಣಕಲ್ಪಿತೋರುಮಾನಾಃ |
ಕೃತಮನುಕೃತವತ್ಯ ಉನ್ಮಾದಾಂಧಾಃ
ಪ್ರಕೃತಿಮಗನ್ಕಿಲ ಯಸ್ಯ ಗೋಪವಧ್ವಃ ||

ಕನ್ನಡದಲ್ಲಿ
ಆರ ಹಾವ ಭಾವ ಕುಡಿಗಣ್ಣೋಟದಿಂ ಗೋಪೀ - 
ನಾರಿಯರತ್ಯಾನಂದ ಪರವಶರಾಗಿ
ವಾರಿಜಾಕ್ಷನ ಲೀಲೆಯನನುಕರಿಸಿದರಾ ಅ-
ಪಾರ ಮಹಿಮನಲೆನಗೊಲುಮೆಯಕ್ಕೆ

ವಿವರಣೆ 
ಯಾರ ಹಾವ - ಭಾವಗಳಿಂದ ಕೂಡಿದ ವಿಲಾಸ, ಮಧುರವಾದ ಮಂದಹಾಸ, ಬೆಡಗು, ಬಿನ್ನಾಣ, ಪ್ರೇಮಯುಕ್ತವಾದ ಕಡೆಗಣ್ಣ ನೋಟದಿಂದ ಅತ್ಯಂತ ಸಮ್ಮಾನಿತರಾದ ಗೋಪಿಯರು ರಾಸಲೀಲೆಯಲ್ಲಿ ಅವನು ಅಂತರ್ಧಾನನಾದಾಗ ಪ್ರೇಮೋನ್ಮತ್ತರಾಗಿ ಅವನ ಆ ದಿವ್ಯಲೀಲೆಗಳನ್ನು ಅನುಕರಣೆ ಮಾಡುತ್ತಾ ತನ್ಮಯರಾಗಿ ಬಿಟ್ಟರೋ, ಅಂತಹ ಭಗವಾನ್ ಶ್ರೀಕೃಷ್ಣನಲ್ಲಿ ನನಗೆ ಪರಮ ಪ್ರೇಮವು ಉಂಟಾಗಲಿ

ಮತ್ತೊಂದು ವಿವರಣೆ / ವ್ಯಾಖ್ಯಾನ : 
ಕ್ಷತ್ರಿಯ ಧರ್ಮವನ್ನು ಅನುಸರಿಸಿ ಮುಕ್ತಿಯನ್ನು ಪಡೆಯುವುದರಲ್ಲಿ ಆಶ್ಚರ್ಯವೇನಿಲ್ಲ. ಭಗವಾನ್ ಶ್ರೀಕೃಷ್ಣನ ಲೀಲೆಯನ್ನು ನೋಡಿ ಆನಂದಿಸಿದ ವಿಶೇಷ ಜ್ಞಾನವಿಲ್ಲದ ಗೋಪಿಯರೂ ಮುಕ್ತಿಯನ್ನು ಪಡೆದರು. ಭಗವಂತನಿಗೆ ಗೋಪಿಕಾಸ್ತ್ರೀಯರು ಪ್ರೀತಿ ಹಾಗೂ ಗೌರವಗಳ ಸಂಕೇತವಾಗಿದ್ದರು ಮತ್ತು ಅವರು ಕೃಷ್ಣ ಲೀಲೆಗಳಲ್ಲಿ ಭಾಗವಹಿಸಿ ಮುಕ್ತಿಯನ್ನು ಪಡೆದರು. ಶ್ರೀ ಕೃಷ್ಣನ ಸುಂದರ ಲೀಲೆ, ಸುಂದರ ಆಟ-ಪಾಠಗಳಲ್ಲಿ, ಮನಮೋಹಕ ಮುಗುಳುನಗೆಗಳಲ್ಲಿ, ಕರುಣಾಪೂರಿತ ನೋಟಗಳಲ್ಲಿ ಮತ್ತು ಅವನ ಪ್ರೀತಿಗೆ ಪಾತ್ರರಾಗುವ ಅದೃಷ್ಟವನ್ನು ಪಡೆದ ಗೋಪಿಕಾಸ್ತ್ರೀಯರು ಅವನ ಅನುಗ್ರಹದಿಂದ ಮೋಕ್ಷವನ್ನು ಪಡೆದರು.

ಶ್ಲೋಕ - 12 - ಸಂಸ್ಕೃತ 
ಮುನಿಗಣನೃಪವರ್ಯಸಂಕುಲೇsಂತಃ
ಸದಸಿ ಯುಧಿಷ್ಠಿರರಾಜಸೂಯ ಏಷಾಮ್ |
ಅರ್ಹಣಮುಪಪೇದ ಈಕ್ಷಣೀಯೋ
ಮಮ ದೃಶಿಗೋಚರ ಏಷ ಆವಿರಾತ್ಮಾ ||

ಕನ್ನಡದಲ್ಲಿ 
ಮುನಿಗಣ ರಾಜವರ್ಯರು ನೆರೆದ
ಘನ ರಾಜಸೂಯದಲಗ್ರಪೂಜೆಯ ಪಡೆದ
ಗುಣನಿಧಿಯಿಂದಿಲ್ಲಿ.ಕರುಣಿಸಿಹ ದರು -
ಶನವನೆನಗೆ ಅವನಲೆನ್ನಾತ್ಮ ನೆಲೆಗೊಳಲಿ

ವಿವರಣೆ 
ಮಹಾಮುನಿಗಳೂ, ರಾಜಶ್ರೇಷ್ಠರೂ ನೆರೆದಿದ್ದ ಧರ್ಮರಾಜನ ರಾಜಸೂಯ ಯಜ್ಞದ ಸಭೆಯಲ್ಲಿ ಮೊಟ್ಟಮೊದಲಿಗೆ ಯಾರ ಅಗ್ರಪೂಜೆಯು ನನ್ನ ಕಣ್ಣಮುಂದೆಯೇ ನಡೆಯಿತೋ, ಅಂತಹ ಸರ್ವರಿಗೂ ಆತ್ಮಸ್ವರೂಪನಾದ ಭಗವಾನ್ ಶ್ರೀಕೃಷ್ಣನೇ ಇಂದು ನನ್ನ ಮೃತ್ಯುಸಮಯದಲ್ಲಿ ನನ್ನೆದುರಿನಲ್ಲೇ ದರ್ಶನ ನೀಡುತ್ತಿರುವನಲ್ಲ ! ಅವನಲ್ಲಿ ನನಗೆ ಅಖಂಡವಾದ ಪ್ರೇಮ ಉಂಟಾಗಲಿ.

ಮತ್ತೊಂದು ವಿವರಣೆ / ವ್ಯಾಖ್ಯಾನ : 
ಯುಧಿಷ್ಠಿರನ ರಾಜಸೂಯ ಯಾಗದಲ್ಲಿ ಭಾಗವಹಿಸಿದ್ದ ಋಷಿಗಳು, ಪ್ರಖ್ಯಾತ ರಾಜರುಗಳು ಭಗವಾನ್ ಶ್ರೀಕೃಷ್ಣನ ಅಪ್ರತಿಮ ಸೌಂದರ್ಯವನ್ನು ಕೊಂಡಾಡಿ, ಅವನ ಕರುಣಾಪೂರಿತ ದೃಷ್ಟಿಗಳಲ್ಲಿ ಮಿಂದು ಪಾವನರಾಗಿ ಅವನಿಗೆ ತಮ್ಮನ್ನೇ ಅರ್ಪಿಸಿಕೊಂಡರು. ಎಲ್ಲರ ಪ್ರಶಂಸೆಗಳನ್ನು ಪಡೆದ ಆ ಭಗವಂತನು ನನ್ನೆದುರು ನಿಂತು ತನ್ನ ದಿವ್ಯ ದರ್ಶನವನ್ನು ಕರುಣಿಸಿ ನನ್ನನ್ನು ಆಶೀರ್ವಹಿಸಿದ್ದು ನನ್ನ ಪರಮ ಸೌಭಾಗ್ಯ. ಅವನ ಆಶೀರ್ವಾದಕ್ಕೆ ಸರಿಸಾಟಿಯಿಲ್ಲ ಮತ್ತು ಅಳೆಯಲಾಗದ್ದು.

ಶ್ಲೋಕ - 13 - ಸಂಸ್ಕೃತ 
ತಮಿಮಮಹಮಜಂ ಶರೀರಭಾಜಾಂ
ಹೃದಿ ಹೃದಿ ದಿಷ್ಠಿತಮಾತ್ಮಕಲ್ಪಿತಾನಾಮ್ |
ಪ್ರತಿದೃಶಮಿವ ನೈಕಧಾರ್ಕಮೇಕಂ
ಸಮಧಿಗತೋsಸ್ಮಿ ವಿಧೂತಭೇದಮೋಹಃ ||

ಕನ್ನಡದಲ್ಲಿ 
ಓರ್ವನೆ ರವಿ ಜಗಕೆ ಪರಿಪರಿಯಾಗಿ
ತೋರ್ವಂತೊಬ್ಬ ಅಜನು ತಾನೆ ಬಹುರೂಪಿ
ಸರ್ವಭೇದವ ತೊರೆದು ಮೋಹವ ಕಳೆದು
ಸರ್ವಾತ್ಮ ಕೃಷ್ಣನಲೆ ಲೀನವಹೆ ನಾನಿನ್ನು

ವಿವರಣೆ 
ಒಬ್ಬನೇ ಸೂರ್ಯನು ಬೇರೆ - ಬೇರೆ ಕಣ್ಣುಗಳಿಗೆ ಅನೇಕ ರೂಪಿಯಾಗಿ ತೋರುವಂತೆಯೇ ಅಜನ್ಮನಾದ ಭಗವಾನ್ ಶ್ರೀಕೃಷ್ಣನು ತನ್ನಿಂದಲೇ ರಚಿತವಾದ ಅನೇಕ ಶರೀರಧಾರಿಗಳ ಹೃದಯಗಳಲ್ಲಿ ಅಂತರ್ಯಾಮಿಯಾಗಿ ಅನೇಕರೂಪಗಳಂತೆ ಕಂಡು ಬರುತ್ತಿದ್ದಾನೆ. ವಾಸ್ತವವಾಗಿ ಓರ್ವನೇ ಎಲ್ಲರಲ್ಲಿ ವಿರಾಜಮಾನನಾಗಿದ್ದಾನೆ. ಅಂತಹ ಭಗವಂತನನ್ನು ನಾನು ಭೇದ-ಭ್ರಮರಹಿತನಾಗಿ ಪಡೆದುಕೊಂಡು ಏಕಾತ್ಮಭಾವವುಂಟಾದವನಾಗಿ, ಅವನ ಇದಿರಿನಲ್ಲೇ ಶರೀರತ್ಯಾಗ ಮಾಡುತ್ತಿದ್ದೇನೆ.
ಮತ್ತೊಂದು ವಿವರಣೆ: 
ಭಗವಂತನ ಸೃಷ್ಟಿಯಲ್ಲಿನ ಪ್ರತಿಯೊಂದು ಜೀವಿಗಳ ಹೃದಯದಲ್ಲೂ ಬೆಳಗುತ್ತಿರುವ ಹುಟ್ಟು ಸಾವುಗಳಿಲ್ಲದ ಶಕ್ತಿಯೊಂದಿದೆ ಎಂಬ ಸತ್ಯ ಸಂಗತಿಯು ನನಗೀಗ ಮನವರಿಕೆಯಾಗುತ್ತಿದೆ. ಈ ಸರ್ವೋಚ್ಚ ಸತ್ಯವನ್ನರಿತ ನಂತರ ನನ್ನನ್ನು ಆವರಿಸಿದ ಅಜ್ಞಾನವು ಈಗ ಮಾಯವಾಯಿತು.
ಆಕಾಶದಲ್ಲಿ ಪ್ರಜ್ವಲಿಸುತ್ತಿರುವ ಸೂರ್ಯನೊಬ್ಬನೇ ಆದರೂ ಅವನನ್ನು ನೋಡುತ್ತಿರುವುದು ಎಲ್ಲ ಕಣ್ಣುಗಳು. ಅಪಾರವಾದ ಕಣ್ಣುಗಳು ಸೂರ್ಯನನ್ನು ವೀಕ್ಷಿಸುವ ಅನುಭವಗಳನ್ನು ಹೊಂದಿದ್ದರೂ, ನೋಡಲ್ಪಟ್ಟಿರುವ ಸೂರ್ಯನಲ್ಲಿ ಯಾವುದೇ ವ್ಯತ್ಯಾಸವಿರುವುದಿಲ್ಲ. ಅದೇ ಸೂರ್ಯನನ್ನು ನೀರು ತುಂಬಿದ ಎಣಿಸಲಾಗದಷ್ಟು ಪಾತ್ರೆಗಳಲ್ಲಿ ಪ್ರತಿಬಿಂಬರೂಪದಲ್ಲಿ ಕಾಣಿಸಿದರೂ ಯಾವುದೇ ವ್ಯತ್ಯಾಸವಿರುವುದಿಲ್ಲ.
ಅಂತೆಯೇ ಲೆಕ್ಕವಿಲ್ಲದಷ್ಟು ಯೋಗಿಗಳ ಹೃದಯಗಳಲ್ಲಿ ಪರಮಾತ್ಮನ ಅನುಭವಗಳನ್ನು ತುಂಬಿಕೊಂಡಿದ್ದರೂ ಎಲ್ಲವೂ ಒಂದೇ ಆಗಿರುತ್ತದೆ. ಈಗ ನನಗೆ ಈ ಪರಮ ಸತ್ಯದ ಅರಿವುಂಟಾಗಿ ನಿತ್ಯ ತೃಪ್ತಿಯನ್ನು ಪಡೆದೆ.

ವ್ಯಾಖ್ಯಾನ : 
ಹೀಗೆ ಭರತ ವಂಶದ ಪಿತಾಮಹ ಭೀಷ್ಮರು ಭಗವಾನ್ ಶ್ರೀ ಕೃಷ್ಣನನ್ನು ಯುದ್ಧ ಭೂಮಿಯಲ್ಲಿ ಸ್ತುತಿಸಿದರು ಮತ್ತು ತಮ್ಮ ಕಾಯಾ ವಾಚಾ ಮನಸ್ಸನ್ನು ಮತ್ತು ಇಂದ್ರಿಯಗಳನ್ನು ಅವನ ಪವಿತ್ರ ಪಾದಗಳಲ್ಲಿ ಸಮರ್ಪಿಸಿದರು. ಸಮರ್ಪಣೆ ಅಪೂರ್ವ ಸಂದರ್ಭದಲ್ಲಿ ಭಗವಂತನ ಆಣತಿಯ ಮೇರೆಗೆ ಸಂಪೂರ್ಣ ನಿಃಶಬ್ಧತೆಯು ನೆಲೆಸಿತ್ತು. ಶ್ರೀಕೃಷ್ಣನ ಪರಮ ಭಕ್ತ, ಭೀಷ್ಮರ ಆತ್ಮ ಜ್ಯೋತಿಯು ಅವನ ಪವಿತ್ರ ಪಾದಗಳನ್ನು ಸೇರಿತು.

ಉಪಸಂಹಾರ 
ಶರಶಯ್ಯೆಯಲ್ಲಿ ಮಲಗಿದ ಭೀಷ್ಮಪಿತಾಮಹರು ವಿಷ್ಣುಸಹಸ್ರನಾಮದ ಮೂಲಕ ಅತ್ಯಂತ ಆದರ, ಶ್ರದ್ಧೆಯಿಂದ ಭಗವಂತನನ್ನು ಸ್ತುತಿಸಿದ್ದರು. ಭಕ್ತರಲ್ಲಿ ಇದರ ಕುರಿತು ಅತ್ಯಾದರವಿದೆ. ಭಾಗವತವನ್ನು ಓದುವವರು ಈ ಭೀಷ್ಮಸ್ತುತಿಯನ್ನು ಪದೇ-ಪದೇ ಓದುತ್ತಾರೆ. ಮಹಾಭಾರತದಲ್ಲಿ ಭೀಷ್ಮರಿಂದ ಮಾಡಲ್ಪಟ್ಟ ಸ್ತುತಿಯು "ಭೀಷ್ಮಸ್ತವರಾಜ" ಎಂಬ ಹೆಸರಿನಿಂದ ಖ್ಯಾತವಾಗಿದೆ. ಭಕ್ತರಾದವರಲ್ಲಿ ಇದರ ಕುರಿತು ಬಹಳ ಆದರವಿದೆ. ಈ ಸ್ತುತಿಗಳಲ್ಲಿ ಭಗವಂತನ ಪ್ರಭಾವ, ಲೀಲೆಗಳನ್ನು ಭೀಷ್ಮರು ಅಲೌಕಿಕವಾಗಿ ವರ್ಣಿಸಿರುವರು. ಭಕ್ತಜನರು ವಿಷ್ಣುಸಹಸ್ರನಾಮವನ್ನು ಅತ್ಯಂತ ಶ್ರದ್ಧೆಯಿಂದ ಪಠಿಸುತ್ತಾರೆ.

ಇಂತು ಭೀಷ್ಮ ಸ್ತವರಾಜ (ಸ್ತುತಿಯು) ಸಂಪೂರ್ಣವಾಯಿತು.
ಲೇಖನದ ಮೂಲಗಳು :
ಸಂಸ್ಕೃತ ಶ್ಲೋಕಗಳ ಮೂಲ : "ಭಾಗವತ ಮಹಾಪುರಾಣ - ಪ್ರಥಮ ಸ್ಕಂದ"
ಕನ್ನಡ ಶ್ಲೋಕಗಳ ಮೂಲ - ಬಿ.ಎಸ್.ಚಂದ್ರಶೇಖರ್ ಅವರ "ಸವಿಗನ್ನಡ ಸ್ತೋತ್ರಚಂದ್ರಿಕೆ", ಪ್ರಕಟಿಸಿದವರು - "ಕನ್ನಡ ಸ್ತೋತ್ರಚಂದ್ರ ಬಳಗ, ಬೆಂಗಳೂರು".
ವಿವರಣೆಯ ಮೂಲ : "ಭಾಗವತ ಮಹಾಪುರಾಣ - ಪ್ರಥಮ ಸ್ಕಂದ"
ವ್ಯಾಖ್ಯಾನಗಳ ಮೂಲ - "ಯು.ವಿ.ಶ್ರೀ ಭಾಷ್ಯ ಸಿಂಹಾಸನಮ್ ಪುರಿಸಾಯಿ ನಾಡಾರ್ ಶ್ರೀ.ಕೃಷ್ಣಮಾಚಾರಿಯರ್ ಸ್ವಾಮಿಯವರ ಭಾಷ್ಯವನ್ನು ಆಂಗ್ಲ ಭಾಷೆಗೆ ಶ್ರೀ ನೃಸಿಂಹ ಸೇವಾ ರಸಿಕನ್ ಒಪ್ಪಿಲಿಯಪ್ಪನ್ ಕೊಯಿಲ್ ಶ್ರೀ.ವರದಾಚಾರಿ ಶಡಕೋಪನ್ ಭಾಷಾಂತರಿಸಿರುವುದನ್ನು ಕನ್ನಡದಲ್ಲಿ ಭಾಷಾಂತರ - ಗುರುಪ್ರಸಾದ್ ಹಾಲ್ಕುರಿಕೆ.





Saturday, June 2, 2018

ದತ್ತಾತ್ರೇಯ ಸ್ತೋತ್ರಂ (ನಾರದ ಪುರಾಣ)




ದತ್ತಾತ್ರೇಯ ಸ್ತೋತ್ರಂ (ನಾರದ ಪುರಾಣ)


ಪ್ರಸ್ತಾವನೆ :

ದತ್ತಾತ್ರೇಯರು ತ್ರಿಮೂರ್ತಿಗಳಾದ ಬ್ರಹ್ಮ ವಿಷ್ಣು ಹಾಗೂ ಮಹೇಶ್ವರ ಮೂರೂ ದೇವರುಗಳ ಒಟ್ಟಾಗಿನ ಅವತಾರ. ಅತ್ರಿ ಮುನಿಗಳ ಪತ್ನಿಯಾದ ಮಾತೆ ಅನಸೂಯ ದೇವಿಯಿಂದಾಗಿ ದತ್ತಾತ್ರೆಯರು ಅವತಾರ ತಾಳಿದರು. ಒಂದು ಪೌರಾಣಿಕ ಹಿನ್ನೆಲೆಯ ಪ್ರಕಾರ ನಾರದ ಮುನಿಗಳು ಸರಸ್ವತಿ ಲಕ್ಷ್ಮಿ ಹಾಗೂ ಪಾರ್ವತಿಯರಿಗೆ ಸತಿ ಅನಸೂಯಾ ದೇವಿಯು ಅವರೆಲ್ಲರಿಗಿಂತ ಶ್ರೇಷ್ಠಳೆಂದು ತಿಳಿಸಿ ಅವರ ಮನಸ್ಸುಗಳನ್ನು ಕೆಡಿಸಿದರು. ಇದರಿಂದ ಅಸೂಯೆಗೊಂಡ ಮೂರೂ ದೇವಿಯರು ತಮ್ಮ ಪತಿಯರನ್ನು ಅನಸೂಯಳ ಬಳಿಗೆ ಕಳುಹಿಸಿದರು. ಅವರುಗಳು ಬಂದು ಸತಿ ಅನಸೂಯಳನ್ನು ವಿವಸ್ತ್ರಳಾಗಿ ತಮಗೆ ಭಿಕ್ಷೆ ನೀಡಬೇಕೆಂದು ಪ್ರಾರ್ಥಿಸಿದರು. ಆಗ ಅನಸೂಯಾ ದೇವಿಯು ಆ ಮೂವರನ್ನೂ ಸೇರಿಸಿ ಆಗತಾನೇ ಜನಿಸಿರುವ ಶಿಶುಗಳನ್ನಾಗಿ ಮಾಡಿದಳು. ಆ ಶಿಶುವೇ ದತ್ತಾತ್ರೇಯರು. ಮತ್ತೊಂದು ಕಥನದ ಪ್ರಕಾರ ವಿಶ್ವವನ್ನು ನಳಯಾನಿಯ ಶಾಪದಿಂದ ರಕ್ಷಿಸಲು ತ್ರಿಮೂರ್ತಿಗಳನ್ನು ಅನಸೂಯಳ ಬಳಿಗೆ ಹೋಗಲು ಒತ್ತಾಯ ಮಾಡಲಾಯಿತು. ಅದರಂತೆ ಅನಸೂಯಳು ತ್ರಿಮೂರ್ತಿಗಳನ್ನು ತನ್ನ ಶಿಶುವಾಗಬೇಕೆಂದು ಆಶಿಸಿದಳು. ಈ ಶಿಶುವೇ ದತ್ತಾತ್ರೇಯ (ವಿಷ್ಣು) ದೂರ್ವಾಸ (ಶಿವ ) ಹಾಗೂ ಚಂದ್ರ (ಬ್ರಹ್ಮ ) ಗಳ ಸಮಾಗಮ. ಈ ಮೂರೂ ಶಿಶುಗಳು ಅಳತೊಡಗಿದಾಗ ಅನಸೂಯಾ ದೇವಿಯು ಮೂರೂ ಶಿಶುಗಳನ್ನು ಒಮ್ಮೆಲೇ ಎತ್ತಿಕೊಂಡಳು, ಕೂಡಲೇ ಮೂರೂ ಶಿಶುಗಳು ಒಂದೇ ಶಿಶುವಾಗಿ ಮಾರ್ಪಟ್ಟವು. ಕರ್ನಾಟಕ ಹಾಗೂ ಮಹಾರಾಷ್ಟ್ರ ರಾಜ್ಯಗಳಲ್ಲಿ ಹೆಚ್ಚಾಗಿ ದತ್ತ ಪಂಥದವರು ದತ್ತಾತ್ರೇಯರನ್ನು ಆರಾಧಿಸುತ್ತಾರೆ. ದತ್ತಾತ್ರೇಯರನ್ನು ಧ್ಯಾನಮುದ್ರೆಯಲ್ಲಿ ವೇದಗಳನ್ನು ಪ್ರತಿನಿಧಿಸುವ ನಾಲ್ಕು ಶ್ವಾನಗಳ ಹಾಗೂ ದೇವಲೋಕದ ಕಾಮಧೇನುವು ಸುರಭಿಯಾಗಿ ಸುತ್ತುವರೆದಿರುವಂತೆ ತೋರಿಸಲಾಗಿದೆ.

ಶ್ಲೋಕ - 1 - ಸಂಸ್ಕೃತದಲ್ಲಿ : ಧ್ಯಾನಂ

ಜಟಾಧರಂ ಪಾಂಡುರಂಗಂ ಶೂಲಹಸ್ತಂ ಕೃಪಾನಿಧಿಂ
ಸರ್ವರೋಗಹರಂ ದೇವಂ ದತ್ತಾತ್ರೇಯಮಹಂ ಭಜೇ     
ಕನ್ನಡದಲ್ಲಿ : ಧ್ಯಾನ ಶ್ಲೋಕ

ಪಾಂಡುರಂಗ ಜಟಾಧರಗೆ ಶೂಲವಿಡಿದ ಕೃಪಾನಿಧಿಗೆ
ಸರ್ವರೋಗ ಕಳೆವ ಮಹಿಮಗೆ ನಮೋ ದತ್ತಾತ್ರೇಯಗೆ

ವಿವರಣೆ :

ಜಡೆಗಟ್ಟಿದ ಕೂದಲನ್ನುಳ್ಳ ಶ್ವೇತವರ್ಣದ ದಯಾಸಾಗರನಾದ ಮತ್ತು ಸರ್ವ ರೋಗಗಳನ್ನೂ ಗುಣಪಡಿಸುವ ದತ್ತಾತ್ರೇಯರಿಗೆ ನನ್ನ ನಮನಗಳು.

ನ್ಯಾಸಂ :

ಅಸ್ಯ ದತ್ತಾತ್ರೇಯ ಸ್ತೋತ್ರ ಮಂತ್ರಸ್ಯ ಭಗವಾನ್ ನಾರದ ಋಷಿಃ,
ಅನುಷ್ಟುಪ್ ಛಂದ, ಶ್ರೀ ದತ್ತ ಪರಮಾತ್ಮ ದೇವತ,
ಶ್ರೀದತ್ತ ಪ್ರೀತ್ಯರ್ಥೇ ಜಪೇ ವಿನಿಯೋಗಃ
ಕನ್ನಡದಲ್ಲಿ :

ದತ್ತಾತ್ರೇಯ ಸ್ತೋತ್ರಕ್ಕೆ ಸಂಬಂಧಿಸಿದ ಮುನಿಗಳು ದೇವರ್ಷಿ ನಾರದರು, ಇದು ಅನುಷ್ಟುಪ್ ಛಂದಸ್ಸಿನಲ್ಲಿ ರಚಿತವಾಗಿದ್ದು ಇದು ದತ್ತಾತ್ರೇಯ ದೇವರನ್ನು ಸಂಬೋಧಿಸಲಾಗಿದೆ ಹಾಗೂ ಈ ಸ್ತೋತ್ರವನ್ನು ದತ್ತಾತ್ರೇಯರನ್ನು ಸಂತುಷ್ಟಿಗೊಳಿಸಲು ಪ್ರಾರ್ಥಿಸಲಾಗಿದೆ.


ಶ್ಲೋಕ - 2 -  ಸಂಸ್ಕೃತದಲ್ಲಿ :

ಜಗದುತ್ಪತ್ತಿಕರ್ತ್ರೇ ಚ ಸ್ಥಿತಿಸಂಹಾರ ಹೇತವೇ
ಭವಪಾಶವಿಮುಕ್ತಾಯ ದತ್ತಾತ್ರೇಯ ನಮೋsಸ್ತುತೇ      
ಕನ್ನಡದಲ್ಲಿ :

ಜಗದುಗಮ ಕಾರಣಗೆ ಸ್ಥಿತಿಲಯಗಳ ಕರ್ತಗೆ
ಭವದ ಪಾಶ ಬಿಡಿಸುವವಗೆ ನಮೋ ದತ್ತಾತ್ರೇಯಗೆ

ವಿವರಣೆ :

ವಿಶ್ವವನ್ನು ಸೃಷ್ಟಿಸಿದ ದತ್ತಾತ್ರೇಯರಿಗೆ ನಮನಗಳು ಮತ್ತು ವಿಶ್ವದ ರಕ್ಷಣೆ ಹಾಗೂ ವಿನಾಶಕ್ಕೆ ಕಾರಣರು ಹಾಗೂ ಇವರು ಕರ್ಮ ಬಂಧನದಿಂದ ನಮ್ಮನ್ನು ಬಿಡುಗಡೆಗೊಳಿಸುವರು.

ಶ್ಲೋಕ - 3 - ಸಂಸ್ಕೃತದಲ್ಲಿ :

ಜರಾಜನ್ಮವಿನಾಶಾಯ ದೇಹಶುದ್ಧಿಕರಾಯ ಚ
ದಿಗಂಬರದಯಾಮೂರ್ತೇ ದತ್ತಾತ್ರೇಯ ನಮೋsಸ್ತುತೇ  
ಕನ್ನಡದಲ್ಲಿ :

ಹುಟ್ಟು ಮುಪ್ಪು ಮೆಟ್ಟುವವಗೆ ದೇಹಶುದ್ಧಿಗೈವಗೆ
ದಿಕ್ಕ ಹೊದ್ದ ದಯಾಮೂರ್ತಿ ನಮೋ ದತ್ತಾತ್ರೇಯಗೆ

ವಿವರಣೆ :

ವೃದ್ಧಾಪ್ಯ ಹಾಗೂ ಪುನರ್ಜನ್ಮಗಳನ್ನು ನಾಶಪಡಿಸುವ ದತ್ತಾತ್ರೇಯರಿಗೆ ವಂದನೆಗಳು ಹಾಗೂ ನಮ್ಮ ದೇಹವನ್ನು ಶುದ್ಧೀಕರಿಸುವ ಮತ್ತು ಕರುಣಾಮಯಿ ಹಾಗೂ ಇವರು ದಿಕ್ಕುಗಳನ್ನೇ ವಸ್ತ್ರಗಳನ್ನಾಗಿ ಧರಿಸಿರುವರು.

ಶ್ಲೋಕ - 4 - ಸಂಸ್ಕೃತದಲ್ಲಿ :

ಕರ್ಪೂರಕಾಂತಿದೇಹಾಯ ಬ್ರಹ್ಮಮೂರ್ತಿಧರಾಯ ಚ
ವೇದಶಾಸ್ತ್ರಪರಿಜ್ಞಾಯ ದತ್ತಾತ್ರೇಯ ನಮೋsಸ್ತುತೇ      
ಕನ್ನಡದಲ್ಲಿ :

ಕರ್ಪೂರದುರಿಯ ದೇಹಕಾಂತಿ ಬ್ರಹ್ಮಪಾತ್ರಧಾರಿಗೆ
ವೇದಶಾಸ್ತ್ರ ಪಾರಂಗತಗೆ ನಮೋ ದತ್ತಾತ್ರೇಯಗೆ

ವಿವರಣೆ :

ದೇಹವನ್ನೇ ಶುದ್ಧ ಕರ್ಪೂರದಂತೆ ಹೊಳೆಯುವಂತೆ ಇರುವ ದತ್ತಾತ್ರೇಯರಿಗೆ ನಮಸ್ಕಾರಗಳು, ಬ್ರಹ್ಮನ ರೂಪವನ್ನು ಹೊಂದಿರುವವರು, ವೇದ ಶಾಸ್ತ್ರಗಳಲ್ಲಿ ಪರಿಣತರು.

ಶ್ಲೋಕ - 5 - ಸಂಸ್ಕೃತದಲ್ಲಿ :

ಹ್ರಸ್ವದೀರ್ಘಕೃಶಸ್ಥೂಲ ನಾಮಗೋತ್ರ ವಿವರ್ಜಿತ
ಪಂಚಭೂತೈಕದೀಪ್ತಾಯ ದತ್ತಾತ್ರೇಯ ನಮೋsಸ್ತುತೇ   
ಕನ್ನಡದಲ್ಲಿ :

ಕಿರಿದು ಉದ್ದ ಸಪುರ ತೋರ ನಾಮ ಗೋತ್ರ ಮೀರಿದವಗೆ
ಪಂಚಭೂತ ಬೆಳಗುವನಿಗೆ ನಮೋ ದತ್ತಾತ್ರೇಯಗೆ

ವಿವರಣೆ :

ಹಿರಿದು, ಕಿರಿದುಗಳಿಂದ ಬಿಡುಗಡೆ ಹೊಂದಿರುವ ದತ್ತಾತ್ರೇಯರಿಗೆ ಸಹಸ್ರ ಪ್ರಣಾಮಗಳು, ಅಲ್ಲದೇ ಸಣ್ಣದು, ದೊಡ್ಡದು, ಹೆಸರು, ವಂಶ ಹಾಗೂ ಪ್ರಕಾಶಗಳಾದ ಪಂಚಭೂತಗಳಿಂದ ಬಿಡುಗಡೆಗೊಂಡಿರುವರು.

ಶ್ಲೋಕ - 6 - ಸಂಸ್ಕೃತದಲ್ಲಿ :

ಯಜ್ಞಭೋಕ್ತೇ ಚ ಯಜ್ಞಾಯ ಯಜ್ಞರೂಪಧರಾಯ ಚ
ಯಜ್ಞಪ್ರಿಯಾಯ ಸಿದ್ಧಾಯ ದತ್ತಾತ್ರೇಯ ನಮೋsಸ್ತುತೇ
ಕನ್ನಡದಲ್ಲಿ :

ಯಜ್ಞದ ಫಲ ಭೋಕ್ತೃಗೆ ಅಗ್ನಿ ಸ್ವರೂಪಿಗೆ
ಯಜ್ಞರೂಪಧರನಿಗೆ ನಮೋ ದತ್ತಾತ್ರೇಯಗೆ

ವಿವರಣೆ :

ಯಜ್ಞದ ಹವಿಸ್ಸನ್ನು ಸೇವಿಸುವ ಹಾಗೂ ತಾನೇ ಯಜ್ಞನಾಗಿರುವ ದತ್ತಾತ್ರೇಯರಿಗೆ ಪ್ರಣಾಮಗಳು, ಹಾಗೂ ಸ್ವತಃ ಯಜ್ಞರೂಪವನ್ನು ಹೊಂದುವ , ಯಜ್ಞವನ್ನು ಪ್ರೀತಿಸುವ ಮಹಾ ಋಷಿಗಳು ದತ್ತಾತ್ರೇಯರು.

ಶ್ಲೋಕ  - 7 - ಸಂಸ್ಕೃತದಲ್ಲಿ :

ಆದೌ ಬ್ರಹ್ಮಾ ಮಧ್ಯೇ ವಿಷ್ಣುರಂತೇ ದೇವಃ ಸದಾಶಿವಃ
ಮೂರ್ತಿತ್ರಯಸ್ವರೂಪಾಯ ದತ್ತಾತ್ರೇಯ ನಮೋsಸ್ತುತೇ
ಕನ್ನಡದಲ್ಲಿ :

ಮೊದಲು ಬ್ರಹ್ಮ ನಡುವೆ ವಿಷ್ಣು ಸದಾಶಿವನು ಕೊನೆಗೆ
ತ್ರಿಮೂರ್ತಿರೂಪ ಧರಿಸಿದವಗೆ ನಮೋ ದತ್ತಾತ್ರೇಯಗೆ

ವಿವರಣೆ :

ಪ್ರಾರಂಭದಲ್ಲಿ ಬ್ರಹ್ಮನುಮಧ್ಯದಲ್ಲಿ ವಿಷ್ಣುವು, ಹಾಗೂ ಕೊನೆಯಲ್ಲಿ ಸದಾಶಿವನು, ಉಳ್ಳ ಸುಂದರ ದೈವೀ ತ್ರಿಮೂರ್ತಿಗಳಿಂದ ಕೂಡಿದ ದತ್ತಾತ್ರೇಯರಿಗೆ ನನ್ನ ನಮನಗಳು.


ಶ್ಲೋಕ  - 8 - ಸಂಸ್ಕೃತದಲ್ಲಿ :

ಭೋಗಾಲಯಾಯ ಭೋಗಾಯ ಯೋಗಯೋಗ್ಯಾಯ ಧಾರಿಣೇ
ಜಿತೇಂದ್ರಿಯಜಿತಜ್ಞಾಯ ದತ್ತಾತ್ರೇಯ ನಮೋsಸ್ತುತೇ
ಕನ್ನಡದಲ್ಲಿ :

ಭೋಗದ ನೆಲೆ ತಾನೆ ಭೋಗ ಯೋಗವನ್ನೆ ಮೆರೆವ ಯೋಗ್ಯ
ಪರಮಜ್ಞಾನಿ ಜಿತೇಂದ್ರಿಯಗೆ ನಮೋ ದತ್ತಾತ್ರೇಯಗೆ

ವಿವರಣೆ :

ಆನಂದದ ಮಂದಿರಯಾರು ಆನಂದಿತರು, ಯಾರು ಯೋಗ ಪಟುವು, ಯಾರು ಇಂದ್ರಿಯಗಳನ್ನು ಜಯಿಸಿದ ಜ್ಞಾನಿಗಳೋಆ ದತ್ತಾತ್ರೇಯರಿಗೆ ಸಹಸ್ರ ಪ್ರಣಾಮಗಳು.

ಶ್ಲೋಕ  - 9 - ಸಂಸ್ಕೃತದಲ್ಲಿ :

ದಿಗಂಬರಾಯ ದಿವ್ಯಾಯ ದಿವ್ಯರೂಪಧರಾಯ ಚ
ಸದೋದಿತಪರಬ್ರಹ್ಮ ದತ್ತಾತ್ರೇಯ ನಮೋsಸ್ತುತೇ              
ಕನ್ನಡದಲ್ಲಿ :

ದಿಗಂಬರಗೆ ದಿವ್ಯನಿಗೆ ದಿವ್ಯರೂಪಧರನಿಗೆ
ಸತ್ಯ ಶುದ್ಧ ಪರಬ್ರಹ್ಮ ನಮೋ ದತ್ತಾತ್ರೇಯಗೆ

ವಿವರಣೆ :

ದಿಕ್ಕುಗಳನ್ನೇ ವಸ್ತ್ರವನ್ನಾಗಿ ಧರಿಸಿರುವ , ದೈವೀ ಶಕ್ತಿಯುಳ್ಳ , ಯಾರು ದೈವೀರೂಪವನ್ನು ಕೊಡಬಲ್ಲರೋ, ಯಾರು ಸದಾ ಉದಯಿಸುತ್ತಿರುವ ದೈವೀ ಬ್ರಹ್ಮಮ್, ಆ ಮಹಾಮಹಿಮರಾದ ದತ್ತಾತ್ರೇಯರಿಗೆ ನನ್ನ ನಮಸ್ಕಾರಗಳು.

ಶ್ಲೋಕ - 10 -  ಸಂಸ್ಕೃತದಲ್ಲಿ :

ಜಂಬೂದ್ವೀಪ ಮಹಾಕ್ಷೇತ್ರ ಮತಾಪುರನಿವಾಸಿನೇ
ಜಯಮಾನಸತಾಂ ದೇವ ದತ್ತಾತ್ರೇಯ ನಮೋsಸ್ತುತೇ
ಕನ್ನಡದಲ್ಲಿ :

ಜಂಬೂದ್ವೀಪ ಪುಣ್ಯತಾಣ ಮತಾಪುರ ನಿವಾಸಿಗೆ
ಜಯವು ಮನದೊಳಿರುವ ದೇವ ನಮೋ ದತ್ತಾತ್ರೇಯಗೆ

ವಿವರಣೆ :

ಜಂಬೂದ್ವೀಪದ ಮಾತಾಪುರ ನಿವಾಸಿಯಾದ ದತ್ತಾತ್ರೇಯರಿಗೆ ನಮನಗಳು ಹಾಗೂ ಮನಸ್ಸುಗಳ ದೈವವಾದ ದತ್ತಮಹಾರಾಜರಿಗೆ ಜಯವಾಗಲಿ.

ಶ್ಲೋಕ - 11 - ಸಂಸ್ಕೃತದಲ್ಲಿ :

ಭಿಕ್ಷಾಟನಂ ಗೃಹೇ ಗ್ರಾಮೇ ಪಾತ್ರಂ ಹೇಮಮಯಂ ಕರೇ
ನಾನಾಸ್ವಾದಮಯೀ ಭಿಕ್ಷಾ ದತ್ತಾತ್ರೇಯ ನಮೋsಸ್ತುತೇ
ಕನ್ನಡದಲ್ಲಿ :

ಹಳ್ಳಿಮನೆಗಳಲ್ಲಿ ತಿರುಪೆ ಹೇಮಪಾತ್ರೆ ಕರದೊಳು
ಎಲ್ಲ ಸ್ವಾದವುಳ್ಳ ಭಿಕ್ಷೆ ನಮೋ ದತ್ತಾತ್ರೇಯಗೆ

ವಿವರಣೆ :

ಹಳ್ಳಿಗಳಲ್ಲಿನ ಮನೆಗಳಿಂದ ಅನೇಕ ವಿಧದ ರುಚಿಗಳುಳ್ಳ ಭಿಕ್ಷೆಯನ್ನು ಬಂಗಾರದ ಪಾತ್ರೆಯಲ್ಲಿ ಪಡೆದುಕೊಂಡ ದತ್ತಾತ್ರೇಯರಿಗೆ ನಮನಗಳು.

ಶ್ಲೋಕ - 12 -  ಸಂಸ್ಕೃತದಲ್ಲಿ :

ಬ್ರಹ್ಮಜ್ಞಾನಮಯೀ ಮುದ್ರಾ ವಸ್ತ್ರೇ ಚಾಕಾಶಭೂತಲೇ
ಪ್ರಜ್ಞಾನಘನಬೋಧಾಯ ದತ್ತಾತ್ರೇಯ ನಮೋsಸ್ತುತೇ   
ಕನ್ನಡದಲ್ಲಿ :

ಬ್ರಹ್ಮಜ್ಞಾನವೆ ಮುದ್ರೆ ಬುವಿಯು ಗಗನ ವಸ್ತ್ರ
ಜ್ಞಾನವೆ ಘನವಾದವಗೆ ನಮೋ ದತ್ತಾತ್ರೇಯಗೆ

ವಿವರಣೆ :

ಬ್ರಹ್ಮಜ್ಞಾನ ಮುದ್ರೆಯನ್ನು ಪ್ರಕಟಿಸುವ , ಹಾಗೂ ಯಾರ ವಸ್ತ್ರವು ಭೂಮಿ ಮತ್ತು ಆಕಾಶವೇ ಆಗಿದೆಯೋ , ಯಾರು ಪರಿಶುದ್ಧವಾದ ಜ್ಞಾನವನ್ನು ಮಾತ್ರ ಬೋಧಿಸುವರೋ, ಆ ದತ್ತಮಹಾರಾಜರಿಗೆ ಅನಂತಾನಂತ ವಂದನೆಗಳು.

ಶ್ಲೋಕ - 13 -  ಸಂಸ್ಕೃತದಲ್ಲಿ :

ಅವಧೂತ ಸದಾನಂದ ಪರಬ್ರಹ್ಮಸ್ವರೂಪಿಣೇ
ವಿದೇಹದೇಹರೂಪಾಯ ದತ್ತಾತ್ರೇಯ ನಮೋsಸ್ತುತೇ   
ಕನ್ನಡದಲ್ಲಿ :

ಅವಧೂತ ಸದಾನಂದಗೆ ಪರಬ್ರಹ್ಮ ಸ್ವರೂಪಿಗೆ
ದೇಹರಹಿತ ರೂಪಗೆ ನಮೋ ದತ್ತಾತ್ರೇಯಗೆ

ವಿವರಣೆ :

ಯಾರು ಅವಧೂತನೋ, ಯಾರಿಗೆ ದಿವ್ಯ ಬ್ರಹ್ಮನ ರೂಪವಿರುವುದೋ, ಮತ್ತು ಶರೀರ ರಹಿತ ಶರೀರ ರೂಪವಿರುವುದೋ, ಆ ದತ್ತಾತ್ರೇಯರಿಗೆ ನಮನಗಳು.

ಶ್ಲೋಕ - 14 - ಸಂಸ್ಕೃತದಲ್ಲಿ :

ಸತ್ಯರೂಪ ಸದಾಚಾರ ಸತ್ಯಧರ್ಮಪರಾಯಣ
ಸತ್ಯಾಶ್ರಯಪರೋಕ್ಷಾಯ ದತ್ತಾತ್ರೇಯ ನಮೋsಸ್ತುತೇ  
ಕನ್ನಡದಲ್ಲಿ :

ಸತ್ಯರೂಪ ಸದಾಚಾರ ಸತ್ಯಧರ್ಮ ಪರಾಯಣಗೆ
ಸತ್ಯದಿ ನೆಲೆನಿಂತವನಿಗೆ ನಮೋ ದತ್ತಾತ್ರೇಯಗೆ

ವಿವರಣೆ :

ಯಾರಿಗೆ ಸತ್ಯ ರೂಪವಿರುವುದೋ, ಯಾರು ಒಳ್ಳೆಯ ವರ್ತನೆಯನ್ನೇ ಅನುಸರಿಸುವರೋ, ಯಾರು ನೈಜ ಧರ್ಮದ ಶಕ್ತಿಯುತ ಅನುಯಾಯಿಗಳೋ , ಮತ್ತು  ಸಾಮಾನ್ಯವಾಗಿ ಯಾವಾಗಲೂ ಸತ್ಯವನ್ನೇ ಅವಲಂಬಿಸಿರುತ್ತಾರೋ, ಆ ದತ್ತಾತ್ರೇಯರಿಗೆ ನಮಸ್ಕಾರಗಳು.

ಶ್ಲೋಕ - 15 -  ಸಂಸ್ಕೃತದಲ್ಲಿ :

ಶೂಲಹಸ್ತಗದಾಪಾಣೇ ವನಮಾಲಾಸುಕಂಧರ
ಯಜ್ಞಸೂತ್ರಧರಬ್ರಹ್ಮನ್ ದತ್ತಾತ್ರೇಯ ನಮೋsಸ್ತುತೇ
ಕನ್ನಡದಲ್ಲಿ :

ಕರದಿ ಶೂಲ ಗದೆಯ ಪಿಡಿದು ಮಗಮಗಿಪ ಮಾಲೆ ತೊಟ್ಟವಗೆ
ಯಜ್ಞಸೂತ್ರಧಾರನಿಗೆ ನಮೋ ದತ್ತಾತ್ರೇಯಗೆ

ವಿವರಣೆ :

ಯಾರು ತಮ್ಮ ಹಸ್ತಗಳಲ್ಲಿ ಗದೆ ಹಾಗೂ ಶೂಲಗಳನ್ನು ಹಿಡಿದುಕೊಂಡಿರುವರೋ, ಯಾರು ಕಾಡಿನ ಸುವಾಸನಾಭರಿತ ಪುಷ್ಪಮಾಲೆಯನ್ನು ಧರಿಸಿರುವರೋ, ಮತ್ತು ಯಾರು ಬ್ರಹ್ಮ ಯಜ್ಞವನ್ನು ಸಂಘಟಿಸುತ್ತಾರೋ, ಆ ದತ್ತಮಹಾರಾಜರಿಗೆ ಪ್ರಣಾಮಗಳು.

ಶ್ಲೋಕ  - 16 - ಸಂಸ್ಕೃತದಲ್ಲಿ :

ದತ್ತ ವಿದ್ಯಾಢ್ಯ ಲಕ್ಷ್ಮೀಶ ದತ್ತಸ್ವಾತ್ಮಸ್ವರೂಪಿಣೇ
ಗುಣನಿರ್ಗುಣರೂಪಾಯ ದತ್ತಾತ್ರೇಯ ನಮೋsಸ್ತುತೇ    
ಕನ್ನಡದಲ್ಲಿ :

ವಿದ್ಯಾನಿಧಿಗೆ ಲಕುಮಿಪತಿಗೆ ದತ್ತನಾತ್ಮ ರೂಪಗೆ
ಗುಣ ನಿರ್ಗುಣ ರೂಪನಿಗೆ ನಮೋ ದತ್ತಾತ್ರೇಯಗೆ

ವಿವರಣೆ :

ಯಾರು ಜ್ಞಾನವನ್ನು ಕರುಣಿಸುತ್ತಾರೋ ಯಾರು ಲಕ್ಷ್ಮಿಯ ಪತಿಯೋ ಯಾರು ಸ್ವಯಂ ಆತ್ಮಸ್ವರೂಪಿಯೋ ಯಾರು ಗುಣಗಳ ಹಾಗೂ ಗುಣರಹಿತ ಆಕಾರವನ್ನು ಹೊಂದಿರುವರೋ ಆ ದತ್ತಾತ್ರೇಯರಿಗೆ ಪ್ರಣಾಮಗಳು.

ಶ್ಲೋಕ  - 17 - ಸಂಸ್ಕೃತದಲ್ಲಿ : ಫಲಶ್ರುತಿ :

ಶತ್ರುನಾಶಕರಂ ಸ್ತೋತ್ರಂ ಜ್ಞಾನವಿಜ್ಞಾದಾಯಕಂ
ಸರ್ವಪಾಪಂ ಶಮಂ ಯಾತಿ ದತ್ತಾತ್ರೇಯ ನಮೋsಸ್ತುತೇ
ಕನ್ನಡದಲ್ಲಿ :

ಶತ್ರುನಾಶಕವೀ ಸ್ತೋತ್ರ ಜ್ಞಾನ ವಿಜ್ಞಾನ ದಾಯಕ
ಎಲ್ಲ ಪಾಪ ನೀಗುವುದಿದು ನಮೋ ದತ್ತಾತ್ರೇಯಗೆ

ವಿವರಣೆ :

ಈ ಸ್ತೋತ್ರ ಪಾರಾಯಣವು ಶತ್ರು ನಾಶವನ್ನು ಮಾಡುತ್ತದೆ, ಧಾರ್ಮಿಕ ಮತ್ತು ವೈಜ್ಞಾನಿಕ ವಿವೇಚನೆಯನ್ನು ನೀಡುತ್ತದೆ, ಮತ್ತು ಎಲ್ಲ ಪಾಪಗಳನ್ನು ಪರಿಹರಿಸುತ್ತದೆ. ಆ ದತ್ತಾತ್ರೇಯರಿಗೆ ಸಹಸ್ರ ನಮನಗಳು.


ಲೇಖನದ ಮೂಲ :
ಸಂಸ್ಕೃತ ಶ್ಲೋಕಗಳು  - celextel.org
ಕನ್ನಡ ಶ್ಲೋಕಗಳು ಶ್ರೀ.ಬಿ.ಎಸ್.ಚಂದ್ರಶೇಖರ್ ಅವರ  “ಸವಿಗನ್ನಡ ಸ್ತೋತ್ರಚಂದ್ರಿಕೆ”
ವಿವರಗಳು - ಆಂಗ್ಲಭಾಷೆಯಲ್ಲಿbhakti.in ಭಾವಾರ್ಥವನ್ನು ಕನ್ನಡದಲ್ಲಿ ಪ್ರಸ್ತುತಪಡಿಸಿದವರು - ಗುರುಪ್ರಸಾದ್ ಹಾಲ್ಕುರಿಕೆ.
ವೀಡಿಯೋ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ : - https://youtu.be/NZu74p8gEEY





ದಾರಿದ್ರ್ಯ ದಹನ ಶಿವಸ್ತೋತ್ರ

https://savigannadastotra.blogspot.com/2018/10/blog-post.html ದಾರಿದ್ರ್ಯ ದಹನ ಶಿವಸ್ತೋತ್ರ ಪ್ರಸ್ತಾವನೆ : ಸಂಸ್ಕ...